2047 ರವರೆಗೆ 24×7 ಕೆಲಸ ಮಾಡಬೇಕೆಂದು ದೇವರು ನನಗೆ ಆದೇಶಿಸಿದ್ದಾನೆ ಎಂದು ನಂಬಿದ್ದೇನೆ: ಮೋದಿ

Public TV
3 Min Read

– ವಿಕಸಿತ ಭಾರತದ ಗುರಿಯನ್ನು ಸಾಧಿಸಲು ಕಳುಹಿಸಿದ್ದಾನೆ
– ರಾಜೀವ್‌ ಗಾಂಧಿ ಮೃತಪಟ್ಟಾಗ 22 ದಿನ ಚುನಾವಣೆ ಮುಂದೂಡಲಾಗಿತ್ತು

ನವದೆಹಲಿ: ಅಭಿವೃದ್ಧಿ ಹೊಂದಿದ ಭಾರತದ (India) ಗುರಿಯನ್ನು ಸಾಧಿಸಲು ನಾನು 2047 ರವರೆಗೆ 24×7 ಕೆಲಸ ಮಾಡಬೇಕೆಂದು ದೇವರು ನನಗೆ ಆದೇಶಿಸಿದ್ದಾನೆ ಎಂದು ನಾನು ನಂಬುತ್ತೇನೆ. ಅದಕ್ಕಾಗಿ ನಾನು ಕೆಲಸ ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.

ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ 74 ವರ್ಷದ ಮೋದಿ, ಸರ್ವಶಕ್ತ ದೇವರು ನನ್ನನ್ನು ವಿಶೇಷ ಉದ್ದೇಶಕ್ಕಾಗಿ ಕಳುಹಿಸಿದ್ದಾನೆ ಎಂದು ನಾನು ಭಾವಿಸುತ್ತೇನೆ. ದೇವರು ನನ್ನನ್ನು 2047 ರ ವೇಳೆಗೆ ವಿಕಸಿತ ಭಾರತದ (Viksit Bharat) ಗುರಿಯನ್ನು ಸಾಧಿಸಲು ಕಳುಹಿಸಿದ್ದಾನೆ. ದೇವರು ನನಗೆ ಮಾರ್ಗವನ್ನು ತೋರಿಸುತ್ತಿದ್ದಾನೆ. ದೇವರು ನನಗೆ ಶಕ್ತಿಯನ್ನು ನೀಡುತ್ತಿದ್ದಾನೆ. ನಾನು ಈ ಗುರಿಯನ್ನು ಸಾಧಿಸುವ ಸಂಪೂರ್ಣ ವಿಶ್ವಾಸವಿದೆ. 2047 ರ ವೇಳೆಗೆ ಆ ಗುರಿಯನ್ನು ಸಾಧಿಸುವವರೆಗೆ ದೇವರು ನನ್ನನ್ನು ಮರಳಿ ಕರೆಯುವುದಿಲ್ಲ ಎಂದು ಹೇಳಿದರು.

400 ಪಾರ್ ಎಂಬುದು ಬಿಜೆಪಿ (BJP) ಸೃಷ್ಟಿ ಮಾಡಿದ ಘೋಷ ವಾಕ್ಯವಲ್ಲ. ಜನರಿಂದಲೇ ಬಂದ ಘೋಷಣೆಯಿದು. ಕಳೆದ ಐದು ವರ್ಷಗಳಲ್ಲಿ ನಾವು ಈಗಾಗಲೇ ಸಂಸತ್ತಿನಲ್ಲಿ 400 ಬಲ ಹೊಂದಿದ್ದೇವೆ. 95% ಅಂಕಗಳನ್ನು ಪಡೆದ ಯಾವುದೇ ಮಗು ಹೆಚ್ಚಿನ ಅಂಕ ಪಡೆಯಲು ಪ್ರಯತ್ನಿಸುವುದು ಸಹಜ ಎಂದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಮತ್ತು ಇತರ ವಿರೋಧ ಪಕ್ಷಗಳು ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ದೂರುತ್ತಿರುವ ಹಿನ್ನೆಲೆಯಲ್ಲಿ ಹಿಂದಿನ ಚುನಾವಣಾ ಆಯೋಗದ ಕೆಲಸವನ್ನು ಉಲ್ಲೇಖಿಸಿ ಮೋದಿ ತಿರುಗೇಟು ನೀಡಿದರು.

ಮೇ 21, 1991 ರಂದು ಶ್ರೀಪೆರಂಬದೂರಿನಲ್ಲಿ ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿ (Rajiv Gandhi) ಹತ್ಯೆಯಾದ ನಂತರ 1991 ರಲ್ಲಿ ಅಂದಿನ ಮುಖ್ಯ ಚುನಾವಣಾ ಆಯೋಗದ ಆಯುಕ್ತರಾಗಿದ್ದ ಟಿಎನ್ ಶೇಷನ್ (T. N. Seshan) ಅವರು 22 ದಿನಗಳ ಕಾಲ ದೇಶಾದ್ಯಂತ ಮತದಾನವನ್ನು ಹೇಗೆ ಮುಂದೂಡಿದರು ಎಂಬುದನ್ನು ನೆನಪಿಸಿದ ಮೋದಿ ಅಂದು ಕೇವಲ ಒಂದು ಸುತ್ತಿನ ಮತದಾನ ಮುಗಿದಿತ್ತು. ಜೂನ್ ಮಧ್ಯಭಾಗದವರೆಗೆ ಚುನಾವಣೆಯನ್ನು ಮುಂದೂಡಲಾಯಿತು ಮತ್ತು ಅಂತಿಮವಾಗಿ ಜೂನ್ 12 ಮತ್ತು 15 ರಂದು ಮತದಾನ ನಡೆಯಿತು ಎಂಬುದನ್ನು ಪ್ರಸ್ತಾಪಿಸಿದರು.

ಈಗ ಯಾವ ರೀತಿ ಮಾತನಾಡುತ್ತಿದ್ದಾರೆ? ಸಾಮಾನ್ಯವಾಗಿ, ಅಭ್ಯರ್ಥಿ ಮೃತಪಟ್ಟಾಗ ಆ ಕ್ಷೇತ್ರದ ಚುನಾವಣೆಯನ್ನು ಮಾತ್ರ ನಿಲ್ಲಿಸಲಾಗುತ್ತದೆ. ಆದರೆ 1991 ರಲ್ಲಿ ದೇಶಾದ್ಯಂತ ಚುನಾವಣೆಯನ್ನು ಮುಂದೂಡಲಾಯಿತು ಮತ್ತು ಅಗಲಿದ ನಾಯಕನ ಅಂತ್ಯಕ್ರಿಯೆಗೆ ವ್ಯಾಪಕವಾಗಿ ಪ್ರಚಾರ ನೀಡಿದ ನಂತರವೇ ಮತದಾನ ನಡೆಯಿತು. ಅದೇ ಟಿಎನ್‌ ಶೇಷನ್‌ ನಿವೃತ್ತಿಯ ನಂತರ 1999 ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆದು ಗಾಂಧಿನಗರದಲ್ಲಿ ನಮ್ಮ ಪಕ್ಷದ ಅಧ್ಯಕ್ಷ ಎಲ್‌ಕೆ ಅಡ್ವಾಣಿ ವಿರುದ್ಧ ಸ್ಪರ್ಧಿಸಿದರು ಎಂದು ತಿಳಿಸಿದರು.

ದೆಹಲಿ ಮತ್ತು ಜಾರ್ಖಂಡ್‌ ಸಿಎಂಗಳ ಬಂಧನಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾವು ಅವರನ್ನು ಜೈಲಿಗೆ ಕಳುಹಿಸಲಿಲ್ಲ. ಕಳುಹಿಸುವ ಅಧಿಕಾರ ನಮಗಿಲ್ಲ, ನ್ಯಾಯಾಲಯಗಳು ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿಗೆ ಕಳುಹಿಸಿದವು ಎಂದರು.

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಪರಿಚಿತ ಹಂತಕರ ಉದ್ದೇಶಿತ ಹತ್ಯೆಗಳ ಹಿಂದೆ ಭಾರತದ ಕೈವಾಡವಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಪಾಕಿಸ್ತಾನದ ಜನರು ಇತ್ತೀಚಿನ ದಿನಗಳಲ್ಲಿ ಚಿಂತಿತರಾಗಿದ್ದಾರೆ. ನನಗೂ ಗೊತ್ತು, ಇದಕ್ಕೆ ಮೂಲ ಕಾರಣ ನಾನು. ಅವರು ಅಳುವುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ನಮ್ಮ ಜನರು ಏಕೆ ಅಳುತ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ವಿಪಕ್ಷಗಳಿಗೆ ಟಾಂಗ್‌ ನೀಡಿದರು.

 

Share This Article