ಮೋದಿ ಹೆಸರನ್ನು ಎತ್ತಿದ್ದಕ್ಕೆ ಬಿಎಸ್‍ವೈಗೆ ಲೆಹರ್ ಸಿಂಗ್ ಟಾಂಗ್

Public TV
2 Min Read

ಬೆಂಗಳೂರು: ಪ್ರತಿಪಕ್ಷಗಳನ್ನು ಹೆದರಿಸಲು ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ಹೆಸರು ಬಳಕೆ ಮಾಡುವಂತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ಸಿರೋಯಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಪ್ರತಿ ವಿಷಯಕ್ಕೂ ಪ್ರಧಾನಿ ಮೋದಿ ಅಥವಾ ಕೇಂದ್ರೀಯ ಸಂಸ್ಥೆಗಳ ಹೆಸರನ್ನು ಎಳೆದು ತರುವ ಅಧಿಕಾರ ಪಕ್ಷದ ಯಾರೊಬ್ಬರಿಗೂ ಇಲ್ಲ ಎಂದಿದ್ದಾರೆ.

ಬಿಎಸ್‍ವೈ ಹೇಳಿದ್ದು ಏನು? ಶಿವರಾಮ ಕಾರಂತ ಬಡಾವಣೆ ಬಗ್ಗೆ ತನಿಖೆ ಮಾಡಿ, ಸತ್ಯ ಜನತೆಗೆ ಗೊತ್ತಾಗಲಿ. ಅದನ್ನು ಬಿಟ್ಟು ಧಮಕಿ ಹಾಕಿದರೆ ಏನು ನಡೆಯಲ್ಲ. ದೇವೇಗೌಡರು ಹಾಗೂ ಕುಮಾರಸ್ವಾಮಿ ಕುಟುಂಬ ಮೈಸೂರಿನಲ್ಲಿ ಎಷ್ಟು ಸೈಟ್ ಮಾಡಿಕೊಂಡಿದೆ ಎಂಬುದು ಚೆನ್ನಾಗಿ ಗೊತ್ತಿದೆ. ಎಲ್ಲವನ್ನೂ ದಾಖಲೆ ಸಮೇತ ಹೊರಕ್ಕೆ ಇಡುತ್ತೇನೆ. ಇಲ್ಲಿ ನಿಮ್ಮ ಅಧಿಕಾರವಿರಬಹುದು ಆದರೆ ಕೇಂದ್ರದಲ್ಲಿ ನಮ್ಮ ಅಧಿಕಾರ ಇದೆ. ಯಾವಾಗ ಏನು ಮಾಡುಬೇಕು ಎಂಬುದು ನಿಮಗಿಂತ ಚೆನ್ನಾಗಿ ನಮಗೆ ಗೊತ್ತು ಎಂದು ಕುಮಾರಸ್ವಾಮಿ ವಿರುದ್ಧ ಗುಡುಗಿದ್ದರು. ಇದನ್ನು ಓದಿ: ಸಿಎಂ ಎಚ್‍ಡಿಕೆ ವಿರುದ್ಧ ಬಿಜೆಪಿಯ ತಾಜ್ ಮೇಲಿನ ದಂಗೆಯ ಇನ್ ಸೈಡ್ ಸ್ಟೋರಿ ಇಲ್ಲಿದೆ

ಲೆಹರ್ ಸಿಂಗ್ ಹೇಳಿಕೆಯಲ್ಲಿ ಏನಿದೆ? ನರೇಂದ್ರ ಮೋದಿ ಅವರು ಎರಡನೇ ಬಾರಿ ಮತ್ತೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವುದನ್ನು ನಾವು ಖಚಿತಪಡಿಸಿಕೊಳ್ಳಲೇಬೇಕು. ಇದಕ್ಕಾಗಿ 2014ರ ಲೋಕಸಭಾ ಚುನಾವಣೆಗಿಂತ ಈ ಬಾರಿ ಹೆಚ್ಚು ಸ್ಥಾನಗಳನ್ನು ಗಳಿಸಿ, ಬಹುಮತ ಪಡೆಯಲೇ ಬೇಕು. ದಕ್ಷಿಣ ಭಾರತದಲ್ಲಿ ಬಿಜೆಪಿ ಬಲಿಷ್ಟವಾಗಿರುವುದು ಕರ್ನಾಟಕದಲ್ಲಿ. ಹೀಗಾಗಿ ನನಗೆ ಪ್ರತಿಯೊಂದು ಲೋಕಸಭಾ ಕ್ಷೇತ್ರವೂ ಮಹತ್ವದ್ದಾಗಿದೆ.

ಲೋಕಸಭಾ ಚುನಾವಣೆ ಸಿದ್ಧತೆಯಲ್ಲಿರುವ ಪಕ್ಷದ ಕೇಂದ್ರಿಯ ನಾಯಕತ್ವದ ಗಮನವೆಲ್ಲವೂ ಚುನಾವಣಾ ಕಾರ್ಯತಂತ್ರ, ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮತ್ತು ಈ ಸಮರಕ್ಕೆ ಕಾರ್ಯಕರ್ತರನ್ನು ಸಿದ್ಧಗೊಳಿಸುವಲ್ಲಿ ನಿರತರಾಗಿದ್ದಾರೆ. ಇತ್ತ ಕರ್ನಾಟಕದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಅವರ ಗಮನ ವಿಚಲಿತಗೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಗೋವಾ ರಾಜ್ಯದಲ್ಲಿ ರಾಜಕೀಯ ಸವಾಲುಗಳನ್ನು ಎದುರಿಸಬೇಕಿದೆ. ಜೊತೆಗೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಢ್ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಸಿದ್ಧತೆ ನಾಯಕರು ತೊಡಗಿಕೊಂಡಿದ್ದಾರೆ. ಇದನ್ನು ಓದಿ: `ಆ ದಿನ’ ನೀವು ಬೆಂಗಳೂರಿನಲ್ಲೇ ಇರಿ, ಯಾವುದೇ ಕಾರಣಕ್ಕೂ ಮಿಸ್ ಆಗಬಾರದು- ಬಿಎಸ್‍ವೈ

ರಾಜ್ಯದಲ್ಲಿ ನಾವು ಪ್ರತಿಪಕ್ಷಗಳನ್ನು ಎದುರಿಸುವಾಗ, ಎಲ್ಲದಕ್ಕೂ ಪ್ರಧಾನ ಮಂತ್ರಿಗಳ ಹಾಗೂ ಕೇಂದ್ರ ಸರ್ಕಾರದ ಹೆಸರನ್ನು ಎಳೆದು ತರಲಾಗದು. ನಮ್ಮ ಸಣ್ಣ ಉದ್ದೇಶಗಳಿಗಾಗಿ ಪ್ರಧಾನಿ ಹೆಸರನ್ನು ಬಳಸಿ, ಅವರ ಘನತೆಯನ್ನು ಕಡಿಮೆ ಮಾಡುವುದಾಗಲಿ, ಕೇಂದ್ರ ಸರ್ಕಾರ ಮುಯ್ಯಿ ತೀರಿಸಲಿದೆ ಎನ್ನುವಂತೆ ಬಿಂಬಿಸುವುದಾಗಲಿ ಮಾಡಬಾರದು. ಅಲ್ಲದೆ ಹೀಗೆ ಮಾಡುವ ಅಧಿಕಾರ ಪಕ್ಷದ ಯಾರಿಗೂ ನೀಡಿಲ್ಲ ಎನ್ನುವುದು ನನ್ನ ಭಾವನೆಯಾಗಿದೆ. ಕಾನೂನನ್ನು ಅತಿಕ್ರಮಿಸಿದರು ಯಾರೇ ಇರಲಿ, ಈ ದೇಶದ ಕಾನೂನಿನ ಅನ್ವಯವೇ ಪರಿಣಾಮವನ್ನೂ ಎದುರಿಸಬೇಕಾಗುತ್ತದೆ. ಹೊರತು ಯಾರೋ ವ್ಯಕ್ತಿಗಳ ಅಭಿಲಾಷೆ ಅಥವಾ ಬಯಕೆಗಳಿಗೆ ತಕ್ಕಂತೆ ಅಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *