ಚೆನ್ನೈ: ತಮ್ಮ ಪ್ರೀತಿಗೆ ಪೋಷಕರು ಒಪ್ಪಿಗೆ ನೀಡದ ಪರಿಣಾಮ ದೇವಾಲಯದಲ್ಲಿ ಮದುವೆಯಾಗಿದ್ದ ಜೋಡಿ ಒಂದೇ ಗಂಟೆ ಅವಧಿಯಲ್ಲಿ ಬೇರ್ಪಟ್ಟಿರುವ ಘಟನೆ ತಮಿಳುನಾಡಿನ ವೆಲ್ಲೂರು ಪ್ರದೇಶದಲ್ಲಿ ನಡೆದಿದೆ.
ಚೆನ್ನೈ ಮೂಲದ ಬಾಲಾಜಿ (32) ಮುನಿಸಿಪಲ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೇ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ರೋಜಾ (20) ಎಂಬ ಯುವತಿಯೂ ಕಾರ್ಯನಿರ್ವಹಿಸುತ್ತಿದ್ದರು. ಇಬ್ಬರ ಪರಿಚಯವಾಗಿ ಪರಸ್ಪರ 6 ತಿಂಗಳಿನಿಂದ ಪ್ರೀತಿ ಮಾಡುತ್ತಿದ್ದರು.
ಇತ್ತ ಇಬ್ಬರ ಪ್ರೀತಿ ವಿಷಯ ಕುಟುಂಬಸ್ಥರಿಗೆ ತಿಳಿದ ಹಿನ್ನೆಲೆಯಲ್ಲಿ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಶುಕ್ರವಾರ ಪ್ರೇಮಿಗಳಿಬ್ಬರು ಕಚೇರಿಯಿಂದ ಹೊರ ಹೋಗಿದ್ದಾರೆ. ಈ ವೇಳೆ ಅವರ ನಡುವೆ ಜಗಳ ನಡೆದಿದ್ದು, ರೋಜಾ ತನ್ನ ಕೈಯನ್ನು ಬ್ಲೆಡ್ನಿಂದ ಕಟ್ ಮಾಡಿಕೊಂಡಿದ್ದಳು. ಆ ಬಳಿಕ ಬಾಲಾಜಿ ಯುವತಿಯನ್ನು ದೇವಾಲಯಕ್ಕೆ ಕರೆದುಕೊಂಡು ಮದುವೆಯಾಗಿದ್ದಾನೆ.
ಇಬ್ಬರು ಮದುವೆ ಕುರಿತು ಮಾಹಿತಿ ಪಡೆದ ಕುಟುಂಬಸ್ಥರು ಕಚೇರಿಯ ಬಳಿ ಆಗಮಿಸಿದ್ದು, ಎರಡು ಕುಟುಂಬಗಳ ನಡುವೆ ಗಲಾಟೆ ಕೂಡ ಸಂಭವಿಸಿದೆ. ಇತ್ತ ಪೊಲೀಸರು ಮಧ್ಯ ಪ್ರವೇಶ ಮಾಡುತ್ತಿದಂತೆ ಬಾಲಾಜಿ ಪೋಷಕರು ಆತನನ್ನು ಕರೆದುಕೊಂಡು ತೆರಳಿದ್ದಾರೆ. ಪರಿಣಾಮ ರೋಜಾ ತನಗೆ ಪತಿ ಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮದುವೆಯಾದ ಒಂದು ಗಂಟೆ ಅವಧಿಯಲ್ಲೇ ನಡೆದ ರಾದ್ಧಾಂತದಿಂದ ಪ್ರೇಮಿಗಳು ಬೇರೆಯಾಗಿದ್ದಾರೆ.