ಕುಮಾರಿ ಕನ್ನಡಕ್ಕೆ ಬರಲು ಕಾರಣ ರಾಜಮೌಳಿಯ ಅಪ್ಪ!

Public TV
1 Min Read

ಕುಮಾರಿ 21 ಎಫ್ ಚಿತ್ರದ ಮೂಲಕ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಎರಡನೇ ಮಗ ಪ್ರಣಾಮ್ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿದ್ದಾರೆ. ತೆಲುಗಿನಲ್ಲಿ ಹಿಟ್ ಆಗಿದ್ದ ಚಿತ್ರದ ರೀಮೇಕ್ ಆಗಿರೋ ಕುಮಾರಿ ಕನ್ನಡಕ್ಕೆ ಬರಲು ಮೂಲ ಕಾರಣ ರಾಜಮೌಳಿಯವರ ತಂದೆ ವಿಜಯೇಂದ್ರ ಪ್ರಸಾದ್ ಎಂಬ ವಿಚಾರ ಇದೀಗ ಬಯಲಾಗಿದೆ!

ಇದು ತೆಲುಗಿನ ಕುಮಾರಿ 21 ಎಫ್ ಚಿತ್ರದ ರೀಮೇಕ್. ಈ ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡಿದ್ದರು. ಸುಕುಮಾರ್ ಅವರ ಅಣ್ಣ ವಿಜಯ ಕುಮಾರ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದರು. ಸದರಿ ಚಿತ್ರ ಹಿಟ್ ಆಗುತ್ತಲೇ ನಿರ್ಮಾಪಕ ವಿಜಯ ಕುಮಾರ್ ಈ ಚಿತ್ರವನ್ನು ಬೇರೆ ಬೇರೆ ಭಾಷೆಗಳಲ್ಲಿಯೂ ನಿರ್ಮಾಣ ಮಾಡಲು ಯೋಜನೆ ಹಾಕಿಕೊಂಡಿದ್ದರು. ಈ ವಿಚಾರವನ್ನು ನಿರ್ದೇಶಕ ಶ್ರೀಮಾನ್ ಗೆ ಹೇಳಿದ ಸುಕುಮಾರ್, ಅದನ್ನು ಕನ್ನಡಕ್ಕೆ ತಾವೇ ನಿರ್ದೇಶನ ಮಾಡಬೇಕೆಂದು ಕೇಳಿಕೊಂಡಿದ್ದರಂತೆ. ಆದರೆ ಅದುವರೆಗೂ ಈ ಚಿತ್ರವನ್ನು ನೋಡಿರದ ಶ್ರೀಮಾನ್ ಹಿಂದೇಟು ಹಾಕಿ ಅಲ್ಲಿಂದ ಎಸ್ಕೇಪಾಗಿದ್ದರಂತೆ.

ಅದಾಗಿ ಕೆಲ ದಿನಗಳ ನಂತರ ಈ ವಿಚಾರವನ್ನು ಶ್ರೀಮಾನ್ ತಮ್ಮ ಗುರುಗಳಾದ ವಿಜಯೇಂದ್ರ ಪ್ರಸಾದ್ ಅವರ ಬಳಿ ಹೇಳಿದ್ದಾರೆ. ಅದಕ್ಕವರು ಯಾವ ಕಾರಣಕ್ಕೂ ಈ ಅವಕಾಶವನ್ನು ಬಿಡಬಾರದಾಗಿ ಸಲಹೆ ಕೊಟ್ಟ ನಂತರ ಶ್ರೀಮಾನ್ ಅಖಾಡಕ್ಕಿಳಿದಿದ್ದರು. ಆ ಬಳಿಕ ಮಿಂಚಿನ ವೇಗದಲ್ಲಿ ತಯಾರಿ ಮಾಡಿಕೊಂಡು, ದೇವರಾಜ್ ಅವರ ಬಳಿಯೇ ಮಾತಾಡಿ ಪ್ರಣಾಮ್ ನಟಿಸುವಂತೆ ಮಾಡುವಲ್ಲಿಯೂ ಶ್ರೀಮಾನ್ ಯಶಸ್ವಿಯಾಗಿದ್ದರು.

ಅಂದಹಾಗೆ ಇದು ಈ ದಿನಮಾನದಲ್ಲಿನ ಯುವಕರ ಕಥೆ. ಈ ಚಿತ್ರ ನೋಡಿದರೆ ಬೇರೆ ಬೇರೆ ಪಾತ್ರಗಳಲ್ಲಿ, ಸನ್ನಿವೇಶಗಳಲ್ಲಿ ಇದು ತಮ್ಮದೇ ಕಥೆ ಎಂಬಂಥಾ ಆಪ್ತ ಭಾವ ಹುಟ್ಟಿಕೊಳ್ಳಲಿದೆಯಂತೆ. ಕನ್ನಡದ ನೇಟಿವಿಟಿಯನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕುದಾಗಿ ಈ ಚಿತ್ರವನ್ನು ರೂಪಿಸಿರೋ ನಿರ್ದೇಶಕ ಶ್ರೀಮಾನ್ ದೊಡ್ಡ ಗೆಲುವೊಂದು ಸಿಕ್ಕುವ ಭರವಸೆಯಿಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *