ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತ ದಾಳಿ – ಕೃಷಿ ಅಧಿಕಾರಿ ಬ್ಯಾಗಲ್ಲಿ ಸಿಕ್ತು ಕಂತೆ ಕಂತೆ ಹಣ!

Public TV
1 Min Read

ಚಿಕ್ಕಬಳ್ಳಾಪುರ: ಲಂಚ ಸ್ವೀಕರಿಸುತ್ತಿದ್ದ ಬಾಗೇಪಲ್ಲಿ ತಾಲೂಕು ಕೃಷಿ ಅಧಿಕಾರಿಯನ್ನು (Agriculture Officer) ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡಾಗಿ (Lokayukta Raids) ಹಿಡಿದು ಹಾಕಿದ್ದಾರೆ. ಈ ವೇಳೆ ಅಧಿಕಾರಿಯ ಬ್ಯಾಗ್‌ನಲ್ಲಿ ಲಂಚ ಪಡೆಯುತ್ತಿದ್ದ ಹಣ ಸೇರಿ 13 ಲಕ್ಷ ರೂ. ಹಣ ಪತ್ತೆಯಾಗಿದೆ.

ಗುತ್ತಿಗೆದಾರ ಮಂಜುನಾಥ್ ಎಂಬವರ ಬಳಿ 3 ಲಕ್ಷ ರೂ. ಲಂಚಕ್ಕೆ ಕೃಷಿ ಅಧಿಕಾರಿ ಶಂಕರಯ್ಯ ಬೇಡಿಕೆ ಇಟ್ಟಿದ್ದರು. ಅದರಂತೆ 1 ಲಕ್ಷ ಮುಂಗಡ ಹಣ ಪಡೆದಿದ್ದರು. ಚಿಕ್ಕಬಳ್ಳಾಪುರದ (Chikkaballapura ) ಕೃಷಿ ಜಂಟಿ‌ ನಿರ್ದೇಶಕರ ಕಚೇರಿಯಲ್ಲಿ ಮತ್ತೆ 2 ಲಕ್ಷ ರೂ. ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಶಂಕರಯ್ಯ ಬ್ಯಾಗ್‌ನಲ್ಲಿ 13 ಲಕ್ಷದ 3003 ರೂ. ಹಣ ಪತ್ತೆಯಾಗಿದೆ. ಇದನ್ನೂ ಓದಿ: ಬಿಜೆಪಿ ಸರ್ಕಾರದ ಕೋವಿಡ್ ಹಗರಣ ಆರೋಪ – ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಕೆ

ಈ ಹಣ ಯಾವುದು ಎಂದು ಲೋಕಾಯುಕ್ತ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಅಧಿಕಾರಿ ಉತ್ತರಿಸಿಲ್ಲ. ಇನ್ನೂ ಇಷ್ಟೊಂದು ಹಣ ಜಂಟಿ ನಿರ್ದೇಶಕರಾದ ಜಾವೀದಾ ಖಾನಂ ಕಚೇರಿಗೆ ತಂದಿದ್ದಾದರೂ ಯಾಕೆ ಎಂಬುದರ ಬಗ್ಗೆ ಮಾಹಿತಿ ಸಹ ಕೊಡುತ್ತಿಲ್ಲ. ಹೀಗಾಗಿ ಲಂಚ ಪಡೆದ 2 ಲಕ್ಷ ಹಾಗೂ ಬ್ಯಾಗ್‌ನಲ್ಲಿ ಸಿಕ್ಕ 13 ಲಕ್ಷದ 3003 ರೂ. ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಪ್ರಕರಣದಲ್ಲಿ ಬಾಗೇಪಲ್ಲಿ ಸಹಾಯಕ ಕೃಷಿ ಅಧಿಕಾರಿ ಲಕ್ಷ್ಮೀ ಹಾಗೂ ಚಿಕ್ಕಬಳ್ಳಾಪುರ ಜಂಟಿ ಕೃಷಿ‌ನಿರ್ದೇಶಕ ಜಾವೀದಾ ಖಾನಂ ಪಾತ್ರ ಇದೆಯೇ ಎಂಬ ಬಗ್ಗೆಯೂ ಲೋಕಾಯುಕ್ತ ಪೊಲೀಸರು ವಿಚಾರಣೆ‌ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹೆಡ್ ಕಾನ್‍ಸ್ಟೇಬಲ್ ಮನೆಗೆ ಕನ್ನ – 5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

Share This Article