ಮೋದಿ ಬಂದಾಗ ಬರಗಾಲ ಬಂತು, ಮೋದಿ ಹೋದ್ಮೇಲೆ ಬರಗಾಲ ಹೋಗುತ್ತೆ: ಸಚಿವ ರೇವಣ್ಣ

Public TV
1 Min Read

ಹಾಸನ: ಟಿವಿ ಮಾಧ್ಯಮಗಳು ಕೊನೆ ಶೋ ಎಂದು ಮೋದಿ ನೋಡಿ ಅಂತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ನೋಡಿಯೇ ಬರಗಾಲ ಬಂತು. ಅವರು ಹೋದ ಮೇಲೆಯೇ ಬರಗಾಲ ಹೋಗುತ್ತೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

ನಗರದಲ್ಲಿ ಪುತ್ರ, ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ನಡೆಸಿದ ಪ್ರಚಾರದ ವೇಳೆ ಮಾತನಾಡಿದ ಸಚಿವರು, ಈ ಹಿಂದೆ ಮಾಧ್ಯಮಗಳು ಬೆಳಗ್ಗೆ ಮೈಸೂರು ಮಹಾರಾಜರನ್ನು ನೋಡಿ, ಅರಮನೆ ನೋಡಿ ಎಂದು ತೋರಿಸುತ್ತಿದ್ದರು. ಆದರೆ ಈಗ ಬೆಳಗ್ಗೆ ಎದ್ದರೆ ಮಂಡ್ಯ, ಹಾಸನ, ರಾಮನಗರ ಹಾಗೂ ಪ್ರಜ್ವಲ್ ಅವರನ್ನು ನೋಡಿ ಎಂದು ತೋರಿಸುತ್ತಿದ್ದಾರೆ. ಹಣ ಇಲ್ಲದೆ ನಮಗೆ ಪ್ರಚಾರ ಕೊಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ ಆರು ಸಾವಿರ ಕೊಡುತ್ತೇವೆ ಎಂದು ಹೇಳಿದರು. ಆದರೆ ಆ ಹಣ ಇನ್ನೂ ದೆಹಲಿಯನ್ನೇ ಬಿಟ್ಟಿಲ್ಲ. ಬೇರೆ ಯಾವ ಪ್ರಧಾನಿಯೂ ದೇಶವನ್ನು ಉಳಿಸಿಲ್ವಾ? ಮೋದಿ ಒಬ್ಬರೇ ಉಳಿಸಿದ್ರಾ? ಅವರು ಗಂಟೆಗೊಂದು ಬಟ್ಟೆ ಬದಲಾಯಿಸುತ್ತಾರೆ. ಪ್ರಧಾನಿ ಮೋದಿ ಅವರ ಬಟ್ಟೆಯ ರೇಟ್ ಎಷ್ಟು ಗೊತ್ತಾ? ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಟ್ಟೆ ರೇಟು ಗೊತ್ತಾ? ಲಂಡನ್‍ನಲ್ಲಿ ಬಟ್ಟೆ ಹೊಲಿಸುವವರು ಬೇಕಾ ಎಂದು ಸಭೆಯಲ್ಲಿ ಸೇರಿದ್ದ ಜನರನ್ನು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತಮಿಳುನಾಡಿನವರು ನೀರು ಬೇಡ ಅಂತ ಹೇಳಿದರು ಎಂದ ಸಚಿವರು, ಇದು ಪ್ರಜ್ವಲ್ ಚುನಾವಣೆಯಲ್ಲ. ಈ ದೇಶ ಉಳಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *