ದೇವಸ್ಥಾನದ ಬಳಿ ಪ್ರೇಮಿಗಳು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ

Public TV
1 Min Read

ರಾಯಚೂರು: ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಲಿಂಗಸಗೂರಿನ ಗುರಗುಂಟಾ ಅಮರೇಶ್ವರದಲ್ಲಿ ನಡೆದಿದೆ.

ಮೃತರನ್ನ ಅಮರೇಶ್ (21) ಹಾಗೂ ಭಾಗ್ಯಶ್ರೀ (16) ಎಂದು ಗುರುತಿಸಲಾಗಿದೆ. ಇಬ್ಬರು ಪ್ರೇಮಿಗಳು ಯಾದಗಿರಿ ಜಿಲ್ಲೆಯ ಸಗರ ಗ್ರಾಮದವರಾಗಿದ್ದು, ಇವರ ಪ್ರೀತಿಗೆ ಹುಡುಗಿ ಮನೆಯಲ್ಲಿ ವಿರೋಧವಿದ್ದರಿಂದ ಇಬ್ಬರೂ ಗ್ರಾಮದಿಂದ ಓಡಿ ಬಂದಿದ್ದರು. ಈ ಹಿನ್ನೆಲೆಯಲ್ಲಿ ಹುಡುಗಿ ಮನೆಯವರು ಅಮರೇಶ್ ವಿರುದ್ಧ ಶಹಪುರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು. ಬುಧವಾರ ಯುವತಿಯ ಕಡೆಯವರು ದೇವಸ್ಥಾನದ ಬಳಿ ಇಬ್ಬರನ್ನು ಹುಡುಕಿ ಹೋಗಿದ್ದಾರೆ. ಆದರೆ ಬುಧವಾರ ರಾತ್ರಿಯೇ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬುಧವಾರ ಅಮರೇಶ್ವರ ದೇವಸ್ಥಾನಕ್ಕೆ ಬಂದಿದ್ದ ಪ್ರೇಮಿಗಳು, ದೇವರ ದರ್ಶನ ಪಡೆದು ಬಳಿಕ ದೇವಾಲಯದ ಪಕ್ಕದ ಗುಡ್ಡ ಪ್ರದೇಶಕ್ಕೆ ಹೋಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕ್ರಿಮಿನಾಶಕದ ಬಾಟಲ್ ಪಕ್ಕದಲ್ಲೆ ಬಿದ್ದಿದ್ದು, ಇಬ್ಬರ ಬಾಯಲ್ಲೂ ನೊರೆ ಕಾಣಿಸಿಕೊಂಡಿದೆ.

ಇಂದು ಮುಂಜಾನೆ ಸ್ಥಳೀಯರು ಗುಡ್ಡ ಪ್ರದೇಶಕ್ಕೆ ಹೋದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಸ್ಥಳೀಯರೇ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಲಿಂಗಸುಗೂರು ಠಾಣೆ ಮತ್ತು ಹಾಗೂ ಯಾದಗಿರಿಯ ಶಹಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *