ಬೆಂಗಳೂರು: ಚಾಣಕ್ಯ ವಿಶ್ವವಿದ್ಯಾನಿಲಯದ (Chanakya University) ಮೇಲೆ ಮತ್ತೆ ರಾಜ್ಯ ಸರ್ಕಾರ ಕಣ್ಣು ಹಾಕಿದೆ. ಈಗಾಗಲೇ ವಿವಿಗೆ ಹಂಚಿಕೆಯಾಗಿದ್ದ ಜಮೀನಿನ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ದು, ಈ ಸಂಬಂಧ ವಿವಿಯ ಲ್ಯಾಂಡ್ ಆಡಿಟ್ ರಿಪೋರ್ಟ್ (Land Audit Report) ಪಡೆದುಕೊಂಡಿದೆ.
ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ಚಾಣಕ್ಯ ವಿವಿಗೆ ಭೂಮಿ ಮಂಜೂರು ಮಾಡಲಾಗಿತ್ತು. ಸರ್ಕಾರದಿಂದ ಹಂಚಿಕೆಯಾಗಿದ್ದು ಎಷ್ಟು ಜಾಗ? ಬಳಕೆಯಾಗಿರೋದು ಎಷ್ಟು? ಎಲ್ಲಾ ವಿವರ ಒಳಗೊಂಡ ಲ್ಯಾಂಡ್ ಆಡಿಟ್ ರಿಪೋರ್ಟ್ ಅನ್ನ ಈಗಿನ ಸರ್ಕಾರ ಪಡೆದಿದೆ. ಇತ್ತೀಚೆಗೆ ನಂದಿ ಬೆಟ್ಟದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಚಾಣಕ್ಯ ವಿವಿಯ ಲ್ಯಾಂಡ್ ಆಡಿಟ್ ವರದಿ ಬಗ್ಗೆ ಚರ್ಚೆ ಮಾಡಲಾಗಿದೆ. ಕ್ಯಾಬಿನೆಟ್ಗೆ ಉನ್ನತ ಶಿಕ್ಷಣ ಇಲಾಖೆ ವಿಷಯ ತಂದಿದ್ದು, ಇದೀಗ ಸರ್ಕಾರದ ಕೈಗೆ ಲ್ಯಾಂಡ್ ಆಡಿಟ್ ರಿಪೋರ್ಟ್ ಸೇರಿದೆ. ಹೀಗಾಗಿ ಚಾಣಕ್ಯ ವಿವಿಗೆ ಹಂಚಿಕೆಯಾಗಿದ್ದ ಜಮೀನಿನಲ್ಲಿ ಉಳಿದ ಜಮೀನನ್ನು ಸರ್ಕಾರ ವಾಪಸ್ ಪಡೆಯುತ್ತಾ ಎನ್ನುವ ಅನುಮಾನಗಳು ಶುರುವಾಗಿದೆ.ಇದನ್ನೂ ಓದಿ: ಕಾಂಗ್ರೆಸ್ನ ಎಲ್ಲಾ ಶಾಸಕರನ್ನು ಮಂತ್ರಿ ಮಾಡೋಕೆ ಆಗಲ್ಲ- ಆರ್.ವಿ.ದೇಶಪಾಂಡೆ
ಚಾಣಕ್ಯ ವಿವಿಗೆ ಹಂಚಿಕೆ ಮಾಡಿದ್ದ ಜಮೀನಿನ ಬಗ್ಗೆ ಈ ಹಿಂದೆ ಸಿದ್ದರಾಮಯ್ಯ (Siddaramaiah) ಅವರು ವಿಪಕ್ಷ ನಾಯಕ ಆಗಿದ್ದಾಗ ವಿರೋಧ ಮಾಡಿದ್ದರು. ಮನುವಾದಿಗಳ ಸಂಸ್ಥೆಗೆ ಹಂಚಿಕೆಯಾಗಿರುವ ಜಮೀನು ಎಂದು ಟೀಕಿಸಿದ್ದರು.
ಏನಿದು ಚಾಣಕ್ಯ ವಿವಿ ಜಮೀನು ವಿವಾದ?
- 2021ರ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಅಂದಿನ ಬಿಜೆಪಿ ಸರ್ಕಾರ ಚಾಣಕ್ಯ ವಿವಿಗೆ ಜಮೀನು ಹಂಚಿಕೆ ಮಾಡುವ ತೀರ್ಮಾನ ತೆಗೆದುಕೊಂಡಿತ್ತು.
- 116.60 ಎಕರೆ ಜಮೀನನ್ನ ಒಟ್ಟು 50 ಕೋಟಿ ರೂ.ಗೆ ಹಂಚಿಕೆ ಮಾಡಲಾಗಿತ್ತು.
- 2022ರ ಏ.20ರಂದು ಸ್ವಾಧೀನ ಪತ್ರ ನೀಡಿ, ಕರಾರು ಮಾಡಲಾಗಿತ್ತು.
- ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚಾಣಕ್ಯ ವಿವಿ ವಿಧೇಯಕಕ್ಕೆ ತಿದ್ದುಪಡಿ ಮಾಡಲಾಗಿತ್ತು.
- ಸರ್ಕಾರ ಸದಸ್ಯರ ನಾಮನಿರ್ದೇಶನಕ್ಕೆ ಅವಕಾಶ ನೀಡಿ, ವಿಧೇಯಕ ತಿದ್ದುಪಡಿ ಮಾಡಿತ್ತು.
- ಇದೀಗ ಚಾಣಕ್ಯ ವಿವಿಗೆ ಹಂಚಿಕೆಯಾಗಿದ್ದ ಲ್ಯಾಂಡ್ ಆಡಿಟ್ ರಿಪೋರ್ಟ್ ಕೂಡ ಪಡೆದುಕೊಂಡಿದೆ.
ಚಾಣಕ್ಯ ವಿವಿ ಲ್ಯಾಂಡ್ ಆಡಿಟ್ ರಿಪೋರ್ಟ್ನಲ್ಲೇನಿದೆ?
- ಕೆಐಎಡಿಬಿ ಅಧಿಕಾರಿಗಳು ಲ್ಯಾಂಡ್ ಆಡಿಟ್ ರಿಪೋರ್ಟ್ನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.
- ಆಡಳಿತ ಭವನ, ಮಹಿಳಾ ಹಾಸ್ಟೆಲ್, ಫುಡ್ ಕೋರ್ಟ್ ನಿರ್ಮಾಣ ಮಾಡಲಾಗಿದೆ.
- ಕೆಲ ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ದು, ಆಟದ ಮೈದಾನ ಪ್ಲ್ಯಾನ್ ಪ್ರಕಾರ ನಿರ್ಮಾಣ ಮಾಡಲಾಗಿದೆ.
- 2026ರ ಜೂ.25ರ ವೇಳೆಗೆ ಸಂಪೂರ್ಣವಾಗಿ ಕೆಲಸಗಳು ಮುಗಿಸಲಾಗುತ್ತದೆ ಎಂದು ಜಮೀನು ಹಂಚಿಕೆ ವೇಳೆ ಹೇಳಲಾಗಿದೆ.
- ಒಟ್ಟಾರೆ ಜಾಗದ ಶೇ.25.60ರಷ್ಟು ಕಟ್ಟಡ ನಿರ್ಮಾಣ ಪ್ಲ್ಯಾನ್ಗೆ ಅನುಮತಿ ನೀಡಲಾಗಿದೆ.
- ಇದರಲ್ಲಿ ಶೇ.6.93ರಷ್ಟು ಜಾಗದಲ್ಲಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
- ಉಳಿದ ಶೇ.18.67ರಷ್ಟು ನಿರ್ಮಾಣ ಕಾರ್ಯ 2026ರ ಜೂ.25ರೊಳಗೆ ಪೂರ್ಣಗೊಳಿಸಬೇಕು
- ಚಾಣಾಕ್ಯ ವಿವಿ 2026ರ ಜೂ.25ರೊಳಗೆ ಪ್ರಾಜೆಕ್ಟ್ ಮುಗಿಸದೇ ಇದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳಬಹುದು.
- ಕೆಐಎಡಿಬಿ ಕಾಯ್ದೆ 34(ಬಿ) ಅಡಿ ಕ್ರಮಕೈಗೊಳ್ಳಲು ಅವಕಾಶ ಇದೆ ಎಂದು ಲ್ಯಾಂಡ್ ಆಡಿಟ್ ವರದಿಯಲ್ಲಿ ಉಲ್ಲೇಖವಾಗಿದೆ.
- ಚಾಣಕ್ಯ ವಿವಿ ಒಟ್ಟಾರೆ ಜಾಗದ ಶೇ.54.68ರಷ್ಟು ಜಮೀನು ಬಳಕೆ ಮಾಡಿಕೊಂಡಿದೆ.
- ಉಳಿದ ಶೇ.45.31ರಷ್ಟು ಜಮೀನನ್ನು ಭವಿಷ್ಯದಲ್ಲಿ ಬಳಸಿಕೊಳ್ಳಲು ತೀರ್ಮಾನಿಸಿದೆ.ಇದನ್ನೂ ಓದಿ: ಕೊಹ್ಲಿಗಾಗಿ ಆರ್ಸಿಬಿಯ ಆತುರವೇ ಕಾಲ್ತುಳಿತಕ್ಕೆ ಕಾರಣ – ಸಿಐಡಿ ತನಿಖೆಯಲ್ಲಿ ಸ್ಫೋಟಕ ವಿಚಾರ ಬಯಲು