ಚಿನ್ನಸ್ವಾಮಿ ಘಟನೆ ಬಗ್ಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮಾತಾಡಲಿ: ಅರವಿಂದ್ ಬೆಲ್ಲದ್

Public TV
1 Min Read

ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ರಾಹುಲ್ ಗಾಂಧಿ (Rahul Gandhi), ಸೋನಿಯಾ ಗಾಂಧಿ (Sonia Gandhi) ಮಾತನಾಡಬೇಕು ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ್ ಬೆಲ್ಲದ್ (Arvind Bellad) ಕಾಂಗ್ರೆಸ್ ಹೈಕಮಾಂಡ್‌ಗೆ ಆಗ್ರಹಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಚಿನ್ನಸ್ವಾಮಿ ಕಾಲ್ತುಳಿತ ಘಟನೆಗೆ ಸಿಎಂ, ಡಿಸಿಎಂ, ಗೃಹ ಸಚಿವರೇ ಕಾರಣ. ತಕ್ಷಣ ಹೊಣೆ ಹೊತ್ತು 3 ಜನ ರಾಜೀನಾಮೆ ಕೊಡಬೇಕು. ವಿಧಾನಸೌಧ ಎದುರಿನ ವೇದಿಕೆ 25-30 ಜನರಿಗೆ ಮಾತ್ರ ಸೀಮಿತವಾಗಿತ್ತು. ಆದರೆ 350 ಜನ ಬಂದಿದ್ದರು. ಸಚಿವರ ಕುಟುಂಬದವರೇ ತುಂಬಿದ್ದರು. ಘಟನೆ ಬಳಿಕ ಕಣ್ಣೀರಿನ ರಾಜಕಾರಣ ಮಾಡಿದರು. ಘಟನೆ ತಿಳಿದಿದ್ದರೂ ಡಿಸಿಎಂ ಸ್ಟೇಡಿಯಂಗೆ ಹೋಗಿ ಕಪ್‌ಗೆ ಮುತ್ತು ಕೊಟ್ಟಿದ್ದಾರೆ. ಸಾವಿನ ಮೇಲೆ ರಾಜಕೀಯ ಮಾಡುತ್ತಿರುವುದು ಯಾರು? ನಾಚಿಕೆ ಆಗಲ್ವಾ ಇವರಿಗೆ? ನಿಮಗೆ ಮಕ್ಕಳಿಲ್ವಾ, ಮನುಷ್ಯತ್ವ ಇಲ್ವಾ? ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 11 ಅಮಾಯಕ ಜೀವಗಳ ಬಲಿ ಪಡೆದು ಈ ಸರ್ಕಾರ ಪಾಪಕ್ಕೆ ಗುರಿಯಾಗಿದೆ: ಸೋಮಣ್ಣ

ಈಗ ವಿಷಯಾಂತರ ಮಾಡಲು ಮುಂದಿನ ಸಂಪುಟಕ್ಕೆ ಜಾತಿಗಣತಿ ವಿಷಯ ತರುತ್ತಿದ್ದಾರೆ.ರಾಜ್ಯದ ಜನ ಇವರನ್ನು ಕ್ಷಮಿಸಲ್ಲ. ಜನರ ಮುಂದೆ ನಾವು ಹೋಗಬೇಕಾದ ಅವಶ್ಯಕತೆ ಇದೆ. ಈ ಬಗ್ಗೆ ಪಕ್ಷದಲ್ಲಿ ಚರ್ಚೆ ಮಾಡುತ್ತಿದ್ದೇವೆ.ನಿಜವಾದ ತಲೆದಂಡ ಆಗಬೇಕಾಗಿದ್ದು ಪೊಲಿಸರದ್ದಲ್ಲ. ಸಿಎಂ, ಡಿಸಿಎಂ, ಗೃಹ ಸಚಿವರ ತಲೆದಂಡ ಆಗಬೇಕು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಏನೂ ಮಾತಾಡಿಲ್ಲ. ಮಲಗಿಕೊಂಡಿದ್ದಾರಾ ಅವರು? ಕಾಂಗ್ರೆಸ್ ಹೈಕಮಾಂಡ್ ಘಟನೆ ಬಗ್ಗೆ ಮಾತನಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆ ಸರ್ಕಾರದ ಪ್ರಾಯೋಜಿತ ಕೊಲೆ: ಅರಗ ಜ್ಞಾನೇಂದ್ರ

Share This Article