ಸಂಪತ್ತಿನ ಮರು ಹಂಚಿಕೆ: ಆರ್‌ಆರ್‌, ಕೆಕೆಆರ್‌ನಿಂದ 4 ಅಂಕ ತೆಗೆದು ಉಳಿದ ತಂಡಗಳಿಗೆ ಹಂಚಿದಂತೆ – ವೆಂಕಟೇಶ್‌ ಪ್ರಸಾದ್‌

Public TV
2 Min Read

ಬೆಂಗಳೂರು: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ (Congress Manifesto) ಘೋಷಣೆ ಮಾಡಿದ ಸಂಪತ್ತಿನ ಮರು ಹಂಚಿಕೆಯನ್ನು (Wealth Redistribution) ಟೀಂ ಇಂಡಿಯಾದ (Team India) ಮಾಜಿ ವೇಗದ ಬೌಲರ್‌ ವೆಂಕಟೇಶ್‌ ಪ್ರಸಾದ್‌ (Venkatesh Prasad) ಐಪಿಎಲ್‌ ಅಂಕಪಟ್ಟಿಗೆ ಹೋಲಿಸಿ ವ್ಯಂಗ್ಯವಾಡಿದ್ದಾರೆ.

ಶ್ರೀಮಂತರ ಸಂಪತ್ತನ್ನು ಬಡವರಿಗೆ (Poor) ಮರುಹಂಚಿಕೆ ಮಾಡುವುದಾಗಿ ರಾಜಕೀಯ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಬಡವರನ್ನು ನಿಜವಾಗಿಯೂ ಮೇಲಕ್ಕೆ ಎತ್ತಬೇಕು. ಆದರೆ ಈ ಚಿಂತನೆಯ ಪ್ರಕ್ರಿಯೆಯು ತುಂಬಾ ಕರುಣಾಜನಕವಾಗಿದೆ. ನಾವು ರಾಜಸ್ಥಾನ ರಾಯಲ್ಸ್‌ನಿಂದ 4 ಅಂಕ, ಕೋಲ್ಕತ್ತಾ ನೈಟ್‌ ರೈಡರ್ಸ್‌, ಸನ್‌ ರೈಸರ್ಸಸ್‌ ಹೈದಾಬಾದ್‌ನಿಂದ 4 ಅಂಕಗಳನ್ನ ತೆಗೆದು ಕೆಳಗಿನ 3 ತಂಡಗಳಿಗೆ ಮರು-ಹಂಚಿಕೆ ಮಾಡಿದರೆ ಅವರು ಪ್ಲೇ ಆಫ್‌ಗೆ ಬರಬಹುದು ಎಂದು ಟ್ವೀಟ್‌ ಮಾಡಿ ಕಾಲೆಳೆದಿದ್ದಾರೆ.  ಇದನ್ನೂ ಓದಿ: ಲೋಕಸಭೆ ಚುನಾವಣೆಗೂ ಮುನ್ನವೇ ಗೆಲುವಿನ ಖಾತೆ ತೆರೆದ ಬಿಜೆಪಿ!

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳಿರುವವರಿಗೆ ಮರುಹಂಚಿಕೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಆರೋಪಿಸಿದ ಒಂದು ದಿನದ ನಂತರ ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಎಲ್ಲ ಧರ್ಮದ ತಾಯಂದಿರು ಗಂಡ-ಮಕ್ಕಳನ್ನ ಕಳೆದುಕೊಳ್ತಾರೆ: ಯತೀಂದ್ರ

ಏಪ್ರಿಲ್ 6 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಚುನಾವಣಾ ಪ್ರಚಾರ ಭಾಷಣದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ದೇಶದಲ್ಲಿನ ಜನರ ನಡುವೆ ಸಂಪತ್ತಿನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಹಣಕಾಸು ಮತ್ತು ಸಾಂಸ್ಥಿಕ ಸಮೀಕ್ಷೆಯನ್ನು ನಡೆಸಲಿದೆ ಎಂದು ಹೇಳಿದ ನಂತರ ಪ್ರಧಾನಿಯವರ ಈ ಹೇಳಿಕೆಯು ಹೊರಬಿದ್ದಿದೆ.

 

ಇತರ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಅಲ್ಪಸಂಖ್ಯಾತರಿಗೆ ಎಷ್ಟು ಜನರು ಸೇರಿದ್ದಾರೆ ಎಂಬುದನ್ನು ನಿರ್ಧರಿಸಲು ನಾವು ಮೊದಲು ರಾಷ್ಟ್ರವ್ಯಾಪಿ ಜಾತಿ ಗಣತಿಯನ್ನು ನಡೆಸುತ್ತೇವೆ. ನಂತರ ನಾವು ಆರ್ಥಿಕ ಮತ್ತು ಸಾಂಸ್ಥಿಕ ಸಮೀಕ್ಷೆಯನ್ನು ನಡೆಸುತ್ತೇವೆ. ಸಂಪತ್ತಿನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ. ಸಮೀಕ್ಷೆಯ ನಂತರ ಜನರಿಗೆ ಸರಿಯಾದ ಪಾಲು ನೀಡುವುದನ್ನು ಕಾಂಗ್ರೆಸ್ ಖಚಿತಪಡಿಸುತ್ತದೆ ಎಂದು ರಾಹುಲ್‌ ಗಾಂಧಿ (Rahul Gandhi) ಹೈದರಾಬಾದ್‌ನಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ತಿಳಿಸಿದ್ದರು.

 

Share This Article