ಪ್ರೇಮ ವೈಫಲ್ಯ- ಪ್ರಿಯತಮೆಯನ್ನು ಕೊಲೆಗೈದು, ಆತ್ಮಹತ್ಯೆಗೆ ಯತ್ನಿಸಿದ ಭಗ್ನಪ್ರೇಮಿ

Public TV
1 Min Read

ಶಿವಮೊಗ್ಗ: ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಭಗ್ನ ಪ್ರೇಮಿಯೊಬ್ಬ ಪ್ರಿಯತಮೆಯನ್ನು ಕೊಲೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ನೇರಲಗಿ ಬಳಿ ನಡೆದಿದೆ.

ಕೊಲೆಯಾದ ಯುವತಿಯನ್ನು ಕವಿತಾ (21) ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೆ ಯತ್ನಿಸಿದ ಭಗ್ನ ಪ್ರೇಮಿಯನ್ನು ಶಿವಮೂರ್ತಿ (21) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ಶಿವಮೂರ್ತಿ ಸದ್ಯ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಆರೋಪಿಗಳನ್ನು ಗಲ್ಲಿಗೇರಿಸಬೇಕು: ಯತ್ನಾಳ್

ಹೊಸನಗರ ತಾಲೂಕಿನ ನೇರಲಗಿ ಗ್ರಾಮದ ಕವಿತಾ ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಹೊಸನಗರ ತಾಲೂಕಿನ ಕಗಲಿ ಗ್ರಾಮದ ಶಿವಮೂರ್ತಿ ರಿಪ್ಪನ್ ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದನು.

ಕೊಲೆಯಾದ ಕವಿತಾ ಹಾಗೂ ಕೊಲೆಗೈದ ಆರೋಪಿ ಶಿವಮೂರ್ತಿ ಇಬ್ಬರೂ 7 ವರ್ಷದಿಂದ ಪ್ರೀತಿಸುತ್ತಿದ್ದರು. ಇತ್ತೀಚಿಗೆ ಕವಿತಾ, ಶಿವಮೂರ್ತಿ ಜೊತೆಗಿನ ಪ್ರೀತಿ ತೊರೆದು ಭದ್ರಾವತಿ ಮೂಲದ ಅಂಬುಲೆನ್ಸ್ ಚಾಲಕನ ಪ್ರೇಮ ಪಾಶಕ್ಕೆ ಸಿಲುಕಿದ್ದಳು. ಅಂಬುಲೆನ್ಸ್ ಚಾಲಕನ ಜೊತೆ ಕವಿತಾಗೆ ಪ್ರೇಮಾಂಕುರವಾಗುತ್ತಿದ್ದಂತೆ ಶಿವಮೂರ್ತಿಯನ್ನು ದೂರ ಮಾಡ ತೊಡಗಿದ್ದಳು. ಇದನ್ನೂ ಓದಿ: ಕಾಂಗ್ರೆಸ್ಸಿನವರು ನನ್ನ ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಅರಗ ಜ್ಞಾನೇಂದ್ರ

ಇದರಿಂದ ರೊಚ್ಚಿಗೆದ್ದ ಭಗ್ನಪ್ರೇಮಿ ಶಿವಮೂರ್ತಿ, ಬುಧವಾರ ಮಧ್ಯಾಹ್ನ ಕವಿತಾಳನ್ನು ನಿನ್ನ ಜೊತೆ ಮಾತನಾಡಬೇಕು ಎಂದು ನೇರಲಗಿ ಬಳಿ ಕರೆಯಿಸಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಮೊದಲೇ ಪ್ರಿಯತಮೆಯನ್ನು ಕೊಲೆಗೈದು, ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಶಿವಮೂರ್ತಿ ನಿರ್ಧರಿಸಿದ್ದ. ಅದರಂತೆ ಪ್ರಿಯತಮೆಯನ್ನು ಕೊಲೆಗೈದು, ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಲ್ಲದೆ ಕವಿತಾಳನ್ನು ತಾನೇ ಕೊಲೆಗೈದಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಘಟನೆ ಕುರಿತು ರಿಪ್ಪನ್ ಪೇಟೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *