ಬೆಳಗಾವಿ: ಒಂದೇ ಹಗ್ಗಕ್ಕೆ ನೇಣು ಬಿಗಿದುಕೊ0ಡು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ನಡೆದಿದೆ.
ಈರಣ್ಣ ಸಾಲಿಮನಿ ಹಾಗೂ ಶ್ವೇತಾ ಕುಂಬಾರ ಆತ್ಮಹತ್ಯೆ ಶರಣಾದ ಪ್ರೇಮಿಗಳು. ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹಗಳನ್ನು ಕೆಳಗಿಳಿಸಿ, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಮೃತ ಈರಣ್ಣ ಸಾಲಿಮನಿಯ ತಾಯಿ ಮಾತನಾಡಿ, ನನಗೆ ಏನೂ ಗೊತ್ತಿಲ್ಲ. ಮಗ ಈರಣ್ಣ ಒಂದು ವರ್ಷದಿಂದ ಕೆಎಲ್ಇ ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲದೇ ಬೆಳಗ್ಗೆ ನನಗೆ ಯಲ್ಲಮ್ಮನ ದೇವಾಲಯಕ್ಕೆ ಹೋಗಲು ದುಡ್ಡು ಕೊಟ್ಟು ಕಳುಹಿಸಿದ್ದ. ಮಧ್ಯಾಹ್ನ ಮನೆಗೆ ಬಂದು ಬಾಗಿಲು ಬಡಿದಾಗ ತೆಗೆಯಲಿಲ್ಲ. ನೀರು ತೆಗೆದುಕೊಳ್ಳಲು ಕಿಟಿಕಿ ತೆಗೆದಾಗ ಇಬ್ಬರು ನೇಣು ಹಾಕಿಕೊಂಡಿದ್ದು ಗೊತ್ತಾಯಿತು. ಅವರು ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಕುರಿತು ನನಗೆ ಏನೂ ಗೊತ್ತಿಲ್ಲ. ನಮಗೆ ಹುಡುಗಿಯ ಹೆಸರು ಸಹ ಗೊತ್ತಿಲ್ಲ. ಅಲ್ಲದೇ ಇಬ್ಬರೂ ಒಂದೇ ಪಂಗಡದವರಾಗಿದ್ದೆವು. ಒಂದು ವೇಳೆ ಪ್ರೀತಿಸುತ್ತಿದ್ದ ವಿಚಾರವನ್ನು ತಿಳಿಸಿದ್ದರೆ ನಾವೇ ಮುಂದೆ ನಿಂತು ಮದುವೆ ಮಾಡಿಕೊಡುತ್ತಿದ್ದವೆಂದು ಕಣ್ಣೀರು ಸುರಿಸಿದ್ದಾರೆ.
ಪೊಲೀಸರ ತನಿಖೆಯಿಂದ ಪ್ರೇಮಿಗಳ ಆತ್ಮಹತ್ಯೆಗೆ ನಿಖರ ಕಾರಣ ತಿಳಿಯಬೇಕಾಗಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv