19ರ ಯುವತಿಗೆ 42ರ ಅಂಕಲ್‌ನಿಂದ ಲವ್‌ ಟಾರ್ಚರ್‌ – ಪಿನಾಯಿಲ್ ಕುಡಿದು ವಿದ್ಯಾರ್ಥಿನಿ ಆತ್ಮಹತ್ಯೆ

Public TV
2 Min Read

ಗದಗ: ಪ್ರೀತಿ, ಪ್ರೇಮ, ಮದುವೆ ವಿಷಯದಲ್ಲಿ 42ರ ಅಂಕಲ್‌ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ (Student) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬೆಟಗೇರಿ ಬಾಲಕಿಯರ ವೃತ್ತಿಪರ ಹಾಸ್ಟೆಲ್‌ನಲ್ಲಿ ನಡೆದಿದೆ.

ಜಿಲ್ಲೆಯ ಮುಂಡರಗಿ ತಾಲೂಕಿನ ವಿರಪಾಪೂರ ತಾಂಡಾದ ನಿವಾಸಿ ವಂದನಾ (19) ಪಿನಾಯಿಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ವಂದನಾ ಗದಗದ ಜಿಮ್ಸ್ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಳು. ಸಮಾಜ ಕಲ್ಯಾಣ ಇಲಾಖೆ ಬೆಟಗೇರಿ ಡಾ.ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ಹಾಸ್ಟೆಲ್ ನಲ್ಲಿದ್ದಕೊಂಡೇ ವ್ಯಾಸಂಗ ಮಾಡುತ್ತಿದ್ದಳು.

ಗುರುವಾರ ಹಾಸ್ಟೆಲ್‌ನಲ್ಲಿ ಪಿನಾಯಿಲ್ ಸೇವಿಸಿದ್ದಾಳೆ, ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಹನಿಟ್ರ್ಯಾಪ್‌ ಗದ್ದಲ| ಯತ್ನಾಳ್‌ಗೆ ಚೀಟಿ ಕೊಟ್ಟವರು ಸಿಎಂ ಆಪ್ತರಾ? – ಸಿಬಿಐ ತನಿಖೆಯಾಗಲಿ ಎಂದ ಸುರೇಶ್‌ ಗೌಡ

ಆತ್ಮಹತ್ಯೆಗೆ ಕಾರಣ ಏನು?
19 ವರ್ಷದ ವಂದನಾಗೆ ಅದೇ ಗ್ರಾಮದ 42 ವರ್ಷದ ಕಿರಣ್ ಕಾರಬಾರಿ ಎಂಬಾತ ಪ್ರೀತಿಸು, ಮದುವೆಯಾಗು ಅಂತ ಒತ್ತಾಯಿಸುತ್ತಿದ್ದ. ಪ್ರತಿದಿನ ಲಫೋನ್ ಮಾಡಿ ಕಿರುಕುಳ ನೀಡುತ್ತಿದ್ದ. ಮದುವೆ ಆಗದಿದ್ದರೆ ಫೋಟೋ ಎಡಿಟ್ ಮಾಡಿ ಸೊಷಿಯಲ್ ಮೀಡಿಯಾಗೆ ಹಾಕುವುದಾಗಿ ಹೆದರಿಸಿದ್ದ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಂದನಾ ಪೋಷಕರು ಆರೋಪಿಸಿದ್ದಾರೆ.

ತಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಆರೋಪಿ ಕಿರಣ್‌ಗೆ ಮೊದಲೇ ಯುವತಿ ಮನೆಯವರು ತಾಕೀತು ಮಾಡಿದ್ದರು. ಎರಡು ಮನೆಯ ಕುಟುಂಬಸ್ಥರು ಹೇಳಿದ್ರೂ ಕಿರಣ್ ಕಿರುಕುಳ ನಿಂತಿರಲಿಲ್ಲ. ಇದರಿಂದ ಸಾಕಷ್ಟು ಬೇಸತ್ತು ಹೋಗಿದ್ದಳು. ಹೀಗಾಗಿ ವಿದ್ಯಾರ್ಥಿನಿ ಸಾವಿಗೆ ಕಾರಣರಾದ ಕಿರಣ್ ಕಾರಬಾರಿ ಅಂತ ವಿದ್ಯಾರ್ಥಿನಿ ಮನೆಯವರು ದೂರು ನೀಡಿದ್ದಾರೆ. ದೂರಿನ ಮೇರೆಗೆ ವಿಚಾರಣೆ ನಡೆಸಲಾಗುತ್ತಿದೆ ಅಂತಿದ್ದಾರೆ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ. ಇದನ್ನೂ ಓದಿ:  ಜಾನ್ವಿ ಕಪೂರ್‌ಗೆ ವಿಶೇಷ ಉಡುಗೊರೆ ನೀಡಿದ ರಾಮ್ ಚರಣ್ ಪತ್ನಿ

ಆರೋಪಿಗೆ ತಕ್ಕ ಶಿಕ್ಷೆ ಆಗಬೇಕೆಂದು ಕುಟುಂಬಸ್ಥರ ಆಗ್ರಹವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆರೋಪಿ ಕಿರಣ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಕುರಿತು ಗದಗನ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article