ಮಕ್ಕಳ ಕಳ್ಳನೆಂದು ಭಾವಿಸಿ ಮಗುವಿನೊಂದಿಗಿದ್ದ ತಂದೆಯ ಮೇಲೆಯೇ ಹಲ್ಲೆ!

Public TV
1 Min Read

ಮಂಗಳೂರು: ಮಕ್ಕಳ ಕಳ್ಳನೆಂದು ಭಾವಿಸಿ ಮಗುವಿನ ತಂದೆಗೇ ಸಾರ್ವಜನಿಕರು ಸೇರಿ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ.

ಉಜಿರೆ ಪೇಟೆಯಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಮಗುವಿನೊಂದಿಗೆ ಆಟೋದಲ್ಲಿ ಬರುತ್ತಿದ್ದ ವ್ಯಕ್ತಿ ಸಂಶಯಾಸ್ಪದವಾಗಿ ಕಂಡು ಬಂದಿದ್ದರಿಂದ ಅನುಮಾನಗೊಂಡ ಸ್ಥಳೀಯರು ಆಟೋ ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಿಮಗ್ಯಾಕ್ರೀ ಎಂದು ಉತ್ತರಿಸಿದ ಕಾರಣ ಸಾರ್ವಜನಿಕರು ಆತನಿಗೆ ಥಳಿಸಿದ್ದಾರೆ.

ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಕೊನೆಗೆ ತನ್ನದೇ ಮಗುವೆಂದು ಹೇಳಿಕೊಂಡಿದ್ದಾನೆ. ಕೂಡಲೇ ಬೆಳ್ತಂಗಡಿ ಪೊಲೀಸರು ಆಗಮಿಸಿ ವಿಚಾರಿಸಿದ್ದು, ಯುವಕ ಬೆಳ್ತಂಗಡಿಯ ಕಕ್ಕಿಂಜೆ ನಿವಾಸಿ ಖಲೀದ್ ಎನ್ನುವುದನ್ನು ಪತ್ತೆ ಮಾಡಿದ್ದಾರೆ. ಖಲೀದ್‍ಗೆ ಎರಡು ಮದುವೆಯಾಗಿದ್ದು, ಬೇಲೂರು ಮೂಲದ ಯುವತಿ ಎರಡನೇ ಪತ್ನಿಯಾಗಿದ್ದಳು. ಆಕೆಯ ಎರಡು ವರ್ಷದ ಹೆಣ್ಣು ಮಗುವನ್ನು ಆಟೋದಲ್ಲಿ ಕರೆದುಕೊಂಡು ಬರುತ್ತಿದ್ದನು. ಈ ವೇಳೆ ಖಲೀದ್ ತನ್ನ ಮಗುವಿಗೆ ಹೊಡೆದಿದ್ದನ್ನು ಬೈಕಿನಲ್ಲಿ ಬರುತ್ತಿದ್ದ ಕೆಲ ಯುವಕರು ಗಮನಿಸಿದ್ದರು.

ಈ ಹಿನ್ನೆಲೆಯಲ್ಲಿ ಉಜಿರೆ ಪೇಟೆಯಲ್ಲಿ ವಿಚಾರಿಸಿದ್ದಲ್ಲದೆ, ಮಕ್ಕಳ ಕಳ್ಳನೆಂದು ಭ್ರಮಿಸಿ ಹೊಡೆದಿದ್ದಾರೆ. ದಕ್ಷಿಣ ಕನ್ನಡ ಭಾಗದಲ್ಲಿ ಕೂಡ ಮಕ್ಕಳ ಕಳ್ಳರ ವದಂತಿ ಇರುವುದರಿಂದ ಇಂಥಹ ಘಟನೆ ನಡೆದಿದ್ದು, ಬೆಳ್ತಂಗಡಿ ಪೊಲೀಸರು ವಿಚಾರಣೆ ನಡೆಸಿ ಬಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *