ದೋಸ್ತಿ ಪಕ್ಷಗಳಲ್ಲಿ ಗೆಲ್ಲೋರು ಯಾರು – ಗದ್ದುಗೆ ಕನಸು ಕಾಣ್ತಿರೋ ಕಮಲಕ್ಕೆ ಬರುತ್ತಾ ಶ್ರಾವಣ?

Public TV
2 Min Read

ಬೆಂಗಳೂರು: ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಲೋಕಲ್ ರಿಸಲ್ಟ್ ಕ್ಷಣ ಬಂದೇ ಬಿಟ್ಟಿದೆ. ಆಗಸ್ಟ್ 31ರಂದು 102 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ.

ಬೆಳಗ್ಗೆ 8 ಗಂಟೆಯಿಂದ 22 ಜಿಲ್ಲೆಗಳ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಶುರುವಾಗಲಿದೆ. ಇದೇ ಮೊದಲ ಬಾರಿಗೆ ಸ್ಥಳೀಯ ಚುನಾವಣೆಗಳಲ್ಲಿ ಇವಿಎಂ ಬಳಸಿರುವ ಕಾರಣ ಬೆಳಗ್ಗೆ 11 ಗಂಟೆ ಸುಮಾರಿಗೆ ಸ್ಷಷ್ಟ ಚಿತ್ರಣ ಸಿಗುವ ಸಾಧ್ಯತೆಗಳಿವೆ.

ಮೈಸೂರು, ತುಮಕೂರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಸೇರಿದಂತೆ 22 ಜಿಲ್ಲೆಗಳ 29 ನಗರಸಭೆ, 53 ಪುರಸಭೆ, 20 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆದಿತ್ತು. ಶೇಕಡಾ 67.51ರಷ್ಟು ಮತದಾನವಾಗಿತ್ತು. ಒಟ್ಟು 2634 ವಾರ್ಡ್‍ಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ತಿರೋ 9,121 ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಲೋಕಸಭಾ ಚುನಾವಣೆ ಇನ್ನೇನು ಕೆಲವೇ ತಿಂಗಳಲ್ಲಿ ಎದುರಾಗುತ್ತಿರೋ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಗೆ ಈ ಲೋಕಲ್ ಫಲಿತಾಂಶ ತುಂಬಾನೆ ಮುಖ್ಯವಾಗಿದೆ. ಮೊನ್ನೆಯಷ್ಟೇ ಶತಕ ಬಾರಿಸಿದ ಖುಷಿಯಲ್ಲಿರುವ ದೋಸ್ತಿ ಸರ್ಕಾರಕ್ಕೆ ಮತ್ತು ವಿಪಕ್ಷ ಬಿಜೆಪಿಗೆ ಇದು ಲಿಟ್ಮಸ್ ಟೆಸ್ಟ್ ನಂತೆ. ಯಾಕಂದ್ರೆ ವಿಧಾನಸೌಧದಲ್ಲಿ ಮಾತ್ರ ಮೈತ್ರಿ ಮಾಡಿಕೊಂಡು ಸ್ಥಳೀಯ ಮಟ್ಟದಲ್ಲಿ ನೇರ-ನೇರ ಅಧಿಕಾರಕ್ಕಾಗಿ ಯುದ್ಧ ನಡೆಸಿರೋ ಜೆಡಿಎಸ್ ಮತ್ತು ಕಾಂಗ್ರೆಸ್‍ಗೆ ಅಸ್ತಿತ್ವ ಉಳಿಸಿಕೊಳ್ಳುವ ನಿಜವಾದ ಸವಾಲಿದೆ.

ದೋಸ್ತಿಗಳ ನಡುವಿನ ಕಿತ್ತಾಟದಿಂದ ಅಧಿಕಾರದ ಕನಸು ಕಾಣುತ್ತಿರೋ ಬಿಜೆಪಿಗೆ ಕೂಡ ಸ್ಥಳೀಯ ಸಂಸ್ಥೆ ರೂಪದಲ್ಲಿ ಶ್ರಾವಣದ ಸವಾಲು ಎದುರಾಗಿದೆ. ಇಲ್ಲಿ ಮತ ಪ್ರಭುಗಳು ನೀಡುವ ಫಲಿತಾಂಶದ ಆಧಾರದ ಮೇಲೆ ರಾಜಕೀಯ ಪಕ್ಷಗಳು ತಮ್ಮ ಮುಂದಿನ ಕಾರ್ಯತಂತ್ರಗಳನ್ನ ರೂಪಿಸಿಕೊಳ್ಳಲಿವೆ.

ನಗರಸಭೆಯ 12, ಪುರಸಭೆಯ 17 ವಾರ್ಡ್ ಗಳಲ್ಲಿ ಅವಿರೋಧ ಆಯ್ಕೆ ನಡೆದಿತ್ತು. ಪ್ರಕೃತಿ ವಿಕೋಪಕ್ಕೆ ತುತ್ತಾದ ಮಡಿಕೇರಿ 3 ಪಟ್ಟಣ ಪಂಚಾಯಿತಿಗಳಲ್ಲಿ ಚುನಾವಣೆ ಮುಂದೂಡಲಾಗಿತ್ತು. ಕಲಬುರಗಿ ಜಿಲ್ಲೆಯ ಅಫಜಲಪುರ ಪುರಸಭೆಯ 19ನೇ ವಾರ್ಡ್‍ನಲ್ಲಿ ಸಲ್ಲಿಕೆಯಾಗಿದ್ದ ಎಲ್ಲಾ ನಾಮಪತ್ರ ತಿರಸ್ಕೃತವಾದ ಕಾರಣ ಅಲ್ಲಿ ಚುನಾವಣೆ ನಡೆದಿರಲಿಲ್ಲ. ಕೊಳ್ಳೆಗಾಲ ನಗರಸಭೆಯ 9ನೇ ವಾರ್ಡ್ ನಲ್ಲಿ ಬಿಎಸ್‍ಪಿ ಅಭ್ಯರ್ಥಿ ನಿಧನರಾದ ಹಿನ್ನೆಲೆಯಲ್ಲಿ ಅಲ್ಲಿಯೂ ಚುನಾವಣೆ ಮುಂದೂಡಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *