ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಫುಲ್ ಆ್ಯಕ್ಟೀವ್

Public TV
2 Min Read

– ಪ್ರವಾಹ ಪೀಡಿತರಿಗಾಗಿ ಭಿಕ್ಷೆ ಬೇಡಲು ಸಿದ್ಧ ಎಂದ ಶಾಸಕಿ

ಬೆಳಗಾವಿ: ಅನರ್ಹ ಶಾಸಕ ರಮೇಶ್ ಜಾರಕಿಹೊಳಿಯವರ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪಾರುಪತ್ಯ ಸಾಧಿಸಲು ಮುಂದಾದರಾ ಎಂಬ ಮಾತುಗಳು ಬೆಳಗಾವಿ ರಾಜಕಾರಣದಲ್ಲಿ ಕೇಳಿ ಬರುತ್ತಿವೆ. ರಮೇಶ್ ಜಾರಕಿಹೊಳಿವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮಿಂಚಿನ ಸಂಚಾರ ನಡೆಸುತ್ತಿದ್ದು, ಪ್ರವಾಹ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡಲು ತಾವು ಭಿಕ್ಷೆ ಬೇಡಲು ಸಹ ಸಿದ್ಧ ಎಂದು ಭರವಸೆ ನೀಡಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ನಿರಾಶ್ರಿತರೊಂದಿಗೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

ಘಟಪ್ರಭಾ ಜಲ ಪ್ರವಾಹಕ್ಕೆ ಮನೆ ಕಳೆದುಕೊಂಡು ಗೋಕಾಕ್‍ನ ಬಹುತೇಕ ಕುಟುಂಬಗಳು ಬೀದಿಗೆ ಬಂದಿವೆ. ಸರ್ಕಾರ ಸೇರಿದಂತೆ ಯಾವ ಪ್ರತಿನಿಧಿಗಳು ನಿರಾಶ್ರಿತರ ಸಹಾಯಕ್ಕೆ ಮುಂದಾಗುತ್ತಿಲ್ಲ. ಈ ಹಿಂದೆ ಬರಗಾಲ ಇದೆ ಎಂದು ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದರು. ಬರಗಾಲದ ಪರಿಹಾರವಾಗಿ ಕೇಂದ್ರ ಸರ್ಕಾರ ಒಂದು ಸಾವಿರ ರೂ. ಕೋಟಿ ನೀಡಿದೆ. ಆ ಹಣದಲ್ಲಿ ನಿಮಗೆ 10 ಸಾವಿರ ರೂ. ನೀಡಿ ರಾಜ್ಯ ಸರ್ಕಾರ ನಿಮ್ಮ ದಿಕ್ಕು ತಪ್ಪಿಸುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರವಾಹ ಸಂತ್ರಸ್ತರಿಗೆ ಧೈರ್ಯ ತುಂಬಿದ ಲಕ್ಷ್ಮಿ ಹೆಬ್ಬಾಳ್ಕರ್

ನಿಮಗಾಗಿ ಬೆಂಗಳೂರಿನಲ್ಲಿ ಭಿಕ್ಷೆ ಕೇಳಲು ಸಿದ್ಧಳಿದ್ದೇನೆ. ಭಿಕ್ಷೆ ಬೇಡುವ ಮೂಲಕ ಕೇಂದ್ರ ಸರ್ಕಾರದ ಕಣ್ಣು ತೆರೆಸಲು ಪ್ರಯತ್ನಿಸುತ್ತೇನೆ. ಸಂಘದಿಂದ ಸಾಲ ತುಂಬಿ ಅಂತಾ ಯಾರಾದರೂ ಕೇಳಿದರೆ, ನೀವು ಹಣ ಕಟ್ಟಬೇಡಿ. ಬದಲಾಗಿ ಅವರ ಹೆಸರು ಬರೆದಿಟ್ಟು ವಿಷ ತೆಗೆದುಕೊಳ್ಳುತ್ತೇವೆ ಅಂತಾ ಹೇಳಿ. ನಿಮ್ಮ ಜೊತೆ ನಾನು ಇದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವೃದ್ಧನ ಅಳಲು ಕೇಳಿ ಕಣ್ಣೀರಿಟ್ಟ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಗೋಕಾಕ್ ವಿಧಾನಸಭಾ ಕ್ಷೇತ್ರದ ಪ್ರವಾಹ ಪೀಡಿತ ಕ್ಷೇತ್ರಗಳಿಗೆ ಭೇಟಿ ನೀಡುವ ಮೂಲಕ ಸ್ಥಳೀಯವಾಗಿ ತಮ್ಮ ಪಾರುಪತ್ಯ ಸ್ಥಾಪಿಸಲು ಲಕ್ಷ್ಮಿ ಹೆಬ್ಬಾಳ್ಕರ್ ಪ್ರಯತ್ನಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಬೆಳಗಾವಿ ಗ್ರಾಮಾಂತರದ ಶಾಸಕಿಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಪ್ರವಾಹದ ಸಮಯದಲ್ಲಿ ಮಳೆಯನ್ನು ಲೆಕ್ಕಿಸದೇ ಸಂತ್ರಸ್ತರ ಸಹಾಯಕ್ಕೆ ಮುಂದಾಗಿದ್ದರು. ಪ್ರವಾಹದಲ್ಲಿ ಸಂಬಂಧಿಗಳನ್ನು ಕಳೆದುಕೊಂಡ ಕುಟುಂಬಸ್ಥರಿಗೆ ಸಾಂತ್ವಾನ ಹೇಳುವ ಕೆಲಸವನ್ನು ಮಾಡುವ ಮೂಲಕ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *