ಪಂಚಭೂತಗಳಲ್ಲಿ ಸಂಗೀತ ಸಾಮ್ರಾಜ್ಞೆ ಲತಾ ಮಂಗೇಶ್ಕರ್ ಲೀನ

Public TV
2 Min Read

ಮುಂಬೈ: ಭಾರತೀಯ ಸಂಗೀತ ಸರಸ್ವತಿ, ಸ್ವರ ಸಾಮ್ರಾಜ್ಞೆ, ಭಾರತ ರತ್ನ ಲತಾ ಮಂಗೇಶ್ಕರ್ ಇಹಲೋಕ ಮುಗಿಸಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.

ಮುಂಬೈನ ಹೃದಯ ಭಾಗದಲ್ಲಿರುವ ಶಿವಾಜಿಪಾರ್ಕ್‍ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆ ನೆರವೇರಿತು. ಶಿವಾಜಿ ಪಾರ್ಕ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ಇದಕ್ಕೂ ಮುನ್ನ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ನಟ ಶಾರೂಖ್ ಖಾನ್ ಸೇರಿ ಹಲವು ಗಣ್ಯರು ಭಾವಪೂರ್ಣ ಬೀಳ್ಕೊಡುಗೆ ನೀಡಿದರು. ಇದನ್ನೂ ಓದಿ: ಲತಾ ಮಂಗೇಶ್ಕರ್‌ ಯಾಕೆ ಮದುವೆಯಾಗಲಿಲ್ಲ – ಪ್ರೀತಿ, ವಿವಾಹ, ಮಕ್ಕಳ ಬಗ್ಗೆ ಏನು ಹೇಳ್ತಿದ್ರು ಗೊತ್ತಾ?

ಅನಾರೋಗ್ಯದ ಕಾರಣದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳಿನಿಂದ ಜೀವನ್ಮರಣದ ಹೋರಾಟ ನಡೆಸುತ್ತಿದ್ದ, ಲತಾ ಮಂಗೇಶ್ಕರ್ ಬಹು ಅಂಗಾಂಗ ವೈಫಲ್ಯದಿಂದ ಇಂದು ಬೆಳಗ್ಗೆ 8.12ರ ಸುಮಾರಿಗೆ ಲತಾ ಸಾವನ್ನಪ್ಪಿದ್ದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಮುಂಬೈನ ನಿವಾಸಕ್ಕೆ ಲತಾ ಮಂಗೇಶ್ಕರ್ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಸಂಜೆ 4 ಗಂಟೆವರೆಗೆ ಮನೆ ಬಳಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ, 4 ಗಂಟೆಗೆ ಶಿವಾಜಿ ಪಾರ್ಕ್‍ನತ್ತ ಸೇನಾ ವಾಹನದಲ್ಲಿ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಈ ವೇಳೆ, ಲತಾ ಅವರ ನೆಚ್ಚಿನ ಬಣ್ಣವಾದ ಬಿಳಿ ಬಣ್ಣದ ಹೂಗಳಿಂದಲೇ ಪಾರ್ಥಿವ ಶರೀರದ ವಾಹನವನ್ನು ಸಿಂಗರಿಸಲಾಗಿತ್ತು. ಶಿವಾಜಿ ಪಾರ್ಕ್‍ನಲ್ಲಿ ಸಾರ್ವಜನಿಕರಿಗೆ ಅವಕಾಶ ನಿರಾಕರಿಸಲಾಗಿತ್ತು. ಹಾಗಾಗಿ, ರಸ್ತೆಯ ಇಕ್ಕೆಲೆಗಳಲ್ಲಿ ನಿಂತು ಸಾವಿರಾರು ಅಭಿಮಾನಿಗಳು, ಜನರು ಅಂತಿಮ ದರ್ಶನ ಪಡೆದುಕೊಂಡರು. ಇದನ್ನೂ ಓದಿ: ಲತಾ ಮಂಗೇಶ್ಕರ್‌ ಹಾಡು ಕೇಳಿ ವೇದಿಕೆಯಲ್ಲಿ ಕಣ್ಣೀರು ಹಾಕಿದ್ರು ಜವಾಹರ್‌ಲಾಲ್‌ ನೆಹರೂ

ಭಾರತ ರತ್ನ, ಭಾರತಾಂಬೆಯ ಹೆಮ್ಮೆಯ ಪುತ್ರಿಗೆ ಮಹಾರಾಷ್ಟ್ರ ಸರ್ಕಾರದ ವತಿಯಿಂದ ಅಂತಿಮ ನಮನ ಸಲ್ಲಿಸಲಾಯಿತು. ರಾಷ್ಟ್ರಧ್ವಜವನ್ನು ಲತಾ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಬಳಿಕ, ಲತಾ ಮಂಗೇಶ್ಕರ್ ಕುಟುಂಬದ ವತಿಯಿಂದ ವೈಯಕ್ತಿಕ ವಿಧಿವಿಧಾನಗಳು ನಡೆದವು. ಲತಾ ಅವರ ಸಹೋದರನ ಮಗ ಎಲ್ಲಾ ಕ್ರಿಯಾಧಿಗಳನ್ನು ನೆರವೇರಿಸಿ, ಚಿತೆಗೆ ಅಗ್ನಿ ಸ್ಪರ್ಶಿಸಿದರು.  ಇದನ್ನೂ ಓದಿ: ಲತಾ ಮಂಗೇಶ್ಕರ್‌ರ ಮೊದಲ ಹಾಡನ್ನು ಸಿನಿಮಾದಿಂದ ತೆಗೆಯಲಾಗಿತ್ತು – ನೀವು ತಿಳಿಯಲೇಬೇಕಾದ 10 ಸಂಗತಿಗಳು ಇಲ್ಲಿವೆ!

Share This Article
Leave a Comment

Leave a Reply

Your email address will not be published. Required fields are marked *