ಆಕ್ರೋಶದ ಬೆಂಕಿಗೆ ಲಕ್ಷ್ಮೇಶ್ವರ ಠಾಣೆ ಧಗಧಗ – 25 ದುಷ್ಕರ್ಮಿಗಳ ಬಂಧನ

Public TV
1 Min Read

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಲಾಕಪ್ ಡೆತ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಠಾಣೆಗೆ ಬೆಂಕಿಹಚ್ಚಿ ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ 25 ಮಂದಿ ದುಷ್ಕರ್ಮಿಗಳನ್ನ ಗದಗ ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ.

ಈ ಗಲಾಟೆಯಲ್ಲಿ ಅಕ್ರಮ ಮರಳು ದಂಧೆಕೊರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ 25 ಜನ ದುಷ್ಕರ್ಮಿಗಳನ್ನು ವಿಚಾರಣೆಗಾಗಿ ಕರೆತರಲಾಗಿದ್ದು, ವೀಡಿಯೋ ದೃಶ್ಯಗಳನ್ನ ನೋಡಿ ಇನ್ನುಳಿದ ಆರೋಪಿಗಳ ಬಂಧಿಸುವ ಕಾರ್ಯ ಇಂದು ನಡೆಯಲಿದೆ. ಈ ಮಧ್ಯೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮಧ್ಯಾಹ್ನದವರೆಗೆ ನಿಷೇಧಾಜ್ಞೆ ಮುಂದುವರೆದಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಪೊಲೀಸ್ ಬಿಗಿ ಬಂದುಬಸ್ತ್ ಕಲ್ಪಿಸಲಾಗಿದೆ. ಎಸ್‍ಪಿ, ಡಿಎಸ್‍ಪಿ, ಸಿಪಿಐ, ಪಿಎಸ್‍ಐ, ಕೆ.ಎಸ್.ಆರ್.ಪಿ ಹಾಗೂ ಡಿಆರ್ ತುಕಡಿಗಳನ್ನ ನಿಯೋಜನೆ ಮಾಡಲಾಗಿದೆ.

ಪಟ್ಟಣ್ಣದಲ್ಲಿ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳು ಎಂದಿನಂತೆ ಪ್ರಾರಂಭವಾಗಿವೆ. ಸ್ಥಳಕ್ಕೆ ಎಡಿಜಿಪಿ ರಾಘವೇಂದ್ರ ಔರಾಧಕರ್ ಭೇಟಿ ನೀಡಿ ಪರಿಶೀಲನೆ ಮಾಡುವ ಸಾಧ್ಯತೆಗಳಿವೆ.

ಏನಿದು ಪ್ರಕರಣ?: ಅಕ್ರಮ ಮರಳುದಂಧೆ ಆರೋಪದ ಮೇಲೆ ಶಿವಾನಂದ ಗಾಣಿಗೇರ ಪೊಲೀಸರ ವಶದಲ್ಲಿದ್ದರು. ತೀವ್ರ ವಿಚಾರಣೆಯಲ್ಲಿದ್ದ ಶಿವಾನಂದ ಠಾಣೆಯಲ್ಲೇ ಮೃತಪಟ್ಟಿದ್ದು, ಇದರಿಂದ ಆಕ್ರೋಶಗೊಂಡ ಶಿವಾನಂದ ಸಂಬಧಿಕರು ಪೊಲಿಸರು ಲಾಕಪ್ ಡೆತ್ ಮಾಡಿರುವುದಾಗಿ ಆರೋಪಿಸಿ ಭಾನುವಾರದಂದು ಠಾಣೆಗೆ ಬೆಂಕಿ ಹಚ್ಚಿದ್ದರು.

Share This Article
Leave a Comment

Leave a Reply

Your email address will not be published. Required fields are marked *