ನಾಲ್ವರನ್ನು ಬಲಿ ಪಡೆದಿದ್ದ ನರಭಕ್ಷಕ ಚಿರತೆಗಾಗಿ ಕೂಂಬಿಂಗ್ – ಕಾರ್ಯಾಚರಣೆ ವೇಳೆ ಮತ್ತೊಂದು ಚಿರತೆ ಸೆರೆ

Public TV
1 Min Read

ತುಮಕೂರು: ನಾಲ್ವರನ್ನ ಬಲಿ ತೆಗೆದುಕೊಂಡಿದ್ದ ನರಭಕ್ಷಕ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಸಾಕಷ್ಟು ಕೂಂಬಿಂಗ್ ನಡೆಸ್ತಾನೆ ಇದೆ. ಆದರೆ ಆ ನರಭಕ್ಷಕ ಚಿರತೆ ಮಾತ್ರ ಸೆರೆ ಸಿಕ್ಕಿಲ್ಲ. ಈ ನಡುವೆ ತಾಲೂಕಿನ ಹಾಲನೂರು ಗ್ರಾಮದ ಸೇತುವೆ ಬಳಿ ಕಾಣಿಸಿಕೊಂಡ ಚಿರತೆಯನ್ನ ಅರಣ್ಯ ಇಲಾಖೆ ಯಶಸ್ವಿಗಾಗಿ ಸೆರೆ ಹಿಡಿದಿದೆ.

ನರಭಕ್ಷರ ಚಿರತೆ ಸೆರೆಗಾಗಿ ನಾಲ್ಕು ಆನೆ, ನೂರಾರು ಅರಣ್ಯ ಸಿಬ್ಬಂದಿ, ಗ್ರಾಮಸ್ಥರು ಹಗಲು ರಾತ್ರಿ ನಿಂತರವಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಆದರೂ ಚಾಲಾಕಿ ನರಭಕ್ಷಕ ಚಿರತೆ ಮಾತ್ರ ಯಾರ ಕಣ್ಣಿಗೂ ಬೀಳುತ್ತಲೇ ಇಲ್ಲ. ಈ ನಡುವೆ ತುಮಕೂರು ತಾಲೂಕಿನ ಹಾಲನೂರಿನಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ. ಗ್ರಾಮದ ಬಳಿ ಕಾಣಿಸಿಕೊಂಡ ಚಿರತೆ ಕಂಡು ಜನರು ಕೂಗಾಡಿದ್ದರು. ಇದರಿಂದ ಗಾಬರಿಗೊಂಡ ಚಿರತೆ ರಸ್ತೆ ಪಕ್ಕದಲ್ಲಿದ್ದ ಸೇತುವೆ ಕೆಳಗೆ ಅವಿತು ಕುಳಿತುಕೊಂಡಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಗ್ರಾಮಸ್ಥರು ಸಿಬ್ಬಂದಿ ಬರುವವರೆಗೂ ಚಿರತೆ ಹೊರಗೆ ಬರದಂತೆ ಕಾದು ಕೂತು, ಅದನ್ನ ಸುರಕ್ಷಿತವಾಗಿ ಸೆರೆ ಹಿಡಿಯಲು ಸಹಕರಿಸಿದ್ದಾರೆ.

ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರನ್ನ ಸ್ಥಳದಿಂದ ದೂರಕ್ಕೆ ಕಳಿಸೋದೇ ದೊಡ್ಡ ಸವಾಲಾಗಿತ್ತು. ಸೇತುವೆಯ ಎರಡೂ ಕಡೆಗಳಲ್ಲೂ ಚಿರತೆ ತಪ್ಪಿಸಿಕೊಳ್ಳದಂತೆ ಅಗತ್ಯ ಕ್ರಮಗಳನ್ನ ಕೈಗೊಂಡು, ಒಂದು ಕಡೆಯಿಂದ ಬಲೆ ಇಟ್ಟು, ಮತ್ತೊಂದು ಕಡೆಯಿಂದ ಅರವಳಿಕೆ ಚುಚ್ಚು ಮದ್ದು ನೀಡಿ ಚಿರತೆ ಸೆರೆಗೆ ಸನ್ನದ್ದರಾಗಿದ್ದರು.

ಹಾಲನೂರಿನಲ್ಲಿ ಸೆರೆ ಸಿಕ್ಕ ಚಿರತೆ ಸುಮಾರು 7 ವರ್ಷ ಪ್ರಾಯದ್ದಾಗಿದ್ದು, ಸುಮಾರು 2 ಗಂಟೆಗಳ ಕಾಲ ನಡೆದ ಕಾರ್ಯಚರಣೆ ಬಳಿಕ ಚಿರತೆಯನ್ನ ಹಿಡಿಯುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇಲ್ಲಿಯವರೆಗೂ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದ ಹಾಗೂ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ 3 ಚಿರತೆಗಳು ಸೇರಿ ಒಟ್ಟು ನಾಲ್ಕು ಚಿರತೆಗಳನ್ನ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಆದರೆ ಗ್ರಾಮಸ್ಥರು ಈ ಭಾಗದಲ್ಲಿ ಇನ್ನೂ ಆರೇಳು ಚಿರತೆಗಳು ಓಡಾಡುತ್ತಿವೆ ಎಂದು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *