ಗ್ಯಾಸ್ ಅಭಾವ – ಆಟೋ ಚಾಲಕರಿಗೆ ಸಣ್ಣಪುಟ್ಟ ಸಮಸ್ಯೆಯಾಗಿದೆ, ಮೋದಿ ದೊಡ್ಡ ಡ್ಯಾಮೇಜ್‌ ತಪ್ಪಿಸಿದ್ದಾರೆ: ಹೆಚ್‌ಡಿಕೆ

2 Min Read
  • ಕಾಂಗ್ರೆಸ್‌ನವರಿಗೆ ಅಭಿವೃದ್ಧಿ ಪದದ ಅರ್ಥ ಗೊತ್ತಿಲ್ಲ

ದಾವಣಗೆರೆ: ಗ್ಯಾಸ್‌ (LPG) ಅಭಾವದಿಂದ ಆಟೋ ಚಾಲಕರಿಗೆ ಸಣ್ಣಪುಟ್ಟ ಸಮಸ್ಯೆಯಾಗಿದೆ. ಮೋದಿಯವರು ದೊಡ್ಡ ಡ್ಯಾಮೇಜ್ ತಪ್ಪಿಸಿದ್ದಾರೆ. ಈ ವಿಚಾರ ಇಟ್ಕೊಂಡು ಕಾಂಗ್ರೆಸ್‌ನವರು ಅಟ್ಯಾಕ್ ಮಾಡ್ತಾ ಇದ್ದಾರೆ. ಇವರ ಸರ್ಕಾರ ಇದ್ದಿದ್ದರೆ ಏನು ಮಾಡುತ್ತಿದ್ದರು ಹೇಳಲಿ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿಯವರು (H.D Kumaraswamy) ಕಾಂಗ್ರೆಸ್‌ (Congress) ವಿರುದ್ಧ ವಾಗ್ದಾಳಿ ನಡೆಸಿದರು.

ದಾವಣಗೆರೆಯಲ್ಲಿ (Davanagere) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಇಂತಹ ಕ್ಲಿಷ್ಟಕರ ಪರಿಸ್ಥಿತಿ ಇದ್ದಾಗಲೂ ದೊಡ್ಡ ಸಮಸ್ಯೆ ಆಗಿಲ್ಲ. ಬೇರೆ ದೇಶದ ಜೊತೆ ಮೋದಿಯವರ ಬಾಂಧವ್ಯದಿಂದ ದೊಡ್ಡ ಡ್ಯಾಮೇಜ್ ತಪ್ಪಿಸಿದ್ದಾರೆ ಎಂದರು. ಇದನ್ನೂ ಓದಿ: ಆಟೋ ಚಾಲಕರಿಗೆ ಸರ್ಕಾರ ಮಾಸಿಕ 15 ಸಾವಿರ ನೀಡಿ 6ನೇ ಗ್ಯಾರಂಟಿ ಘೋಷಣೆ ಮಾಡಬೇಕು: ಹೆಚ್‌ಡಿಕೆ

ಉಪಚುನಾವಣೆಯ ವರದಿಗಳನ್ನು ನೋಡುತ್ತಿದ್ದೇನೆ. ಜನ ಈ ಸರ್ಕಾರದ ಕೆಲಸ ನೋಡಿ ವೋಟ್ ಹಾಕಬೇಕೋ? ಇವ್ರು ಹರಿಸೋ ಹಣದ ಹೊಳೆ ನೋಡಿ ವೋಟ್ ಹಾಕ್ಬೇಕೋ ಎಂದು ಯೋಚಿಸಲಿ. ಇವರು ಯಾರಪ್ಪನ ಮನೆಯಿಂದ ಗ್ಯಾರಂಟಿ ಕೊಡ್ತಾ ಇದ್ದಾರೆ? ತೆರಿಗೆ ಮೇಲೆ ತೆರಿಗೆ ಹಾಕಿ ಕೊಡ್ತಾ ಇದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ರಾಜ್ಯ ತಲಾ ಆದಾಯದಲ್ಲಿ 2ನೇ ಸ್ಥಾನದಲ್ಲಿದೆ. ಕೇಂದ್ರಕ್ಕಿಂತ ನಮ್ಮದು ಅತ್ಯುತ್ತಮ ಬಜೆಟ್ ಎಂದು ಸಿಎಂ ಹೇಳಿದ್ದಾರೆ. ತಲಾ ಆದಾಯ ಚೆನ್ನಾಗಿದ್ದರೆ ರಾಜ್ಯ ಸಂಪದ್ಭರಿತವಾಗಿದೆ ಎಂದರ್ಥ. ಎಂದರೆ ಜನ ಆರ್ಥಿಕವಾಗಿ ಚೆನ್ನಾಗಿದ್ದಾರೆ. ಆರ್ಥಿಕವಾಗಿ ಚೆನ್ನಾಗಿದ್ದರೆ ಗ್ಯಾರಂಟಿ ಏಕೆ ಕೊಡ್ತಾ ಇದ್ದಾರೆ? ಇವರಿಗೆ ಅಭಿವೃದ್ಧಿ ಪದದ ಅರ್ಥ ಗೊತ್ತಿಲ್ಲ. ಗ್ಯಾರಂಟಿಗೆ ತಕರಾರು ಏನಿಲ್ಲ, ಆದರೆ ಅಭಿವೃದ್ದಿ ಮಾಡೋಕೆ ಸರ್ಕಾರದ ಕೈಯಲ್ಲಿ ಆಗ್ತಿಲ್ಲ ಎಂದು ಕಿಡಿಕಾರಿದರು.

ಐಪಿಎಲ್ ಟಿಕೆಟ್ ವಿಚಾರದಲ್ಲಿ ಸರ್ಕಾರ ನಗೆಪಾಟಲು ಮಾಡಿಕೊಂಡಿದೆ. ಡಿಸಿಎಂ ಇಂದ ಹಿಡಿದು ಎಲ್ಲರೂ ನಗೆಪಾಟಲಿಗೀಡಾಗಿದ್ದಾರೆ. ಬ್ಲಾಕ್ & ವೈಟ್ ಟಿವಿಯಲ್ಲಿ ಕ್ರಿಕೆಟ್ ನೋಡ್ತಾ ಇದ್ದೆವು. ಆಗ ಶಾಸಕರ ಭವನಕ್ಕೆ ಬಂದು ಶಾಸಕರಿಗೆ ಪಾಸ್ ಕೊಡೋರು. ಮಂತ್ರಿಗಳಿಗೆ ಎರಡು ಪಾಸ್ ಕೊಡ್ತಿದ್ರು. ವಿಧಾನಸಭೆಯಲ್ಲಿ ಈ ಬಗ್ಗೆ ದೊಡ್ಡ ಚರ್ಚೆ ಮಾಡಿದ್ದಾರೆ. ಇವರಿಗೆ ಕಿಂಚಿತ್ತು ಮಾನ ಮಾರ್ಯದೆ ಇದೆಯೇ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಗ್ಯಾಸ್‌ ಸಮಸ್ಯೆ – ನಮ್ಮ ಕೈಯಲ್ಲಿ ಏನೂ ಇಲ್ಲ, ಕೇಂದ್ರ ಮುನ್ನೆಚ್ಚರಿಕೆ ವಹಿಸಬೇಕಿತ್ತು: ಡಿಕೆಶಿ

Share This Article