ಧಾರವಾಡ: ಇಂದಿನ ಕಾಲದಲ್ಲಿ ಜಮೀನು ಅಂದರೆ ಯಾರೂ ಬಿಟ್ಟು ಕೊಡಲ್ಲ. ಅಲ್ಲದೇ ಬೇರೆಯವರ ಜಮೀನನ್ನೇ ಲಪಟಾಯಿಸಲಿಕ್ಕೆ ನೋಡುತ್ತಿರುತ್ತಾರೆ. ಆದರೆ ಇಲ್ಲೊಬ್ಬರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಭೂಮಿಯನ್ನ ದೇವಸ್ಥಾನಕ್ಕೆ ದಾನ ಮಾಡಿದ್ದಾರೆ.
ಹುಬ್ಬಳ್ಳಿ ಮೂಲದ ನರಸಿಂಗರಾವ್ ಧಾರವಾಡಕರ್ ಅವರು ಧಾರವಾಡದ ಮುರುಘಾಮಠದ ಬಳಿಯ ತೆಲಗರ ಕಾಲೋನಿಯಲ್ಲಿರುವ ವೆಂಕಮ್ಮ ದೇವಸ್ಥಾನಕ್ಕೆ ಮೂರು ಗುಂಟೆ ಭೂಮಿಯನ್ನ ದಾನ ಮಾಡಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಮೂರುಗುಂಟೆ ಜಾಗಕ್ಕೆ ಸುಮಾರು 60 ಲಕ್ಷ ಬೆಲೆ ಇದೆ. ಈ ಜಾಗದ ಪಕ್ಕದಲ್ಲಿ ವೆಂಕಮ್ಮ ದೇವಸ್ಥಾನ ಇದೆ.
ಈ ದೇವಸ್ಥಾನಕ್ಕೆ ಧಾರವಾಡಕರ್ ಅವರ ಕುಂಟುಬಸ್ಥರು ಕಳೆದ 25 ವರ್ಷಗಳ ಹಿಂದೆ ಭೂಮಿಯನ್ನ ದಾನವಾಗಿ ನೀಡುವುದಾಗಿ ಮಾತು ಕೊಟ್ಟಿದ್ದರಂತೆ. ಆದರೆ ದಾಖಲೆಗಳು ಮಾತ್ರ ಭೂಮಿಯ ಮಾಲೀಕರ ಹೆಸರಲ್ಲಿತ್ತು. ಈ ಜಾಗವನ್ನ ಸುತ್ತಲಿನವರು ಅತಿಕ್ರಮಣ ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯ ಯುವಕನೊಬ್ಬ ಜಾಗದ ದಾಖಲೆಗಳನ್ನ ಪರಿಶೀಲಿಸಿದ್ದಾನೆ. ಆಗ ಈ ಜಾಗ ಹುಬ್ಬಳ್ಳಿಯ ಧಾರವಾಡಕರ್ ಅವರಿಗೆ ಸೇರಿದ್ದು ಎಂದು ಗೊತ್ತಾಗಿದೆ.
ಯುವಕ ಮಾಲೀಕರಿಗೆ ಈ ಬಗ್ಗೆ ತಿಳಿಸಿದಾಗ, ಜಾಗದ ಮಾಲೀಕರು ನರಸಿಂಗರಾವ್ ಅವರು ಭೂಮಿಯನ್ನ ದೇವಸ್ಥಾನಕ್ಕೆ ಬಿಟ್ಟು ಕೊಟ್ಟು, ದಾಖಲೆಗಳನ್ನ ದೇವಸ್ಥಾನದ ಹೆಸರಿನಲ್ಲಿ ಮಾಡಿ ಕೊಡುವ ಭರವಸೆ ನೀಡಿದ್ದಾರೆ. ಸದ್ಯ ಈ ಸುದ್ದಿ ತಿಳಿದ ಸ್ಥಳೀಯರಿಗೆ ಕೂಡಾ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews