ನೋಟ್‍ಬ್ಯಾನ್ ಆಗಿ ವರ್ಷವಾದ್ರೂ ಬೆಂಗ್ಳೂರಿನ ದೇಗುಲಗಳಲ್ಲಿ ಧೂಳು ತಿನ್ನುತ್ತಿರೋ ಲಕ್ಷ ಲಕ್ಷ ಹಳೇ ನೋಟು

Public TV
1 Min Read

ಬೆಂಗಳೂರು: ಮೋದಿ ಸರ್ಕಾರ ಕಪ್ಪು ಹಣದ ವಿರುದ್ಧ ಸಮರ ಸಾರಿ ಹಳೆಯ 500 ಮತ್ತು 1000 ರೂ. ಮುಖಬೆಲೆಯ ಮೋಟುಗಳನ್ನ ಬ್ಯಾನ್ ಮಾಡಿ ವರ್ಷವೇ ಕಳೆದಿದೆ. ಆದರೆ ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳಲ್ಲಿ ಹಳೆಯ 500 ಮತ್ತು 1000 ರೂ. ಮುಖಬೆಲೆಯ ನೋಟುಗಳು ಧೂಳು ತಿನ್ನುತ್ತಿವೆ.

ಹೆಚ್ಚಿನ ದೇವಾಲಯಗಳು ಹಳೆಯ ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿ ದೇವಾಲಯದ ಅಭಿವೃದ್ಧಿಗೆ ಸದುಪಯೋಗಪಡಿಸಿಕೊಂಡಿದ್ದರು. ಆದರೆ ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ದೇವಾಲಯಗಳಲ್ಲಿ ಮಾತ್ರ ಹಳೇ ನೋಟುಗಳು ಧೂಳು ತಿನ್ನುತ್ತಾ ಬಿದ್ದಿವೆ.

ಬೆಂಗಳೂರಿನ ಶ್ರೀ ಮಹಾಗಣಪತಿ ಮತ್ತು ಸಮೂಹ ದೇವಸ್ಥಾನ, ಶ್ರೀ ರಾಯರಾಯ ಕಲ್ಯಾಣ ಮಂಟಪ ಮತ್ತು ಸಮೂಹ ದೇವಾಲಯಗಳು, ಬನಶಂಕರಿ, ಪ್ರಸನ್ನ ವೀರಾಂಜನೇಯ ಸ್ವಾಮಿ, ದೊಡ್ಡಗಣಪತಿ ಸೇರಿದಂತೆ ಒಟ್ಟು 54 ದೇವಾಲಯಗಳಲ್ಲಿ ಕಳೆದ ಮಾರ್ಚ್ 27ರಂದು ಅಧಿಕಾರಿಗಳು ಹುಂಡಿ ತೆರೆದಿದ್ದರು. ಈ ವೇಳೆ 20 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ಹಳೇ ನೋಟುಗಳು ಪತ್ತೆಯಾಗಿದ್ದವು. ಆದರೆ ಅಧಿಕಾರಿಗಳು ಈ ನೋಟುಗಳನ್ನು ಬ್ಯಾಂಕಿಗೆ ಹಾಕದೆ ಸ್ಟ್ರಾಂಗ್ ರೂಮ್‍ನಲ್ಲಿ ಧೂಳು ಹಿಡಿಯಲು ಬಿಟ್ಟಿದ್ದಾರೆ. ಆರ್ ಟಿಐ ಕಾರ್ಯಕರ್ತ ರವಿಕುಮಾರ್ ಧಾರ್ಮಿಕ ದತ್ತಿ ಇಲಾಖೆಯಿಂದ ಆರ್ ಟಿಐ ಕಾಯ್ದೆ ಅಡಿ ಪಡೆದ ಮಾಹಿತಿಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಬಹಿರಂಗವಾಗಿದೆ.

ಬೆಂಗಳೂರಿನ ಒಟ್ಟು 54 ದೇವಾಲಯಗಳ ಹುಂಡಿಗಳಲ್ಲಿ 20 ಲಕ್ಷ ರೂಪಾಯಿ ಹಳೇ ನೋಡು ಕೊಳೆಯುತ್ತಾ ಬಿದ್ದಿದೆ. ದೇವಾಲಯಗಳ ಅಭಿವೃದ್ಧಿಗೆ ಈ ಹಣವನ್ನ ಬಳಸಬಹುದಿತ್ತು. ಅಷ್ಟು ದುಡ್ಡಿಗೆ ಬೆಲೆನೇ ಇಲ್ವಾ? ಮುಜರಾಯಿ ಸಚಿವರು, ಅಧಿಕಾರಿಗಳೇ ಇದಕ್ಕೆ ಕಾರಣ. ಅವರೇ ಇದಕ್ಕೆ ಉತ್ತರ ಕೊಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ರವಿ ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *