ರಾಹುಲ್ ತಲೆಯ ಮೇಲೆ ಬಿದ್ದಿದ್ದು ಛಾಯಾಗ್ರಾಹಕ ಬಳಕೆ ಮಾಡಿದ್ದ ಮೊಬೈಲ್ ಲೈಟ್!

Public TV
2 Min Read

– ಅಮೇಥಿ ರ್ಯಾಲಿ ಮೇಲೆ ಭದ್ರತಾ ಲೋಪ – ಕಾಂಗ್ರೆಸ್ ಆರೋಪ
– ಕಾಂಗ್ರೆಸ್ಸಿನಿಂದ ಯಾವುದೇ ಪತ್ರ ಬಂದಿಲ್ಲ
– ಮಾಧ್ಯಮಗಳ ವರದಿ ಆಧಾರಿಸಿ ಗೃಹ ಸಚಿವಾಲಯದಿಂದ ಸ್ಪಷ್ಟನೆ

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದ ಅಮೇಥಿಯಲ್ಲಿ ಅಪಾಯವಿದ್ದು, ರ್ಯಾಲಿ ವೇಳೆ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಕಾಂಗ್ರೆಸ್ ಬರೆದ ಪತ್ರಕ್ಕೆ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.

ರಾಹುಲ್ ಗಾಂಧಿಗೆ ನೀಡಲಾದ ಭದ್ರತೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿ ನಮಗೆ ಕಾಂಗ್ರೆಸ್ಸಿನಿಂದ ಯಾವುದೇ ಪತ್ರ ಬಂದಿಲ್ಲ. ಆದರೂ ಮಾಧ್ಯಮಗಳಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ಮಾಡಿ ಬಳಿಕ ಮಾತನಾಡುತ್ತಿದ್ದ ಸಂದರ್ಭದಲ್ಲಿ 7 ಬಾರಿ ಅವರ ಮೇಲೆ ಲೇಸರ್ ಗ್ರೀನ್ ಲೈಟ್ ಬಿದ್ದಿದೆ ಎಂದು ವರದಿಯಾಗಿದೆ. ಆದರೆ ಈ ಲೇಸರ್ ಲೈಟ್ ಎಐಸಿಸಿಯ ಛಾಯಾಗ್ರಾಹಕ ಬಳಕೆ ಮಾಡಿದ್ದ ಮೊಬೈಲ್ ಕ್ಯಾಮೆರಾದ ಬೆಳಕು ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ಕಾಂಗ್ರೆಸ್ ಮಾಡಿದ ಆರೋಪದಂತೆ ರಕ್ಷಣೆ ನೀಡುವಲ್ಲಿ ಯಾವುದೇ ರೀತಿಯ ಲೋಪ ಆಗಿಲ್ಲ. ಸೂಕ್ತ ವ್ಯವಸ್ಥೆಗಳನ್ನೇ ಸಿದ್ಧಪಡಿಸಿಕೊಂಡೇ ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗಿತ್ತು. ವಿಡಿಯೋವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ ವೇಳೆ ಅದು ಮೊಬೈಲ್ ಕ್ಯಾಮೆರಾ ಬೆಳಕು ಎಂಬುವುದು ತಿಳಿದು ಬಂದಿದೆ. ಎಐಸಿಸಿ ಛಾಯಾಗ್ರಾಹಕ ಮೊಬೈಲ್ ಫೋನ್ ಬಳಿಸಿ ಶೂಟ್ ನಡೆಸುತ್ತಿದ್ದದ್ದು ಖಚಿತವಾಗಿದ್ದು ವಿಶೇಷ ರಕ್ಷಣಾ ಪಡೆಯ ನಿರ್ದೇಶಕರು ಕೂಡ ಈ ವಿಚಾರವನ್ನು ತಿಳಿಸಿದ್ದಾರೆ ಸಚಿವಾಲಯ ಸ್ಪಷ್ಟನೆ ನೀಡಿದೆ.

ಕಾಂಗ್ರೆಸ್ ಪತ್ರದಲ್ಲಿ ಏನಿತ್ತು?
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದ ಅಮೇಥಿಯಲ್ಲಿ ಅಪಾಯವಿದ್ದು, ರ್ಯಾಲಿ ವೇಳೆ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಕಾಂಗ್ರೆಸ್ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ವರದಿಯಾಗಿತ್ತು.

ಕಾಂಗ್ರೆಸ್ ಬರೆದಿರುವ ಪತ್ರದಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ಮಾಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ 7 ಬಾರಿ ಅವರ ಮೇಲೆ ಲೇಸರ್ ಗ್ರೀನ್ ಲೈಟ್ ಬಿದ್ದಿದೆ ಎಂದು ಉಲ್ಲೇಖಿಸಿತ್ತು. ಈ ಬಗ್ಗೆ ತನಿಖೆ ನಡೆಸಬೇಕು ಹಾಗೂ ರಾಹುಲ್ ಅವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ತಿಳಿಸಿತ್ತು.

ಲೇಸರ್ ಗ್ರೀನ್ ಲೈಟ್ ರಾಹುಲ್ ಗಾಂಧಿ ಅವರ ತಲೆ ಮೇಲೆ ಸುಮಾರು 7 ಬಾರಿ ಅತಿ ಕಡಿಮೆ ಅವಧಿಯಲ್ಲಿ ಬಿದ್ದಿರುವುದು ದೃಢವಾಗಿದೆ. ಅಲ್ಲದೇ ದೇವಾಲಯದ ಭೇಟಿ ಸಂದರ್ಭದಲ್ಲಿ ಅವರ ಎಡಭಾಗದ ತಲೆ ಮೇಲೆ 2 ಬಾರಿ ಲೇಸರ್ ಬೆಳಕು ಕಾಣಿಸಿತ್ತು ಎಂದು ವಿವರಿಸಲಾಗಿದೆ. ಈ ಪತ್ರದಲ್ಲಿ ಅಹ್ಮದ್ ಪಟೇಲ್, ಜೈರಾಮ್ ರಮೇಶ್, ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಹಿ ಇತ್ತು.

Share This Article
Leave a Comment

Leave a Reply

Your email address will not be published. Required fields are marked *