ಬಾಗಲಕೋಟೆ: ಮನೆಯವರ ಒತ್ತಾಯದ ಮೇರೆಗೆ ಮಹಿಳೆಯೊಬ್ಬರು ಪ್ರೀತಿಸಿದ ಹುಡುಗನನ್ನು ಬಿಟ್ಟು ಬೇರೆ ಹುಡುಗನ ಜೊತೆ ಮದುವೆಯಾಗಿದ್ದಾರೆ. ಆದರೆ ಈಗ ಪತಿಯೂ ಆಕೆಯನ್ನ ದೂರ ಮಾಡಿದ್ದು, ನ್ಯಾಯಕ್ಕಾಗಿ ನೊಂದ ಮಹಿಳೆ ಅಲೆದಾಡುತ್ತಿದ್ದಾರೆ.
ಜಿಲ್ಲೆಯ ಬಾದಾಮಿ ತಾಲೂಕಿನ ಚಿಂಚಚಲಕಟ್ಟಿ ತಾಂಡ ನಿವಾಸಿ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ. ಈ ಮಹಿಳೆ ಮೂಲತಃ ಬಡ ಕುಟುಂಬದಲ್ಲಿ ಹುಟ್ಟಿದ್ದು, ಹತ್ತು ವರ್ಷಗಳ ಹಿಂದೆ ಮಹಿಳೆ ಹಾಗು ಭೀಮ್ಸಿಂಗ್ ಪಮ್ಮಾರ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಈ ವಿಚಾರ ಮನೆಯವರಿಗೆ ತಿಳಿದು ಇಬ್ಬರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತ ಪಡಿಸಿದ್ದಾರೆ.
ಅಷ್ಟೇ ಅಲ್ಲದೇ ಮನೆಯವರ ಒತ್ತಾಯಕ್ಕೆ ಮಣಿದು ಮಹಿಳೆ ಪ್ರೀತಿಸಿದ ಪ್ರಿಯಕರನನ್ನು ಬಿಟ್ಟು ಮನೆಯವರು ತೋರಿಸಿದ ಬಾಗಲಕೋಟೆ ತಾಲೂಕಿನ ಕಮತಗಿ ಗ್ರಾಮದ ಚಂದ್ರು ರಾಠೋಡ್ ಜೊತೆ ಮದುವೆಯಾಗಿದ್ದರು. ಈ ದಂಪತಿಗೆ ಒಂದು ಮಗು ಕೂಡ ಇದೆ. ಆದರೆ ಈಗ ಕೈ ಹಿಡಿದ ಗಂಡನಿಗೆ ಪತ್ನಿ ಬೇಡಾವಾಗಿದ್ದಾಳೆ.
ಸಹೋದರನೊಂದಿಗೆ ನೊಂದ ಮಹಿಳೆ
ನನ್ನ ತಂಗಿ ಮತ್ತು ಭೀಮ್ಸಿಂಗ್ ಇವರಿಬ್ಬರ ಹಿಂದಿನ ಪ್ರೀತಿಯ ವಿಚಾರ ತಿಳಿದ ನಂತರ ಚಂದ್ರು ರಾಠೋಡ್ ಹೆಂಡತಿಯನ್ನ ದೂರವಿಡಲು ನೋಡುತ್ತಿದ್ದಾನೆ. ಹೀಗಾಗಿ ನನ್ನ ತಂಗಿ ಗಂಡನ ಮನೆ ಬಿಟ್ಟು ತವರು ಮನೆಯಲ್ಲಿದ್ದಾರೆ. ಈ ಹಿಂದೆ ಪ್ರೀತಿಸಿದ ಭೀಮ್ಸಿಂಗ್ ಸಹ ನನ್ನ ತಂಗಿ ಕೈ ಹಿಡಿಯಲು ಮುಂದೆ ಬರುತ್ತಿಲ್ಲ. ಮದುವೆಯಾಗಿ ಗಂಡನನ್ನು ಬಿಟ್ಟು ಬಂದವಳಿಗೆ ಬಾಳು ಕೊಡಬೇಕಾಗುತ್ತೆ ಎಂದು ಅರಿತ ಭೀಮ್ಸಿಂಗ್ ಸದ್ಯ ನಾಪತ್ತೆಯಾಗಿದ್ದಾನೆ ಎಂದು ಮಹಿಳೆಯ ಸಹೋದರ ಮಂಜುನಾಥ್ ಜಾಧವ್ ತಿಳಿಸಿದ್ದಾರೆ.
ನನ್ನ ಪತಿ ನನ್ನನ್ನು ಮನೆಗೆ ಸೇರಿಸಿಕೊಳ್ಳುತ್ತಿಲ್ಲ ಎಂದು ಕೆರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ಮಹಿಳೆಗೆ ಇತ್ತ ಗಂಡನೂ ಇಲ್ಲದೇ ಪ್ರಿಯಕರನೂ ಇಲ್ಲದೇ ಕಂಗಾಲಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv