ನಾಲ್ಕೈದು ವರ್ಷದಿಂದ ಬೀದಿನಾಯಿಗಳಿಗೆ ಎರಡೊತ್ತು ಊಟ ಹಾಕ್ತಿರೋ ಉಮಾಶಂಕರ್

Public TV
2 Min Read

– ಲಾಕ್‍ಡೌನ್ ಹಿನ್ನೆಲೆ ಮೂರೊತ್ತು ಊಟ
– ಪ್ರತಿ ದಿನ 500-700 ರೂ. ಖರ್ಚು ಮಾಡುವ ಉಮಾಶಂಕರ್

ಚಿಕ್ಕಮಗಳೂರು: ಕೇವಲ ಲಾಕ್‍ಡೌನ್ ಸಮಯದಲ್ಲಿ ಮಾತ್ರವಲ್ಲ, ಕಳೆದ ನಾಲ್ಕೈದು ವರ್ಷಗಳಿಂದ ಬೀದಿ ನಾಯಿಗಳಿಗೆ ಎರಡು ಹೊತ್ತು ಊಟ ಹಾಕುವ ಮೂಲಕ ಚಿಕ್ಕಮಗಳೂರು ನಿವಾಸಿ ಉಮಾಶಂಕರ್ ಮಾನವೀಯತೆ ಮೆರೆಯುತ್ತಿದ್ದಾರೆ.

ಬೀದಿ ನಾಯಿಗಳು ಆಹಾರವಿಲ್ಲದೆ ಪರದಾಡುವುದನ್ನು ಮನಗಂಡ ಇವರು ಪ್ರತಿ ದಿನ ಎರಡು ಹೊತ್ತು ಊಟ ಹಾಕುತ್ತಿದ್ದಾರೆ. ಪ್ರತಿ ದಿನ ಬೆಳಗ್ಗೆ-ಸಂಜೆ ಎರಡು ಗಂಟೆ ನಾಯಿಗಳಿಗಾಗೇ ಮೀಸಲಟ್ಟಿದ್ದಾರೆ. ಬೀದಿ-ಬೀದಿ ಸುತ್ತಿ ನಾಯಿಗಳಿಗೆ ಅನ್ನ ಹಾಕುತ್ತಾರೆ. ಕೇವಲ ಒಂದೆರಡು ಏರಿಯಾ ಅಲ್ಲ, ಇಡೀ ನಗರದ ಬೀದಿನಾಯಿಗಳ ಹಸಿವನ್ನು ಉಮಾಶಂಕರ್ ನೀಗಿಸುತ್ತಾರೆ.

ನಗರದಲ್ಲಿ ವೆಲ್ಡಿಂಗ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿರುವ ಇವರಿಗೆ ಬೀದಿನಾಯಿಗಳೆಂದರೆ ಮಮಕಾರ. ಹೀಗಾಗಿ ಕಳೆದ ನಾಲ್ಕೈದು ವರ್ಷಗಳಿಂದ ಬೀದಿ ನಾಯಿಗಳಿಗೆ ಆಹಾರ ನೀಡುತ್ತಾರೆ. ಸ್ಕೂಟರ್ ನಲ್ಲಿ ಊಟ, ಬ್ರೆಡ್, ಬಿಸ್ಕೆಟ್ ಇಟ್ಟುಕೊಂಡು ಮನೆಯಿಂದ ಹೊರಟರೆ ಆಹಾರ ಖಾಲಿಯಾದ ಮೇಲೆ ಮನೆಗೆ ವಾಪಸ್ಸಾಗುತ್ತಾರೆ. ನಾಯಿಗಳಿಗೆಲ್ಲ ಬಿಸ್ಕೆಟ್ ತಿನಿಸುವ ಮೂಲಕ ಅವುಗಳ ಜೀವಗಳನ್ನು ಉಳಿಸುದ್ದಾರೆ. ಲಾಕ್‍ಡೌನ್ ಸಮಯದಲ್ಲೂ ಈ ಕಾಯಕವನ್ನು ಮುಂದುವರಿಸಿದ್ದು, ಪ್ರತಿ ದಿನ ನಾಯಿಗಳಿಗೆ ಆಹಾರ ನೀಡುತ್ತಾರೆ.

ಪ್ರತಿದಿನ ಸಂಜೆ 5 ರಿಂದ 7ರವರೆಗೆ 2 ಗಂಟೆಗಳ ಕಾಲ ಸುಮಾರು 100 ರಿಂದ 150 ಬೀದಿನಾಯಿಗಳಿಗೆ ಊಟ ಹಾಕುತ್ತಾರೆ. ಲಾಕ್‍ಡೌನ್ ವೇಳೆಯಲ್ಲಿ ನಗರದ ಹೋಟೆಲ್‍ಗಳೆಲ್ಲ ಬಾಗಿಲು ಹಾಕಿದ್ದವು. ನಗರದ ಬೀದಿ ನಾಯಿಗಳೆಲ್ಲ ಊಟವಿಲ್ಲದೆ ಪರದಾಡುತ್ತಿದ್ದವು. ಇದನ್ನರಿತ ಉಮಾಶಂಕರ್ ಬೀದಿನಾಯಿಗಳನ್ನ ಹುಡುಕಿಕೊಂಡು ಹೋಗಿ ಮೂರು ಹೊತ್ತು ಊಟ ಹಾಕಿ ಹಸಿವು ನೀಗಿಸುತ್ತಿದ್ದಾರೆ.

ಮನೆಯಲ್ಲಿ 3 ಡ್ಯಾಶ್‍ಎಂಡ್ ನಾಯಿಗಳನ್ನು ಸಾಕಿರುವ ಇವರಿಗೆ ಮನೆ ನಾಯಿಗಳಿಗಿಂತ ಬೀದಿನಾಯಿಗಳೆಂದರೆ ಪ್ರೀತಿ. ಹೀಗಾಗಿ ಪ್ರತಿದಿನ ನಾಯಿಗಳಿಗೋಸ್ಕರ ಕನಿಷ್ಠ 500 ರಿಂದ 700ರೂ. ಖರ್ಚು ಮಾಡುತ್ತಾರೆ. ಬ್ರೆಡ್, ಬಿಸ್ಕೆಟ್ ಜೊತೆಗೆ ಹಾಲು, ಮೊಸರು ಹಾಕುತ್ತಾರೆ. ಹಲವು ಬಾರಿ ಬಿರಿಯಾನಿ ಊಟವನ್ನೂ ಹಾಕಿ ನಾಯಿಗಳಿಗೂ ಖುಷಿ ಪಡಿಸುತ್ತಾರೆ. ಆದರೆ ತಾವು ಮಾಡುವ ಕೆಲಸವನ್ನು ಯಾರ ಬಳಿಯೂ ಹೇಳಿಕೊಂಡಿಲ್ಲ, ತಾನು ಮಾಡೋ ಕೆಲಸ ಖುಷಿ ಕೊಡುತ್ತೆ ಅದಕ್ಕೆ ಮಾಡುತ್ತಿದ್ದೇನೆ ಅಂತಾರೆ. ನಾಯಿಗಳು ಇವರನ್ನು ಕಂಡರೆ ಸಾಕು ಓಡಿ ಬಂದು ಮುತ್ತಿಹಾಕಿಕೊಳ್ಳುತ್ತವೆ.

Share This Article
Leave a Comment

Leave a Reply

Your email address will not be published. Required fields are marked *