ಮೋದಿ, ಶಾ, ಬಿಎಸ್‍ವೈ ಕಟ್ಟಿಹಾಕಲು ಸಿಎಂ ಕಟ್ಟುತ್ತಿದ್ದಾರೆ LDMK ಸೇನೆ!

Public TV
2 Min Read

ಬೆಂಗಳೂರು: ತಮಿಳುನಾಡಿನ ರಾಜಕೀಯದಲ್ಲಿ ನೀವೆಲ್ಲಾ ಎಐಡಿಎಂಕೆ, ಡಿಎಂಕೆ, ಪಿಎಂಕೆ ಹೆಸರುಗಳನ್ನ ಕೇಳಿರಬಹುದು. ಆದ್ರೆ ನಮ್ಮ ರಾಜ್ಯದಲ್ಲಿ ಆ ಹೆಸರುಗಳು ಅಷ್ಟೊಂದು ಸದ್ದು ಮಾಡಿಲ್ಲ. ಇನ್ನು ಎಲ್‍ಡಿಎಂಕೆ 2 ಹೆಸರನ್ನು ಕೇಳಿಯೇ ಇಲ್ಲ. ಆದರೆ ಈಗ ಇದೇ ಎಲ್‍ಡಿಎಂಕೆ ಸದ್ದು ಮಾಡಲು ಸಜ್ಜಾಗುತ್ತಿದೆ.

2018ರ ಎಲೆಕ್ಷನ್‍ನಲ್ಲಿ ಇದೇ ಎಲ್‍ಡಿಎಂಕೆ ಕಾಂಬಿನೇಶನ್ ಹೆಚ್ಚು ಮಾಡಲಿದೆ. ಎಲ್ ಅಂದ್ರೆ ಲಿಂಗಾಯಿತ, ಡಿ ಅಂದ್ರೆ ದಲಿತ, ಎಂ ಅಂದ್ರೆ ಮುಸ್ಲಿಂ, ಕೆ ಸ್ಕ್ವಯರ್ ಅಂದ್ರೆ ಕುರುಬ ಪ್ಲಸ್ ಕನ್ನಡಿಗ. ಅಂದಹಾಗೆ ಈ ಕಾಂಬಿನೇಶನ್‍ನ ಕ್ಯಾಪ್ಟನ್ ಸಿಎಂ ಸಿದ್ದರಾಮಯ್ಯ. 2018ರ ಎಲೆಕ್ಷನ್‍ಗೆ ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಬಿಎಸ್‍ವೈ ಕಟ್ಟಿಹಾಕಲು ಎಲ್‍ಡಿಎಂಕೆ ಸ್ಕ್ವಯರ್ ಕಾಂಬಿನೇಶನ್ ಕಾರ್ಡ್ ಪ್ಲೇಗೆ ಮುಂದಾಗಿದ್ದಾರೆ. ಲಿಂಗಾಯಿತ, ದಲಿತ, ಮುಸ್ಲಿಂ, ಕುರುಬ ಸಮುದಾಯಗಳನ್ನು ಒಂದೆಡೆ ಸೇರಿಸಲು ತಂತ್ರ ರೂಪಿಸಿದ್ದಾರೆ.

ಸಮುದಾಯಗಳ ಸಮಾವೇಶ ನಡೆಸ್ತಾರೆ ಸಿದ್ದು:
ಅಂದಹಾಗೆ 2018ರ ಚುನಾವಣೆಗೆ ಸಿದ್ದರಾಮಯ್ಯ ಮುಂದಿನ ತಿಂಗಳಿನಿಂದಲೇ ಅಖಾಡಕ್ಕೆ ಇಳಿಯಲಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯಿತರನ್ನು ಸೆಳೆಯಲು ಸಿದ್ಧತೆ ನಡೆಸಿದ್ದು, ಬೆಳಗಾವಿ, ಹುಬ್ಬಳ್ಳಿ, ಬಾಗಲಕೋಟೆ, ಗುಲ್ಬರ್ಗಾಗಳಲ್ಲಿ ಲಿಂಗಾಯಿತರ ಬೃಹತ್ ಸಮಾವೇಶ ನಡೆಸಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಸಚಿವರಾದ ಎಂ.ಬಿ.ಪಾಟೀಲ್, ವಿನಯ್‍ಕುಲಕರ್ಣಿ, ಉತ್ತರ ಕರ್ನಾಟಕದ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಅವರಿಗೆ ಉಸ್ತುವಾರಿ ವಹಿಸಲಾಗಿದೆ ಎಂದು ಹೇಳಲಾಗುತ್ತದೆ. ಮೂವರು ನಾಯಕರನ್ನು ಮುಂದಿಟ್ಟುಕೊಂಡು ಬಿಎಸ್‍ವೈ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸ್ತಿದ್ದು, ಕೂಡಲಸಂಗಮದಲ್ಲಿ 150 ಕೋಟಿ ವೆಚ್ಚದಲ್ಲಿ ಅಕ್ಷರಧಾಮ ಮಾದರಿಯಲ್ಲಿ ಬಸವಣ್ಣನ ಅನುಭವ ಮಂಟಪ ನಿರ್ಮಾಣಕ್ಕೆ ನಿರ್ಧಾರ ಮಾಡಿದ್ದು, ನವೆಂಬರ್‍ನಲ್ಲಿ ಅಡಿಗಲ್ಲು ಹಾಕುವ ಸಾಧ್ಯತೆ ಇದೆ. ಇಲ್ಲಿಯೇ ವೀರಶೈವ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮಾಸ್ಟರ್ ಫ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.

ಈ ನಡುವೆ ದಲಿತರನ್ನ ಒಗ್ಗೂಡಿಸಲು ಸಿದ್ದರಾಮಯ್ಯ ಫ್ಲ್ಯಾನ್ ಮಾಡಿದ್ದು, ದಲಿತರನ್ನ ಕಾಂಗ್ರೆಸ್‍ನತ್ತ ಸೆಳೆಯಲು ಹಲವು ಕಾಯಕ್ರಮಗಳು ರೂಪಿಸ್ತಿದ್ದಾರೆ. ಅಂಬೇಡ್ಕರ್ ಅವರ 125ನೇ ವರ್ಷಾಚರಣೆ ಹೆಸರಿನಲ್ಲಿ ಹಲವು ಕಾರ್ಯಕ್ರಮ ನಡೆಸುತ್ತಿದ್ದು ಮುಂದೆ ದಲಿತ, ಮುಸ್ಲಿಂ ಸಮಾವೇಶಗಳನ್ನು ನಡೆಸುತ್ತಾರೆ ಎನ್ನಲಾಗಿದೆ.

ಈ ಎಲ್ಲದರ ಜೊತೆ ಆಗಸ್ಟ್ ನಿಂದ ಕಾಂಗ್ರೆಸ್ ನಡಿಗೆ ಜನರ ಬಳಿಗೆ ಕಾರ್ಯಕ್ರಮ ಆರಂಭಿಸುತ್ತಿದ್ದು, ಸಮುದಾಯಗಳ ಓಲೈಕೆಯೇ ಕಾರ್ಯಕ್ರಮದ ಪ್ರಮುಖ ಭಾಗ ಅಂತಾ ಹೇಳಲಾಗುತ್ತಿದೆ.. ಒಟ್ಟಿನಲ್ಲಿ ಸಿದ್ದರಾಮಯ್ಯ ಸದ್ದಿಲ್ಲದೆ ಸಮರಾಭ್ಯಾಸ ಆರಂಭಿಸಿದ್ದು, ಎಲ್‍ಡಿಎಂಕೆ ಕಾಂಬಿನೇಶನ್ ಎಷ್ಟರಮಟ್ಟಿಗೆ ಯಶಸ್ವಿ ಆಗುತ್ತೆ.? ಸಿಎಂಗೆ ತಿರುಗೇಟು ಕೊಡಲು ಶಾ, ಮೋದಿ, ಬಿಎಸ್‍ವೈ ಮೈಂಡ್‍ಗೇಮ್ ಏನು ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಲಿದೆ.

 

Share This Article
Leave a Comment

Leave a Reply

Your email address will not be published. Required fields are marked *