ಅಪ್ಪನನ್ನು ಹುಡುಕಿ ಬಂದವಳಿಗೆ ಸೋಫಾ ಮೇಲೆ ಕಾಣಿಸಿದ್ದು ಅಸ್ಥಿಪಂಜರ

Public TV
1 Min Read

ತಿರುವನಂತಪುರಂ: ಹಿರಿಯ ವ್ಯಕ್ತಿಯೊಬ್ಬರು ಸತ್ತು ದಿನಗಳು, ವಾರಗಳೇ ಕಳೆದರೂ ಅಕ್ಕಪಕ್ಕದ ಮನೆಯವರಿಗೆ ಅದು ಗೊತ್ತೇ ಆಗಿರಲಿಲ್ಲ. ಅಪ್ಪನಿಂದ ಫೋನ್ ಬರದೆ ತುಂಬಾ ಸಮಯ ಕಳೆದು ಕೊನೆಗೆ ಮಗಳು ಭಾನುವಾರದಂದು ಮನೆಗೆ ಬಂದು ನೋಡಿದಾಗ ಕಂಡಿದ್ದು ತಂದೆಯ ಅಸ್ಥಿಪಂಜರ.

ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಕರಾಗಿ ನಿವೃತ್ತರಾಗಿದ್ದ 70 ವರ್ಷದ ಕೆಪಿ ರಾಧಾಕೃಷ್ಣನ್ ಅವರ ಮೃತದೇಹ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾಗಿದೆ. ಇಲ್ಲಿನ ಓಲ್ಡ್ ಮೆಡಿಕಲ್ ಕಾಲೇಜ್ ರೋಡ್‍ನಲ್ಲಿ ಅರ್ಧ ನಿರ್ಮಾಣವಾದ ಎರಡು ಅಂತಸ್ಥಿನ ಮನೆಯಲ್ಲಿ ಅವರೊಬ್ಬರೇ ವಾಸಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯಾದ ಅವರ ಮಗಳು ಕೊಟ್ಟಾಯಂನಲ್ಲಿ ತಾಯಿಯೊಂದಿಗೆ ವಾಸವಿದ್ದಾರೆ. ಕಳೆದ ಕೆಲವು ವರ್ಷಗಳಿಂದ ರಾಧಾಕೃಷ್ಣನ್ ಹಾಗೂ ಅವರ ಪತ್ನಿ ಅಂಬಿಕಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆಗಾಗ ಫೋನ್‍ನಲ್ಲಿ ಮಾತನಾಡುತ್ತಿದ್ರು. ಕೊನೆ ಬಾರಿ ಅವರು ಮಾತನಾಡಿದ್ದು ನಾಲ್ಕು ತಿಂಗಳ ಹಿಂದೆ. ಇತ್ತೀಚೆಗೆ ರಾಧಾಕೃಷ್ಣನ್ ಅವರ ಮಗಳು ತಂದೆಯನ್ನು ಭೇಟಿಯಾಗಲು ಬಂದಿದ್ದರು. ಆದ್ರೆ ಡೋರ್ ಲಾಕ್ ಆಗಿದ್ದರಿಂದ ವಾಪಸ್ ಹೋಗಿದ್ದರು ಎಂದು ವರದಿಯಾಗಿದೆ.

ಭಾನುವಾರದಂದು ಮತ್ತೆ ಆಕೆ ಬಂದಾಗ ಬಾಗಿಲಲ್ಲಿ ಲೆಟರ್‍ಗಳೆಲ್ಲಾ ಹಾಗೇ ಬಿದ್ದಿದ್ದವು. ನಂತರ ಮೆಡಿಕಲ್ ಕಾಲೇಜು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಅವರು ಬಂದು ಬಾಗಿಲನ್ನ ತೆಗೆದಿದ್ದಾರೆ. ಆಗ ಸೋಫಾ ಮೇಲೆ ಕೊಳೆತ ಸ್ಥಿತಿಯಲ್ಲಿ ರಾಧಾಕೃಷ್ಣನ್ ಅವರ ಮೃತದೇಹ ಪತ್ತೆಯಾಗಿದೆ. ರಾಧಾಕೃಷ್ಣನ್ ಒಂಟಿಯಾಗಿ ವಾಸಿಸುತ್ತಿದ್ರು. ಯಾರೊಂದಿಗೂ ಹೆಚ್ಚಿಗೆ ಮಾತನಾಡುತ್ತಿರಲಿಲ್ಲ ಎಂದು ಮೆಡಿಕಲ್ ಕಾಲೇಜ್ ಪೊಲೀಸ್ ಠಾಣೆಯ ಎಸ್‍ಹೆಚ್‍ಓ ಗಿರಿಲಾಲ್ ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಮನೆಯವರಿಗೆ ಒಪ್ಪಿಸಿದ್ದು, ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *