ಸರ್ಕಾರಿ ಕಚೇರಿ ನವೀಕರಣಕ್ಕೂ ಅನುದಾನ ಕೊರತೆ – ಸಿಬ್ಬಂದಿಯೇ ದೇಣಿಗೆ ಸಂಗ್ರಹಿಸಿ ಕಚೇರಿ ದುರಸ್ತಿ

Public TV
1 Min Read

ಕಲಬುರಗಿ: ರಾಜ್ಯದಲ್ಲಿ ಪಂಚ ಗ್ಯಾರಂಟಿಗಳ ಬಳಿಕ ಅಭಿವೃದ್ಧಿ ಕೆಲಸಗಳಿಗೆ ಹೊಡೆತ ಬಿದ್ದಿರುವುದು ಜಗಜ್ಜಾಹಿರವಾಗಿದ್ದು, ಇದೀಗ ಸರ್ಕಾರಿ ಕಚೇರಿಗಳ (Government Office) ದುರಸ್ತಿಗೂ ಸಹ ಆರ್ಥಿಕ ಸಂಕಷ್ಟ ಎದುರಾದಂತಿದೆ. ಹೀಗಾಗಿ ಸರ್ಕಾರಿ ನೌಕರರು ಕಚೇರಿ ಸಿಬ್ಬಂದಿಯಿಂದ ದೇಣಿಗೆ ಸಂಗ್ರಹಿಸಿ ಕಚೇರಿ ದುರಸ್ತಿ ಮಾಡಿಸಿದ್ದಾರೆ.

ಹೌದು, ಮಳೆ ಬಂದರೆ ಸಾಕು ಕಲಬುರಗಿ (Kalaburagi) ಎಡಿಎಲ್‌ಆರ್ (ADLR) ಕಚೇರಿಯಲ್ಲಿ ನೀರು ಸೋರುತ್ತದೆ. ಯಾಕಂದ್ರೆ ಜಿಲ್ಲಾ ಪಂಚಾಯತ್ ಕಚೇರಿ ಆವರಣದ ಒಂದನೇ ಮಹಡಿಯಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡ ಶಿಥಿಲಗೊಂಡಿದೆ. ಮಳೆ ಬಂದರೆ ಸಾಕು ಇಡೀ ಕಚೇರಿಯ ಛಾವಣಿಯಿಂದ ಮಳೆ ನೀರು ಸೋರುತ್ತದೆ. ಹೀಗಾಗಿ ಸಾರ್ವಜನಿಕರ ಜಮೀನಿನ ಕಡತಗಳು ಏನಾದರೂ ನೆನೆದು ಹಾಳಾದರೆ ಮತ್ತೆ ಆ ದಾಖಲೆಗಳು ಸಿಗೋದಿಲ್ಲ. ಹೀಗಾಗಿ ಶಿಥಿಲಾವಸ್ಥೆಯ ಕಚೇರಿ ಬೇರೆಡೆ ಸ್ಥಳಾಂತರ ಮಾಡಿ, ಇಲ್ಲ ದುರಸ್ತಿ ಮಾಡಿಕೊಡಿ ಅಂತ ಅಧಿಕಾರಿಗಳಿಗೆ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ಹೀಗಾಗಿ ಖುದ್ದು ಕಚೇರಿಯ ಸಿಬ್ಬಂದಿಗಳೇ ಸಹೋದ್ಯೋಗಿಗಳ ಬಳಿ ದೇಣಿಗೆ ಸಂಗ್ರಹಿಸಿ ಕಚೇರಿ ದುರಸ್ತಿ ಮಾಡಿಸುತ್ತಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಭಾರೀ ಮಳೆ – 5 ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಣೆ

ಸದ್ಯ ಕಲಬುರಗಿ ಎಡಿಎಲ್‌ಆರ್ ಕಚೇರಿ ದುರಸ್ತಿಗೆ ಒಟ್ಟು 18 ಲಕ್ಷ ರೂ. ಪ್ರಪೋಸಲ್ ಕಳುಹಿಸಿದ್ದರೂ ಪ್ರಯೋಜನವಾಗಿಲ್ಲ. ಸಿಬ್ಬಂದಿ ತಮ್ಮ ಸ್ಚಂತ ಹಣ ಹಾಕಿ ಕಚೇರಿ ದುರಸ್ಥಿ ಮಾಡುತ್ತಿದ್ದಾರೆ. ಹಳೆಯ ಸಿಮೆಂಟ್ ಛಾವಣಿ ಮೇಲೆ ಕಬ್ಬಿಣದ ಶೆಡ್ ಹೊಡೆಸಿ ಮಳೆ ನೀರು ಕಚೇರಿಯ ಒಳಗೆ ಬರದಂತೆ ಮಾಡಿದ್ದಾರೆ. ಅಲ್ಲದೇ ಇಲ್ಲಿ ಮಹಿಳೆಯರಿಗೆ ಶೌಚಾಲಯ ಇಲ್ಲ. ಹೀಗಾಗಿ ಮಹಿಳೆಯರಿಗಾಗಿ ಒಂದು ಶೌಚಾಲಯವನ್ನು ಸಹ ಸಿಬ್ಬಂದಿ ತಮ್ಮ ಸ್ವಂತ ಹಣದಲ್ಲಿಯೇ ಕಟ್ಟಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಕೊಲೆ ಆರೋಪಿ ದರ್ಶನ್‌ ಪಾಲಿಗೆ ಇಂದು ಬಿಗ್‌ ಡೇ

Share This Article