ಸಿಎಂ ಸ್ಥಾನ ಕಳೆದುಕೊಳ್ಳುವ ಭಯದಲ್ಲಿ ಹೆಚ್‍ಡಿಕೆ ಬೆಂಗ್ಳೂರಿಂದ ಹೊರಗೆ ಹೋಗ್ತಿಲ್ಲ-ಶ್ರೀರಾಮುಲು ವ್ಯಂಗ್ಯ!

Public TV
1 Min Read

ಚಿತ್ರದುರ್ಗ: ಸಿಎಂ ಸ್ಥಾನ ಬಿಟ್ಟು ಹೋಗುತ್ತದೆ ಎನ್ನುವ ಭೀತಿಯಿಂದ ಕುಮಾರಸ್ವಾಮಿ ಬೆಂಗಳೂರು ಬಿಟ್ಟು ಹೋಗುತ್ತಿಲ್ಲ ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

ಜಿಲ್ಲೆಯ ನೆಲಗೇತನಹಟ್ಟಿ ಗ್ರಾಮದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸಂಪೂರ್ಣ ನಿಷ್ಕ್ರೀಯಗೊಂಡಿದೆ. ಜನರ ಗೋಳು, ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಅವರಿಗೆ ಬೇಕಾಗಿರುವುದು ವರ್ಗಾವಣೆ ದಂಧೆ. ಬಡವರ ಕಳಕಳಿಗೆ ಸ್ಪಂದಿಸುವುದನ್ನು ಬಿಟ್ಟು ದುಡಿಯಲು ಕುಳಿತಿದ್ದಾರೆ. ಸಮ್ಮಿಶ್ರ ಸರ್ಕಾರ ಇರುವಷ್ಟು ದಿನ ದುಡ್ಡು ಹೊಡೆಯುವ ತಂತ್ರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಲು 15 ದಿನ ಕಾಲಾವಕಾಶ ಕೇಳಿದ್ದ ವಿಚಾರ ಮರೆತಿರಬಹುದು. ಆದರೆ ನಿಷ್ಕ್ರೀಯ ಸರ್ಕಾರದ ಕಿವಿ ಹಿಂಡಿ ಜನಪರ ಕೆಲಸಕ್ಕೆ ಸೂಚಿಸುತ್ತೇವೆ. ಹಾಗಾಗಿ ಕೂಡಲೇ ರೈತರ ಸಾಲಮನ್ನಾ ಮಾಡಬೇಕೆಂದು ಸಮ್ಮಿಶ್ರ ಸರ್ಕಾರಕ್ಕೆ ಆಗ್ರಹಿಸಿದರು. ಒಂದು ವೇಳೆ ಸರ್ಕಾರ ಸಾಲಮನ್ನಾ ಮಾಡದಿದ್ದರೆ ವಿಧಾನಸೌಧದ ಹೊಗೆ ಮತ್ತು ಒಳಗೆ ಹೋರಾಟ ನಡೆಸಲಾಗುವುದು ಎಂದರು.

ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದ ಶಾಸಕ ಶ್ರೀರಾಮುಲು ಜೆಡಿಎಸ್- ಕಾಂಗ್ರೆಸ್, ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿಲ್ಲ. ಆದರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಮಾಡಲು ಏಕಾಏಕಿ ನಿರ್ಧಾರ ತೆಗೆದುಕೊಂಡಿದೆ. ಬಿಜೆಪಿಗೆ ಅಧಿಕಾರ ತಪ್ಪಿಸುವ ದುರುದ್ದೇಶದಿಂದ ಮೈತ್ರಿ ಮಾಡಿಕೊಂಡಿದೆ ಎಂದು ಆರೋಪಿಸಿದ್ದರು.

ಹೊಸ ಬಜೆಟ್ ಮಂಡನೆ ವಿಷಯದಲ್ಲೇ ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ಟು ಗೊಂದಲಗಳಿವೆ. ಈ ವಿಚಾರವಾಗಿ ಸಮ್ಮಿಶ್ರ ಸರ್ಕಾರದಲ್ಲಿ ಆಂತರಿಕ ಕಲಹ ಹೆಚ್ಚಿದೆ. ಸಮ್ಮಿಶ್ರ ಸರ್ಕಾರ ಅಸ್ಥಿರಗೊಂಡರೆ ಏನಾಗುತ್ತೋ ಗೊತ್ತಿಲ್ಲ. ಕೆಲವು ಸ್ವತಂತ್ರ ಅಭ್ಯರ್ಥಿಗಳು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೊಸ ಬಾಂಬ್ ಹಾಕಿದ್ದಾರೆ.

ಜನತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕೆಂದು ತೀರ್ಪು ಕೊಟ್ಟಿದ್ದಾರೆ. ಮುಂದೆ ಏನುಗುತ್ತೋ ಅದು ಜನರ ತೀರ್ಮಾನ, ಭಗವಂತನ ಆಶಯ. ಅದಕ್ಕಾಗಿ ಕಾದು ನೋಡೋಣ. ಧರ್ಮ ರಕ್ಷಣೆ, ವಿಶ್ವ ಶಾಂತಿಗಾಗಿ ಶಿವಲಿಂಗ ಪೂಜೆ ಮಾಡಿದ್ದೇನೆ. ಗ್ರಾಮ ವಾಸ್ತವ್ಯದ ಮೂಲಕ ಜನರ ಅಹವಾಲು ಕೇಳಿ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *