ಕುಮಾರಸ್ವಾಮಿ ಕೆಲವೊಂದನ್ನು ಬಿಡಬೇಕು, ಅಣ್ಣನಾಗಿ ಈ ಸಲಹೆ ನೀಡುತ್ತಿದ್ದೇನೆ – ರೇವಣ್ಣ

Public TV
2 Min Read

ಹಾಸನ: ಕುಮಾರಸ್ವಾಮಿ ಗೌರವದಿಂದ ಇರಬೇಕು. ರಾಜಕೀಯ ಶಾಶ್ವತವಲ್ಲದ ಕಾರಣ ಕೆಲವೊಂದನ್ನು ಬಿಡಬೇಕು. ಅಣ್ಣನಾಗಿ ಈ ಸಲಹೆ ನೀಡುತ್ತಿದ್ದೇನೆ ಎಂದು ರೇವಣ್ಣ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಕೆಲವು ತಪ್ಪು ಮಾಡಿದ್ದಾರೆ. ಯಾವುದಕ್ಕೂ ಬಾರದವರನ್ನು ಶಾಸಕ, ಮಂತ್ರಿ, ಸಂಸರನ್ನಾಗಿ ಮಾಡಿದ್ದಾರೆ. ಮಾಡಿದ ತಪ್ಪಿಗೆ ಈಗ ಕುಮಾರಸ್ವಾಮಿ ಅನುಭವಿಸುತ್ತಿದ್ದಾರೆ. ಇವೆಲ್ಲ ಎಲ್ಲಿದ್ದವು? ಇವೆಲ್ಲವನ್ನು ನಾನು ಹತ್ತಿರಕ್ಕೆ ಸೇರಿಸಲ್ಲ. ಕುಮಾರಸ್ವಾಮಿಯದ್ದು ಸ್ವಲ್ಪ ದೊಡ್ಡ ಗುಣ, ಆಯ್ಯೋ ಅಂತಾ ಬಂದರೆ ತಥಾಸ್ತು ಅಂದು ಬಿಡುತ್ತಾನೆ. ಆಮೇಲೆ ಅವರೆಲ್ಲರೂ ಕುಮಾರಸ್ವಾಮಿಗೆ ಟೋಪಿ ಹಾಕಿ ಹೋಗುತ್ತಾರೆ ಎಂದು ಜೆಡಿಎಸ್ ಬಿಟ್ಟವರ ವಿರುದ್ಧ ಕಿಡಿಕಾರಿದರು.

ಕೆಲವರು ಬೀಗರ ಊಟವನ್ನೇ ಹುಡುಕಿಕೊಂಡು ತಿರುಗುತ್ತಿದ್ದಾರೆ. ಎಲ್ಲಿ, ಯಾರ ಮನೆಯಲ್ಲಿ ಬೀಗರ ಊಟ ಇದೆ ಎಂದು ಹುಡುಕಿಕೊಂಡು ಓಡಾಡುತ್ತಿದ್ದಾರೆ. ಇವರಿಂದ ಕುಮಾರಸ್ವಾಮಿ ಪಾಠ ಕಲಿಯಬೇಕೇ? ರಾಜ್ಯದಲ್ಲಿ ಜೆಡಿಎಸ್ ಪಕ್ಷ ತನ್ನದೇ ಆದ ಅಸ್ತಿತ್ವ ಉಳಿಸಿಕೊಂಡಿದೆ. ಇದನ್ನು ರಾಷ್ಟ್ರೀಯ ಪಕ್ಷಗಳು ತೆಗೆಯಲು ಒಳಸಂಚನ್ನು ಮಾಡುತ್ತಿವೆ. ಆದರೆ ಈ ಎರಡೂ ರಾಷ್ಟ್ರೀಯ ಪಕ್ಷಗಳು ಇದರಲ್ಲಿ ಯಶಸ್ಸು ಕಾಣುವುದಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ.

ರಾಷ್ಟ್ರೀಯ ಪಕ್ಷಗಳು ಏನೇ ಮಾಡಿದರು ಇದರಲ್ಲಿ ಯಶಸ್ವಿಯಾಗುವುದಿಲ್ಲ. ಇಂತಹ ಅಪಪ್ರಚಾರವನ್ನು ದೇವೇಗೌಡರು, ಕುಮಾರಸ್ವಾಮಿ ತುಂಬಾ ದಿನಗಳಿಂದ ನೋಡಿದ್ದಾರೆ. ಜೆಡಿಎಸ್‍ನ ಮುಗಿಸಲು ಯಾರಿಂದಲೂ ಆಗಲ್ಲ. ಜನತೆ, ದೇವರ ಆಶೀರ್ವಾದ ಇರೋವವರೆಗೂ ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ. ದೇವೇಗೌಡರು ಇವೆಲ್ಲವನ್ನೂ ಎದುರಿಸಿಯೇ ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಿದ್ದಾರೆ. ಕಾಲವೇ ಎಲ್ಲವನ್ನೂ ನಿರ್ಧರಿಸುತ್ತದೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುವ ಶಕ್ತಿ ಜೆಡಿಎಸ್‍ಗೆ ಇದೆ. ಜನರೇ ಎರಡು ರಾಷ್ಟ್ರೀಯ ಪಕ್ಷಗಳಿಗೆ ಉಗಿಯುವ ಕಾಲ ಬರಲಿದೆ. ಜೆಡಿಎಸ್ ಕಾರ್ಯಕರ್ತರು ಧೃತಿಗೆಡಬೇಕಿಲ್ಲ. ಜೆಡಿಎಸ್ ಮುಗಿಸಲು ಕಚೇರಿಯನ್ನು ಕಿತ್ತುಕೊಂಡರು. ಈಗ ಒಳ್ಳೆಯ ಕಚೇರಿ ಕಟ್ಟಿಲ್ಲವೇ, ಅಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಸಲಹೆ ನೀಡಿದರು

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬರದಿದ್ದರೆ 48 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಆಗುತ್ತಿರಲಿಲ್ಲ. ತೆಂಗು, ಆಲೂಗಡ್ಡೆ ಬೆಳೆಗಾರರಿಗೆ ಪರಿಹಾರ, ಗೃಹಲಕ್ಷ್ಮಿ ಯೋಜನೆ, ಒಂದು ಸಾವಿರ ಇಂಗ್ಲಿಷ್ ಶಾಲೆಗಳನ್ನು ತೆರೆಯಲಾಗಿದೆ. ಇದೀಗ ದಳದಲ್ಲಿ ತಳಮಳ ಎನ್ನುತ್ತಾರೆ. ಆದರೆ ಇಲ್ಲಿ ಯಾವ ತಳನು ಇಲ್ಲ ಮಳನು ಇಲ್ಲ ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿಯನ್ನು ಮತ್ತೆ ಮುಖ್ಯಮಂತ್ರಿ ಮಾಡಲು ಛಲ ತೊಟ್ಟಿದ್ದೇವೆ. ಈ ರಾಜ್ಯದಲ್ಲಿ ರೈತರು ಉಳಿಯಬೇಕು. ಅದಕ್ಕಾಗಿ ಮತ್ತೊಮ್ಮೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲೇಬೇಕು. ಕುಮಾರಸ್ವಾಮಿ ಸಾಲಮನ್ನಾ ಮಾಡಿರುವ ಹಣವನ್ನೇ ತಡೆಹಿಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ದೇವೇಗೌಡರು ತೀರ್ಮಾನ ಮಾಡುತ್ತಾರೆ. ಕೋಮುವಾದಿ ಪಕ್ಷ ದೂರವಿಡಲು ಒಂದಾಗುವುದಾದರೆ ದೇವೇಗೌಡರು, ಕುಮಾರಸ್ವಾಮಿ ನಿರ್ಧರಿಸುತ್ತಾರೆ. ದೇವೇಗೌಡರು, ಕುಮಾರಸ್ವಾಮಿ ಅವರ ತೀರ್ಮಾನವೇ ಅಂತಿಮ ಎಂದರು.

ಡಿ.ಕೆ.ಶಿವಕುಮಾರ್ ಕಷ್ಟದಲ್ಲಿದ್ದಾನೆ, ರಾಜ್ಯದಲ್ಲಿ ಡಿಕೆಶಿ ಒಬ್ಬನೇನಾ ದುಡ್ಡು ಮಾಡಿರೋದು, ನಾನು ದೇವೇಗೌಡರು ಡಿಕೆಶಿ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಕೆಲವರು ಬೆಳಿಗ್ಗೆ ಎದ್ದರೆ ಸಿದ್ದರಾಮಯ್ಯ ರಾತ್ರಿ ಆದರೆ ಯಡಿಯೂರಪ್ಪ ಮನೆಯ ಬಾಗಿಲು ತಟ್ಟುತ್ತವೆ. ಅವು ಕುಮಾರಸ್ವಾಮಿ ಯಾಕೆ ಡಿಕೆಶಿ ದರೋಡೆ ಮಾಡಿದಾ ಅಂತಾ ಹೇಳುತ್ತವೆ. ಅಂತಹವರು ಡಿ.ಕೆ.ಶಿವಕುಮಾರ್ ಉಳಿಸುತ್ತಾರಾ, ಕಾಲ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ಚೆಲುವರಾಯಸ್ವಾಮಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಬೇರೆಯವರಾಗಿದ್ದರೆ ಇಡಿ ಅಧಿಕಾರಿಗಳು ನೀಡುವ ಕಾಟವನ್ನು ತಾಳಲಾರದೆ, ಇಷ್ಟೊತ್ತಿಗೆ ಬಿಜೆಪಿಗೆ ಹೋಗಿ ಶರಣಾಗುತ್ತಿದ್ದರು. ಡಿಕೆಶಿ ಮತ್ತು ಡಿ.ಕೆ.ಸುರೇಶ್‍ಗೆ ಒಳ್ಳೆಯ ಶಕ್ತಿ ಇದೆ ಬೇರೆಯವರನ್ನು ಗೆಲ್ಲಿಸುವ ಶಕ್ತಿ ಇದೆ. ಹೀಗಾಗಿ ಅವರು ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *