ಸಹೋದರಿ ನಂಬರ್ ಕೇಳಿದ್ದಕ್ಕೆ ಯುವಕನನ್ನು ಶೂಟ್ ಮಾಡಿದ ಸಹೋದರ

Public TV
2 Min Read

– 4 ಮಂದಿ ಸ್ನೇಹಿತರ ಜೊತೆ ಸೇರಿ ಸ್ಕೆಚ್ ಹಾಕಿ ಕೊಲೆಗೈದ

ಲಕ್ನೋ: ಯುವತಿಯೋರ್ವಳನ್ನು ಯುವಕನೋರ್ವ ಇಷ್ಟಪಟ್ಟು, ಆಕೆಯ ಫೋನ್ ನಂಬರ್ ಕೇಳಿದ್ದಕ್ಕೆ ಆಕೆಯ ಸಹೋದರ ಆತನನ್ನು ಗುಂಡಿಕ್ಕಿ ಕೊಂದ ಘಟನೆ ನೋಯ್ಡಾದಲ್ಲಿ ನಡೆದಿದೆ.

ನೋಯ್ಡಾದ ಬಾದಲ್‍ಪುರದ ಧೂಮ್ ಮಾನಿಕ್‍ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಧೂಮ್ ಮಾನಿಕ್‍ಪುರ ಗ್ರಾಮದ ಪ್ರಶಾಂತ್(20) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಇದೇ ಗ್ರಾಮದ ಅಂಕಿತ್ ಬಂಧಿತ ಆರೋಪಿಯಾಗಿದ್ದಾನೆ. ಕೆಲ ತಿಂಗಳ ಹಿಂದೆ ಅಂಕಿತ್‍ನ ಸಹೋದರಿಯನ್ನು ಪ್ರಶಾಂತ್ ಇಷ್ಟಪಡುತ್ತಿದ್ದನು. ಹೀಗಾಗಿ ಆಕೆಯ ಬಳಿ ಫೋನ್ ನಂಬರ್ ಕೇಳಿದ್ದನು. ಆದರೆ ಈ ಬಗ್ಗೆ ತಿಳಿದ ಅಂಕಿತ್ ಸಿಟ್ಟಿಗೆದ್ದು ಪ್ರಶಾಂತ್ ಬಳಿ ಜಗಳ ಮಾಡಿದ್ದನು. ಹೀಗಾಗಿ ಪ್ರಶಾಂತ್ ಮೇಲಿದ್ದ ಕೋಪಕ್ಕೆ ಆತನನ್ನು ಅಂಕಿತ್ ತನ್ನ ಸ್ನೇಹಿತರಾದ ಅರುಣ್, ಲೋಕೇಶ್, ಮನೀಶ್, ದುಶ್ಯಂತ್ ಜೊತೆ ಸೇರಿ ಕೊಲೆ ಮಾಡಿದ್ದಾನೆ.

ಸೋಮವಾರ ಪ್ರಶಾಂತ್ ಮನೆಯಲಿದ್ದ ವೇಳೆ ಅಂಕಿತ್ ಕರೆ ಮಾಡಿ ಭೇಟಿ ಆಗುವಂತೆ ಹೇಳಿದನು. ಆದರೆ ಮೊದಲು ಒಪ್ಪದ ಪ್ರಶಾಂತ್ ಬಳಿಕ ಭೇಟಿಯಾಗಲು ಒಪ್ಪಿದನು. ಯಾವಾಗ ಪ್ರಶಾಂತ್ ಭೇಟಿ ಮಾಡಲು ಒಪ್ಪಿದನೋ ಆಗಲೇ ಅಂಕಿತ್ ಆತನ್ನನು ಕೊಲೆ ಮಾಡಲು ಸ್ಕೆಚ್ ಹಾಕಿದ್ದನು. ತನ್ನ ಪಕ್ಕದ ಮನೆಯಲ್ಲಿ ಭೇಟಿ ಆಗುವಂತೆ ಹೇಳಿ, ಪ್ರಶಾಂತ್ ಮನೆಗೆ ಬಂದಾದ ಆತನ ಮೇಲೆ ಅಂಕಿತ್ ಗುಂಡು ಹಾರಿಸಿ ಕೊಲೆ ಮಾಡಿದನು.

ಈ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪ್ರಶಾಂತ್ ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ದುರಾದೃಷ್ಟವಶಾತ್ ಪ್ರಶಾಂತ್ ಸಾವನ್ನಪ್ಪಿದ್ದನು. ಬಳಿಕ ಈ ಬಗ್ಗೆ ಯುವಕನ ತಂದೆ ಪೊಲೀಸರಿಗೆ ದೂರು ನೀಡಿದ್ದು, ಅಂಕಿತ್ ಹಾಗೂ ಆತನ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 302, 147 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಚಾರಣೆ ವೇಳೆ ಪ್ರಶಾಂತ್‍ನನ್ನು ಯಾಕೆ ಕೊಲೆ ಮಾಡಿದ್ದು ಎನ್ನುವ ಕಾರಣವನ್ನು ಅಂಕಿತ್ ಬಾಯಿಬಿಟ್ಟಿದ್ದಾನೆ. ನನ್ನ ಸಹೋದರಿಯನ್ನು ಆತ ಇಷ್ಟಪಟ್ಟಿದ್ದ, ಆಕೆಯ ಫೋನ್ ನಂಬರ್ ಕೇಳಿದ್ದ, ಅದಕ್ಕೆ ಆತನನ್ನು ನಾನು ಕೊಲೆ ಮಾಡಿದೆ ಎಂದು ಅಂಕಿತ್ ಪೊಲೀಸರಿಗೆ ಹೇಳಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *