ಗದಗ: ಪ್ರೀತಿಸಿದ ತಪ್ಪಿಗೆ ಯುವ ಪ್ರೇಮಿಗಳಿಗೆ ಮನೆಯವರ ಭಯ ಕಾಡುತ್ತಿದ್ದು, ಹೇಗಾದರು ಮಾಡಿ ತಮ್ಮ ಪ್ರೇಮ ಉಳಿಸಿಕೊಳ್ಳಲು ಯುವ ಜೋಡಿ ಈಗ ಪೊಲೀಸ್ ಠಾಣೆ ಅಲೆದಾಡುತ್ತಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಕೃಷ್ಣ ಗದಗ ಜಿಲ್ಲೆಯ ನರಗುಂದ ಪಟ್ಟಣದ ನಿವಾಸಿಯಾಗದ್ದು, ಭಾಗೀರಥಿ ಕೇರಳದ ಕಾಸರಗೋಡು ನಿವಾಸಿಯಾಗಿದ್ದಾಳೆ. ಕಳೆದ ಎರಡು ವರ್ಷಗಳ ಹಿಂದೆ ಕೃಷ್ಣ ಕೆಲಸ ಮಾಡಿ ಬದುಕಿಗೊಂದು ನೆಲೆ ಕಂಡುಕೊಳ್ಳುವ ಹಂಬಲದಿಂದ ಕೇರಳಕ್ಕೆ ಹೋಗಿದ್ದನು.
ಅಲ್ಲಿ ಪ್ರೀತಿ ಎಂಬ ಮಾಯೆಗೆ ಸಿಲುಕಿ ತಾನು ವಾಸವಾಗಿದ್ದ ಮನೆಯ ಪಕ್ಕದಲ್ಲಿ ಇರುವ ಭಾಗೀರಥಿ ಎಂಬ ಕೇರಳದ ಯುವತಿಯನ್ನು ಪ್ರೀತಿಸಿದನು. ಆದರೆ ಇದೀಗ ಇವರಿಬ್ಬರು ವಯಸ್ಕರಾಗಿದ್ದು, ಕುಟುಂಬದವರೇ ಇವರ ಪ್ರೀತಿಗೆ ವಿಲನ್ ಆಗಿದ್ದಾರೆ. ಇದರಿಂದಾಗಿ ಇವರ ಪ್ರೀತಿ ಎಲ್ಲಿ ಕೈ ತಪ್ಪುತ್ತೋ ಎನ್ನುವ ಆತಂಕ ಈ ಯುವ ಜೋಡಿಗೆ ಎದುರಾಗಿದೆ. ಹೇಗಾದರು ಮಾಡಿ ತಮ್ಮ ಪ್ರೀತಿ ಉಳಿಸಿಕೊಳ್ಳಲು ಸದ್ಯ ಈ ಜೋಡಿ ಪರದಾಡುತ್ತಿದೆ. ಅನಿವಾರ್ಯವಾಗಿ ತಮ್ಮ ರಕ್ಷಣೆಗೆ ಗದಗ ಎಸ್.ಪಿ ಕಚೇರಿ ಮೆಟ್ಟಿಲೇರಿದ್ದಾರೆ. ನಮಗೆ ರಕ್ಷಣೆಕೊಡಿ ಜೊತೆಗೆ ಬಾಳಿಬದುಕಲು ಬಿಡಿ ಎಂದು ಪ್ರಿಯಕರ ಕೃಷ್ಣ ಕೇಳಿಕೊಂಡಿದ್ದಾನೆ.
ಈ ಪ್ರೇಮಿಗಳ ಪ್ರೇಮಾಂಕುರವಾಗೋ ವೇಳೆ ಭಾಗೀರಥಿಗೆ 16 ವರ್ಷ ವಯಸ್ಸಾಗಿತ್ತು. ಆದರೆ ಇತ್ತೀಚಿಗೆ ಮನೆಯಲ್ಲಿ ಇವರಿಬ್ಬರ ಪ್ರೀತಿ ವಿಷಯ ಗೊತ್ತಾಗಿ ಬೇರೆ ಮಾಡಲು ಮುಂದಾದರು. ಆಗ ಅವಳಿಗೆ ವಯಸ್ಸು 17 ವರ್ಷ 6 ತಿಂಗಳು. ಅನಿವಾರ್ಯವಾಗಿ ಇಬ್ಬರು ಪರಾರಿಯಾಗಿ ತನಗೊಂದು ಕೆಲಸ, ತನ್ನ ಪ್ರಿಯತಮೆಗೊಂದು ಕೆಲಸ ಹುಡುಕಿಕೊಂಡು 5 ತಿಂಗಳು ಬೇರೆಯಾಗಿದ್ದಾರೆ. ಇಷ್ಟೆಲ್ಲಾ ಆಗುವುದರೊಳಗೆ ಭಾಗೀರಥಿ ಮನೆಯವರು ಕೇರಳದ ಕಾಸರಗೋಡು ಪೊಲೀಸ್ ಠಾಣೆಯಲ್ಲಿ ಕೃಷ್ಣ ವಿರುದ್ಧ ಕಿಡ್ನಾಪ್ ಕೇಸ್ ದಾಖಲಿಸಿದ್ದಾರೆ. ಕೃಷ್ಣನನ್ನು ಹುಡುಕಿಕೊಂಡು ಕೇರಳ ಪೊಲೀಸರು ಗದಗ ಜಿಲ್ಲೆಯ ನರಗುಂದದ ಕೃಷ್ಣ ಮನೆಗೂ ಬಂದಿದ್ದಾರೆ.
ಇದನ್ನೆಲ್ಲ ತಿಳಿದ ಕೃಷ್ಣ ಹಾಗೂ ಭಾಗೀರಥಿ ದೇವಸ್ಥಾನದಲ್ಲಿ ಮದುವೆಯಾಗಿ ಮರಳಿ ನರಗುಂದ ಪಟ್ಟಣಕ್ಕೆ ಬಂದು ವಾಪಸ್ಸಾಗಿದ್ದಾರೆ. ನಮ್ಮ ಇಬ್ಬರನ್ನೂ ಕೇರಳಕ್ಕೆ ಕಳುಹಿಸಬೇಡಿ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಜೋಡಿಗಳು ಪರದಾಡುತ್ತಿವೆ. ಸಾಲದಕ್ಕೆ ಬಾಗೀರಥಿ ಕುಟುಂಬದಿಂದ ಜೀವ ಬೆದರಿಕೆ ಇದೆ. ನಮಗೆ ರಕ್ಷಣೆಕೊಡಿ. ನಾನು ಬದುಕಿದರೂ ಅವನೊಂದಿಗೆ ಸತ್ತರೂ ಅವನೊಂದಿಗೆ ಸಾಯಲು ಸಿದ್ಧ ಎಂದು ಇದೀಗ ಹೇಳುತ್ತಿದ್ದಾಳೆ.
ಒಟ್ಟಿನಲ್ಲಿ ಕೇರಳ ರಾಜ್ಯದಲ್ಲಿ ಕೆಲಸಕ್ಕೆ ಹೋದ ಹುಡುಗ ಪ್ರೀತಿಯ ಬಲೆಗೆ ಬಿದ್ದು, ಪ್ರೀತಿ ಉಳಿಸಿಕೊಳ್ಳಲು ಹೆಣಗಾಡುವಂತಾಗಿದೆ. ಇಬ್ಬರು ಮನಸಾರೆ ಒಪ್ಪಿದ್ರೂ ಇವರ ಪ್ರೇಮಕ್ಕೀಗ ಆತಂಕ ಎದುರಾಗಿದೆ.