-ಇದೊಂದು ಚಿಕ್ಕಪ್ಪ-ಮಗಳ ಲವ್ ಸ್ಟೋರಿ
ಹಾಸನ: ಪರಸ್ಪರ ಪ್ರೀತಿಸಿ ಓಡಿ ಹೋಗಿದ್ದ ಪ್ರೇಮಿಗಳಿಬ್ಬರು, ಮರಳಿ ಊರಿಗೆ ಬಂದು ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಮಡಬಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಯನಾ ಮತ್ತು ಅಶೋಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಜೋಡಿಗಳಿಬ್ಬರು ಪರಾರಿಯಾಗಲು ಪ್ರೇರಪಣೆ ನೀಡಿದವರೇ, ಅವರನ್ನು ಕೊಲೆ ಮಾಡಿದ್ದಾರೆ ಎಂದು ನಯನಾ ಮನೆಯವರು ಗಂಭೀರ ಆರೋಪ ಮಾಡಿದ್ದಾರೆ.
ಅಶೋಕ್ ಮತ್ತು ನಯನಾ ಸಂಬಂಧದಲ್ಲಿ ಚಿಕ್ಕಪ್ಪ-ಮಗಳಾಗಬೇಕು. ಅಷ್ಟೇ ಅಲ್ಲದೇ ನಯನಾಗೆ ಇನ್ನೂ 18 ವರ್ಷ ತುಂಬಿರಲಿಲ್ಲ. ನಯನಾ ಪಿಯುಸಿ ಓದುತ್ತಿದ್ದಳು. ಎಸ್ಎಸ್ಎಲ್ ಸಿ ಫೇಲಾಗಿ ಆಟೋ ಓಡಿಸಿಕೊಂಡಿದ್ದ ಅಶೋಕನನ್ನು ಪ್ರೀತಿಸುತ್ತಿದ್ದಳು. ಈ ನಡುವೆ ನಯನಾಳನ್ನು ಆಕೆಯ ಸೋದರ ಮಾವನೊಂದಿಗೆ ಮದುವೆ ಮಾಡಲು ಮನೆಯವರು ಸಿದ್ಧತೆ ಮಾಡಿಕೊಂಡಿದ್ದರು. ಇದಕ್ಕಾಗಿ ಒಡವೆಯನ್ನೂ ತಂದಿದ್ದರು.
ಈ ವಿಷಯವನ್ನು ನಯನಾ ಅಶೋಕನೊಂದಿಗೆ ಹೇಳಿಕೊಂಡಿದ್ದಳು. ತನ್ನ ಸ್ನೇಹಿತರ ನೆರವು ಪಡೆದ ಅಶೋಕ್, ಫೆಬ್ರವರಿ 23 ರಂದು ಅಪ್ರಾಪ್ತ ಪ್ರಿಯತಮೆಯೊಂದಿಗೆ ಓಡಿ ಹೋಗಿದ್ದನು. ಹುಡುಗಿ 20 ಸಾವಿರ ನಗದು ಹಾಗೂ 95 ಗ್ರಾಂ ಒಡೆವೆ ತೆಗೆದುಕೊಂಡು ಪರಾರಿಯಾಗಿದ್ದರು. ಇದನ್ನು ಓದಿ: ನಂಗೆ ಅವಳೇ ಬೇಕು ಎಂದು ಠಾಣೆಯಲ್ಲೇ ಪ್ರತಿಭಟನೆ- ಇದು ಮಗಳು, ಚಿಕ್ಕಪ್ಪನ ಲವ್ ಸ್ಟೋರಿ!
ಈ ಸಂಬಂಧ ಆಲೂರು ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಆದರೆ ಈಗ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಮೊದಲೇ ಅಪ್ರಾಪ್ತೆ ಜೊತೆ ಓಡಿ ಹೋಗಿದ್ದು, ಅಕಸ್ಮಾತ್ ಸಿಕ್ಕಿ ಹಾಕಿಕೊಂಡರೆ ಸಮಸ್ಯೆಯಾಗಲಿದೆ ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡರಾ ಅಥವಾ ಯಾರಾದ್ರೂ ಕೊಲೆ ಮಾಡಿದ್ರಾ ಎಂಬುವುದು ಪೊಲೀಸ್ ತನಿಖೆಯಲ್ಲಿ ತಿಳಿಯಬೇಕಿದೆ.