ಸಚಿವ ಆಂಜನೇಯಗೆ ಕ್ಲಾಸ್ ತೆಗೆದುಕೊಂಡ ಮಹಿಳೆಯರು

Public TV
1 Min Read

ಚಿತ್ರದುರ್ಗ: ನಗರದಲ್ಲಿ ರಾಜಕಾಲುವೆ ಒತ್ತುವರಿ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಸಮಾಜಕಲ್ಯಾಣ ಸಚಿವ ಹೆಚ್.ಆಂಜನೇಯ ಅವರನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ.

ಖಾಸಗಿ ಶಾಲೆಯೊಂದರ ಆಡಳಿತ ಮಂಡಳಿಯಿಂದ ರಾಜಕಾಲುವೆ ಒತ್ತುವರಿಯಾಗಿದೆ. ಹಾಗಾಗಿ ಮಳೆ ನೀರು ಸರಾಗವಾಗಿ ಹರಿಯಲಾಗದೇ ನೆಹರು ನಗರದ ನೂರಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಹೀಗಾಗಿ ಆಕ್ರೋಶಗೊಂಡ ಮಹಿಳೆಯರು ರಾಜಕಾಲುವೆ ಒತ್ತುವರಿಯನ್ನು ತುರ್ತಾಗಿ ತೆರವುಗೊಳಿಸುವಂತೆ ಆಗ್ರಹಿಸಿ ಸಚಿವ ಆಂಜನೇಯ ಹಾಗೂ ನಗರಸಭೆ ಪೌರಾಯುಕ್ತ ಚಂದ್ರಪ್ಪ ಅವರಿಗೆ ಮುತ್ತಿಗೆ ಹಾಕಿದರು.

ನೀರಿಲ್ಲದ ಪ್ರದೇಶ ಹಾಗೂ ತಗ್ಗು ದಿಬ್ಬಗಳಿಲ್ಲದ ರಸ್ತೆಗಳಲ್ಲಿ ವಾಹನ ಸವಾರರು ಸಂಚರಿಸಬೇಕು. ಇಲ್ಲವಾದರೆ ನೀರಿಲ್ಲದ ಕಡೆ ಮಾರ್ಗ ಬದಲಾವಣೆ ಮಾಡಿಕೊಂಡು ಸಂಚರಿಸಿ. ಮಳೆ ಬಂದು ನೀರು ನಿಂತಾಗ ಗುಂಡಿ ಬೀಳೋದು ಕಾಮನ್, ಹೀಗಾಗಿ ಮಳೆ ನೀರು ನಿಂತು ರಸ್ತೆ ಹಾಳಾಗೋದು ಕೂಡ ಸಹಜವಾಗಿದೆ. ಆದ್ದರಿಂದ ಒಂದೇ ಬಾರಿಗೆ ಎಲ್ಲಾ ರಸ್ತೆ ರಿಪೇರಿ ಮಾಡಲು ಆಗುವುದಿಲ್ಲ. ವಾಹನ ಸವಾರರು ಸಂಚರಿಸುವಾಗ ತಗ್ಗು ದಿಬ್ಬಗಳಿಲ್ಲದ ರಸ್ತೆಗಳಲ್ಲಿ ನೋಡಿಕೊಂಡು ಓಡಾಡಬೇಕು. ಅಲ್ಲದೆ ರಾತ್ರಿ ಸಮಯದಲ್ಲಿ ಸಂಚಾರ ಮಾಡುತ್ತಾ ಅನಾಹುತಕ್ಕೆ ಬಲಿಯಾಗಬೇಡಿ ಎಂದು ಹೇಳುವ ಮೂಲಕ ಕಳಪೆ ಕಾಮಗಾರಿಯಿಂದ ಅನಾಹುತವಾಗಿಲ್ಲ ಎಂದು ಸಚಿವ ಆಂಜನೇಯ ಸಮರ್ಥಿಸಿಕೊಂಡರು.

 

Share This Article
Leave a Comment

Leave a Reply

Your email address will not be published. Required fields are marked *