ದೂರು ನೀಡಲು ಬಂದಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಸಿಪಿಐಗೆ ಗೂಸಾ!

Public TV
2 Min Read

– ಹೆಚ್ಚುವರಿ ಎಸ್‍ಪಿಯಿಂದ ತನಿಖೆಗೆ ಆದೇಶ

ಹಾವೇರಿ: ದೂರು ನೀಡಲು ಬಂದಿದ್ದ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಕರ್ತವ್ಯದಲ್ಲಿದ್ದ ಸಿಪಿಐರನ್ನು ಹಿಡಿದು ಎಳೆದಾಡಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ನಡೆದಿದೆ.

ಬ್ಯಾಡಗಿ ಪೊಲೀಸ್ ಠಾಣೆಯ ಸಿಪಿಐ ಚಿದಾನಂದ ಠಾಣೆಗೆ ದೂರು ನೀಡಲು ಬಂದಿದ್ದ ಶೇಖವ್ವ ಲಮಾಣಿ ಎಂಬವರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನು ಆರೋಪ ಕೇಳಿ ಬಂದಿದೆ. ಈ ಕುರಿತು ಮಹಿಳೆ ತಮ್ಮ ಸಂಬಂಧಿಕರಿಗೆ ಮಾಹಿತಿ ನೀಡಿದ್ದರು. ಇದನ್ನು ತಿಳಿದ ಸಂಬಂಧಿಕರು ಸಿಪಿಐ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಎಸ್‍ಪಿ ಕಚೇರಿಗೆ ತೆರಳಿ ಸಿಪಿಐ ಚಿದಾನಂದ ವಿರುದ್ಧ ದೂರು ನೀಡಿದ್ದಾರೆ.

ಏನಿದು ಪ್ರಕರಣ?:
ಶೇಖವ್ವ ಲಮಾಣಿ ಸಹೋದರ ಮಾಲತೇಶ್ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಮಾಲತೇಶ್ ಅಕ್ಕನ ಕುರಿತಾಗಿ ಮಾವನಿಗೆ ಚಾಡಿ ಹೇಳುತ್ತಿದ್ದ. ಅದನ್ನು ನಂಬುತ್ತಿದ್ದ ಪತಿ ಆಕೆಯ ಜೊತೆಗೆ ಜಗಳವಾಡಿ ಹಲ್ಲೆ ಮಾಡುತ್ತಿದ್ದ. ಇಬ್ಬರ ಕಿರುಕುಳದಿಂದ ಬೇಸತ್ತ ಶೇಖವ್ವ ನವೆಂಬರ್ 11ರಂದು ಬ್ಯಾಡಗಿ ಪೊಲೀಸ್ ಠಾಣೆಗೆ ತೆರಳಿ ಪತಿ ಹಾಗೂ ತಮ್ಮನಿಗೆ ಬುದ್ಧಿ ಹೇಳುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಅಂದು ಸಿಪಿಐ ಚಿದಾನಂದ ಅಸಭ್ಯವಾಗಿ ವರ್ತಸಿದ್ದಾರೆ.

ಪೊಲೀಸ್ ಅಧಿಕಾರಿಯ ವರ್ತನೆಯಿಂದ ಬೇಸತ್ತ ಶೇಖವ್ವ ಮತ್ತೆ ಠಾಣೆಗೆ ತೆರಳಿರಲಿಲ್ಲ. ಆದರೆ ಭಾನುವಾರ ಸಹೋದರ ಹಾಗೂ ಪತಿಯ ಜೊತೆಗೆ ರಾಜಿ ಪಂಚಾಯತಿ ನಡೆಸಲಾಗಿತ್ತು. ಈ ವೇಳೆ ಅಲ್ಲಿಗೆ ಬಂದಿದ್ದ ಸಿಪಿಐ ಚಿದಾನಂದ ಅವರನ್ನು ನೋಡಿದ ಶೇಖವ್ವ, ಠಾಣೆಗೆ ಹೋಗಿದ್ದಾಗ ದೂರು ಆಲಿಸಿದ ಸಿಪಿಐ, ನಿನಗೆ ಎಲ್ಲಿ ಹಲ್ಲೆ ಮಾಡಿದ್ದಾರೆ ತೋರಿಸು. ಹೇಗೆ ಹೊಡೆದಿದ್ದಾರೆ? ಯಾವ ಭಾಗಕ್ಕೆ ಹೊಡೆದರು ಎಂದು ಪ್ರಶ್ನಿಸಿ ಅಸಭ್ಯವಾಗಿ ವರ್ತಿಸಿದ್ದರು ಎಂದು ದೂರಿದ್ದಾರೆ.

ಶೇಖವ್ವ ಆರೋಪ ಮಾಡುತ್ತಿದ್ದಂತೆ ಸಂಬಂಧಿಕರು ಚಿದಾನಂದ ಅವರ ಸುತ್ತ ನಿಂತು ಎಳೆದಾಡಿ ಹಲ್ಲೆ ಮಾಡಿದ್ದಾರೆ. ಬಳಿಕ ಎಸ್‍ಪಿ ಕಚೇರಿಗೆ ತೆರಳಿ ಚಿದಾನಂದ ವಿರುದ್ಧ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಹೆಚ್ಚುವರಿ ಎಸ್‍ಪಿ ಜಗದೀಶ್ ತನಿಖೆಗೆ ನಡೆಸುವುದಾಗಿ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *