ಮೋದಿ ಬಿಟ್ರೆ ಪ್ರಧಾನಿಯಾಗುವ ಅರ್ಹತೆ ಯಾರಿಗೂ ಇಲ್ಲ: ಶಾಸಕ ಯತ್ನಾಳ್

Public TV
1 Min Read

– ಜಿಗಜಿಣಗಿ ವಿರುದ್ಧವೂ ವಾಗ್ದಾಳಿ

ವಿಜಯಪುರ: ನರೇಂದ್ರ ಮೋದಿ ಅವರನ್ನು ಬಿಟ್ಟು ಬೇರೆ ಯಾರಿಗೂ ಪ್ರಧಾನಿಯಾಗುವ ಅರ್ಹತೆ ಇಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ನಗರದ ಸಿದ್ದೇಶ್ವರ ದೇವಸ್ಥಾನದಲ್ಲಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಶಾಸಕರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಅತ್ಯಂತ ಅಪ್ರಬುದ್ಧ ನಾಯಕ. ಅವರ ಕೈಯಲ್ಲಿ ಸಿಕ್ಕಿರುವ ಕಾಂಗ್ರೆಸ್, ನಾಶದ ಹಾದಿ ಹಿಡಿಯುತ್ತಿದೆ. ರಾಹುಲ್ ಗಾಂಧಿ ಅವರಿಗೆ ಹಿಂದೂಗಳ ಮೇಲೆ ವಿಶ್ವಾಸವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ತಾಕತ್ತು ಇದ್ದರೆ ಉತ್ತರ ಪ್ರದೇಶದ ರಾಯ್‍ಬರೇಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕಿತ್ತು. ಆದರೆ ಅದನ್ನು ಬಿಟ್ಟು ಕೇರಳದ ವಯನಾಡು ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಈ ಮೂಲಕ ಉತ್ತರ ಪ್ರದೇಶದಿಂದ ಕೇರಳದ ಕಡೆಗೆ ರಾಹುಲ್ ಗಾಂಧಿ ಪಲಾಯನ ಮಾಡಿದ್ದಾರೆ. ದೇಶದ ಸಂಸ್ಕೃತಿ ಹಾಳು ಮಾಡುವವರು ಎಲ್ಲಿಗೆ ಹೋದ್ರೂ ಅವರಿಗೆ ಭವಿಷ್ಯವಿಲ್ಲ ಎಂದರು.

ಇದೇ ವೇಳೆ ತಮ್ಮದೇ ಪಕ್ಷದ ಹಾಲಿ ಸಂಸದ, ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕರು, ಪ್ರಧಾನಿ ನರೇಂದ್ರ ಮೋದಿ ನೋಡಿ ಜನರು ಮತ ಹಾಕುತ್ತಾರೆ. ಹಾಲಿ ಸಂಸದರ ಮುಖ ನೋಡಿ ಮತ ಹಾಕುವುದಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ವಿರೋಧ ಮಾಡಿದವರಿಗೆ ಕ್ಷೇತ್ರದ ಜನ ಒದ್ದಿದ್ದಾರೆ. ಎಷ್ಟು ಕೆಟ್ಟದಾಗಿ ಒದ್ದಿದ್ದಾರೆ. ಬಿಜೆಪಿ ವಿರೋಧ ಮಾಡಿದರೆ ಹೇಗೆ ಒದೆಯುತ್ತಾರೆ ಎಂದು ಪೆಟ್ಟು ತಿಂದವರು ಸಲಹೆ ನೀಡಿದ್ದಾರೆ ಎಂದು ಜಿಗಜಿಣಗಿ ಅವರಿಗೆ ತಿರುಗೇಟು ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *