ಮಡಿಕೇರಿ – ಮಂಗಳೂರು ರಸ್ತೆ ಲಘು ವಾಹನ ಸಂಚಾರಕ್ಕೆ ಮುಕ್ತ

Public TV
1 Min Read

ಮಡಿಕೇರಿ: ಭಾರೀ ಮಳೆಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ತಡೆಗೋಡೆಯಲ್ಲಿ ಉಬ್ಬು ಕಂಡು ಬಂದಿದ್ದರಿಂದ ತಾತ್ಕಾಲಿಕವಾಗಿ ನಿಷೇಧಿಸಿದ್ದ ಮಡಿಕೇರಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದಿನಿಂದ ಕೊಡಗು ಜಿಲ್ಲಾಡಳಿತ ಲಘು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಿದೆ.

ಕೊಡಗು ಜಿಲ್ಲೆಯಲ್ಲಿ ಕಳೆದ 20 ದಿನಗಳು ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಅನೇಕ ಅವಾಂತರಗಳು ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮಡಿಕೇರಿ, ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಡಿಕೇರಿ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಇರುವ ತಡೆಗೋಡೆಯಲ್ಲಿ ಉಬ್ಬು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 275ರ ಸಂಪರ್ಕವನ್ನು ನಿಷೇಧ ಮಾಡಲಾಯಿತು. ಅಲ್ಲದೆ ತಡೆಗೋಡೆಯ ಉಬ್ಬುವಿಕೆಯನ್ನು ತಡೆಯಲು ತಾತ್ಕಾಲಿಕವಾಗಿ ಸ್ಯಾಂಡ್ ಬಂಡಲ್‍ಗಳನ್ನು ಹಾಕಿ ಕಾಮಗಾರಿಯನ್ನು ಮಾಡಲಾಗಿತ್ತು.

ಇದೀಗ ಕಳೆದ ಮೂರು- ನಾಲ್ಕು ದಿನಗಳಿಂದ ಮಳೆ ಕೊಂಚ ಬಿಡುವು ನೀಡಿರುವುದರಿಂದ ಜಿಲ್ಲಾಡಳಿತ ಭವನದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಘು ವಾಹನಗಳು ದ್ವಿಮುಖವಾಗಿ ಸಂಚರಿಸಬಹುದು ಎಂದು ಕೊಡಗು ಜಿಲ್ಲಾಡಳಿತ ಅಧಿಕೃತ ಆದೇಶ ನೀಡಿದೆ. ಇದನ್ನೂ ಓದಿ: ನಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡ್ತಿದ್ದೇವೆ: ಬಿಜೆಪಿ ಕಾರ್ಯಕರ್ತ ಚಂದ್ರಹಾಸ್

ಇಂದಿನಿಂದ 7+1 ಸೀಟರ್‌ಗಿಂತ ಹೆಚ್ಚಿನ ಸಾಮರ್ಥ್ಯದ 4 ಚಕ್ರದ ವಾಹನಗಳು ಮಂಗಳೂರು ಕಡೆಗೆ ಏಕಮುಖವಾಗಿ ಸಂಚರಿಸಬಹುದು. 7+1 ಸೀಟರ್‌ಗಿಂತ ಹೆಚ್ಚಿನ ಸಾಮರ್ಥ್ಯದ 4 ಚಕ್ರದ ವಾಹನಗಳು ಮಂಗಳೂರಿನಿಂದ ಮಡಿಕೇರಿ ಕಡೆಗೆ ಸಂಪಾಜೆ- ತಾಳತ್ತಮನೆ- ಮೇಕೇರಿ ಮಾರ್ಗವಾಗಿ ಏಕಮುಖವಾಗಿ ಸಂಚರಿಸಬಹುದು. 16.2 ಟನ್ ಒಳಪಟ್ಟ ಸರಕು ಸಾಗಣೆ ವಾಹನಗಳು, ಖಾಸಗಿ ಮತ್ತು ಕೆಎಸ್‍ಆರ್‌ಟಿಸಿ ಬಸ್‍ಗಳು, ಅನಿಲ, ರಸಗೊಬ್ಬರ ಹಾಗೂ ಇಂಧನ ಸಾಗಣೆ ವಾಹನಗಳು ಎರಡು ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದನ್ನೂ ಓದಿ: ತಡೆಗೋಡೆ ಕುಸಿತ : ಮಡಿಕೇರಿ – ಮಂಗಳೂರು ರಸ್ತೆ ಸಂಚಾರ ಬಂದ್‌

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *