ಮಂಡ್ಯದಲ್ಲಿ ಲೋಕಸಭೆ ತಯಾರಿ ಜೋರು- ಸೇಡು ತೀರಿಸಿಕೊಳ್ಳಲು ತೆನೆ, ಕಮಲ ಪ್ಲ್ಯಾನ್

Public TV
2 Min Read

– ಮಗ ಸೋತ ಜಾಗದಲ್ಲೇ ಗೆಲುವಿಗೆ ಹೆಚ್‍ಡಿಕೆ ಪಣ

ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ (Loksabha Election) ಮಂಡ್ಯ ಜಿಲ್ಲೆ ಅಕ್ಷರಶಃ ರಣರಂಗವಾಗಿತ್ತು. ಕಾಂಗ್ರೆಸ್- ಜೆಡಿಎಸ್ (Congress-JDS) ದೋಸ್ತಿಗಳ ಜುಗಲ್ ಬಂದಿಗೆ ಬಾರಿ ಮುಖಭಂಗ ಸಹ ಆಯ್ತು. ಇದಕ್ಕೆ ಕಾರಣ ಕಾಂಗ್ರೆಸ್ ದೋಸ್ತಿಯ ಹೆಸರಲ್ಲಿ ಬೆನ್ನ ಹಿಂದೆ ಚೂರಿ ಹಾಕಿದ್ದು, ಎಂಬುದನ್ನು ದಳಪತಿಗಳಿಂದ ಇಂದಿಗೂ ಹರಗಿಸಿಕೊಳ್ಳಲು ಆಗ್ತಿಲ್ಲ. ಕಾಂಗ್ರೆಸ್ ಮೇಲಿನ ಸೇಡು ತೀರಿಸಿಕೊಳ್ಳಲು ಜೆಡಿಎಸ್ ನಾಯಕರು ಅಪ್ಪ-ಮಗನ ಮೊರೆ ಹೋಗಿದ್ದಾರೆ.

ಸಕ್ಕರೆನಾಡು ಮಂಡ್ಯ ಜಿಲ್ಲೆಯ ರಾಜಕೀಯ ಅಂದ್ರೆ ರಾಜ್ಯ ಮಾತ್ರವಲ್ಲ ಇಡೀ ದೇಶದಲ್ಲೇ ಚರ್ಚೆ ಆಗುತ್ತೆ. ಅಂತಹದ್ದೆ ಬಾರೀ ಚರ್ಚೆ ಉಂಟು ಮಾಡಿದ್ದು, ಕಳೆದ ಬಾರಿಯ ಲೋಕಸಭಾ ಚುನಾವಣೆ. ಈ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಿದ್ದು, ಅಂದಿನ ದೋಸ್ತಿಗಳಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್. ಮಂಡ್ಯ ಲೋಕಸಭಾ ಚುನಾವಣೆ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸಂಸದೆ ಸುಮಲತಾ ಅಂಬರೀಶ್ ಕಣಕ್ಕೆ ಇಳಿದಿದ್ರು. ಬೆರಳೆಣಿಕೆಯಷ್ಟು ಕೈ ನಾಯಕರು ಮೈತ್ರಿ ಧರ್ಮ ಪಾಲನೆ ಮಾಡಿ ನಿಖಿಲ್ ಗೆಲುವಿಗೆ ಶ್ರಮಿಸಿದ್ರು. ಆದ್ರೆ, ಬಹುಪಾಲು ಕಾಂಗ್ರೆಸ್ ನಾಯಕರು ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಮೇಲಿನ ಕೋಪಕ್ಕೆ ಮೈತ್ರಿ ಧರ್ಮ ಮರೆತು ಹಿಂಬಾಗಿಲಿನಿಂದ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡಿದ್ರು. ಇದರ ಪರಿಣಾಮವಾಗಿ ಸುಮಲತಾ ಅಂಬರೀಶ್ (Sumalatha Ambareesh) ಅಭೂತಪೂರ್ವ ಗೆಲುವಿನ ಮೂಲಕ ನಿಖಿಲ್ ಕುಮಾರಸ್ವಾಮಿಗೆ ಹೀನಾಯ ಸೋಲು ಎದುರಾಯ್ತು.  ಇದನ್ನೂ ಓದಿ: ಜಾತಿಗಣತಿ ವರದಿ ಲೀಕ್ ಆಗಿಲ್ಲ- ವಿರೋಧ ಮಾಡೋರು ವರದಿ ಓದಲಿ: ಶಿವರಾಜ್ ತಂಗಡಗಿ

ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣವಾಗಿರುವ ಕಾಂಗ್ರೆಸ್ ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳಲು ದಳಪತಿಗಳಿಗೆ ಕಾಲ ಕೂಡಿಬಂದಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ ಕ್ಷೇತ್ರವನ್ನು ಬಹುತೇಕ ಜೆಡಿಎಸ್ ಉಳಿಸಿಕೊಳ್ಳಲಿದೆ. ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ನಾಯಕರು ನಿಖಿಲ್ ಅವರನ್ನು ಕರೆತರಲು ಪ್ಲಾನ್ ಮಾಡಿದೆ. ಮಂಡ್ಯ ಜೆಡಿಎಸ್ ನಾಯಕರು ಹೀಗಾಗಲೇ ನಿಖಿಲ್ ಅವರಿಗೆ ಆಹ್ವಾನ ನೀಡಿದ್ದಾರೆ. ಜೊತೆಗೆ ಕುಮಾರಸ್ವಾಮಿ ಹಾಗೂ ದೇವೇಗೌಡರಲ್ಲೂ ಈ ಬಗ್ಗೆ ಮನವಿ ಮಾಡಲಾಗಿದೆ. ಒಂದು ವೇಳೆ ನಿಖಿಲ್ ಬರದೇ ಇದ್ರೆ ಕುಮಾರಸ್ವಾಮಿ ಅವರಾದ್ರು ಮಂಡ್ಯಗೆ ಬರಲೇ ಬೇಕು ಎಂದು ಕೇಳಿಕೊಂಡಿದ್ದಾರೆ. ಕೇವಲ ಜೆಡಿಎಸ್ ನಾಯಕರು ಅಲ್ಲಾ ಬಿಜೆಪಿ ಜಿಲ್ಲಾ ನಾಯಕರು ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಾವೇ ಈ ಬಾರಿ ಮಂಡ್ಯ ಲೋಕಸಭಾ ಅಖಾಡಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಬನ್ನಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಇತ್ತೀಚಿಗೆ ಹೆಚ್.ಡಿ.ಕುಮಾರಸ್ವಾಮಿ ಸಹ ಮಂಡ್ಯದಲ್ಲಿ ಹಲವು ಖಾಸಗಿ ಕಾರ್ಯಕ್ರಮಗಳಿಗೆ ಬರ್ತಾ ಇದ್ದಾರೆ.

ಕಳೆದ ಬಾರಿಯ ಲೋಕಸಭಾ ಚುನಾವಣೆಯ ಸೇಡಿನ ರುಚಿಯನ್ನು ಮಾಜಿ ದೋಸ್ತಿಗಳಿಗೆ ತಿನಿಸಬೇಕೆಂದು ಹೊಸ ದೋಸ್ತಿಗಳು ಅಪ್ಪ-ಮಗನ ದಾಳವನ್ನು ಮಂಡ್ಯದಲ್ಲಿ ಉರುಳಿಸಲು ಮುಂದಾಗಿದೆ. ಈ ಬೆಳೆವಣಿಗೆ ಎಲ್ಲಿಗೆ ಹೋಗಿ ಮುಟ್ಟುತ್ತೆ ಎನ್ನೊದನ್ನು ಕಾದು ನೋಡಬೇಕಿದೆ.

Share This Article