ಸರ್ಕಾರಕ್ಕೆ ಒಂದು ತಿಂಗಳು ಗಡುವು ಕೊಟ್ಟ ಹೆಚ್‍ಡಿಕೆ

Public TV
2 Min Read

ಬೆಂಗಳೂರು: ಕೆಲ ದಿನಗಳಿಂದ ಅಶಾಂತಿ ಬೇಗುದಿಯಲ್ಲಿ ಬೇಯುತ್ತಿರುವ ಕರ್ನಾಟಕ ರಾಜ್ಯವು ಒಂದು ತಿಂಗಳ ಒಳಗಾಗಿ ಸಹಜ ಸ್ಥಿತಿಗೆ ಮರಳದೇ ಇದ್ದರೆ ಶಾಂತಿ, ಸಾಮರಸ್ಯ, ಸೌಹಾರ್ದ ಹಾಗೂ ಸಾಮರಸ್ಯ ಕರ್ನಾಟಕದ ಪುನರ್ ಸ್ಥಾಪನೆಗಾಗಿ ರಾಜ್ಯವ್ಯಾಪಿ ಪಾದಯಾತ್ರೆ ಕೈಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದರು.

ಬೆಂಗಳೂರಿನ ಗಾಂಧಿ ಭವನದಲ್ಲಿ ಜೆಪಿ ವಿಚಾರ ವೇದಿಕೆ ಹಮ್ಮಿಕೊಂಡಿದ್ದ ಸರ್ವ ಜನಾಂಗದ ಶಾಂತಿಯ ತೋಟ – ಕರ್ನಾಟಕ ಒಂದು ಭಾವೈಕ್ಯ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದನ್ನೂ ಓದಿ: ಕರ್ನಾಟಕದಲ್ಲೂ ಬಿಜೆಪಿಗೆ ಮತ್ತೆ ಅಧಿಕಾರ: ಅರುಣ್ ಸಿಂಗ್

ಶಾಂತಿ, ಸಹನೆ, ಸೌಹಾರ್ದ, ಸಾಮರಸ್ಯದ ತಾಣವಾಗಿದ್ದ ಕರ್ನಾಟಕವೂ ಈಗ ಹಿಂಸೆ, ಅಸಹನೆ, ಕೋಮು ದ್ವೇಷದ ದಳ್ಳುರಿಯಲ್ಲಿ ಉರಿಯುತ್ತಿದೆ. ಈ ಕಾರಣಕ್ಕಾಗಿಯೇ ನಾನು ಸರ್ಕಾರಕ್ಕೆ ಗಡುವು ಕೊಡುತ್ತಿದ್ದೇನೆ. ಒಂದು ತಿಂಗಳಲ್ಲಿ ಈ ವಾತಾವರಣವನ್ನು ತಿಳಿಗೊಳಿಸದಿದ್ದರೆ ರಾಜ್ಯದ ಉದ್ದಗಲಕ್ಕೂ ಪಾದಯಾತ್ರೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತೇನೆ. ಅವರನ್ನು ಬಡಿದೆಬ್ಬಿಸುತ್ತೇನೆ. ಸರ್ವ ಜನಾಂಗದ ಶಾಂತಿಯ ತೋಟವನ್ನು ಮತ್ತೆ ಪ್ರತಿಷ್ಠಾಪನೆ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಗಂಡಸ್ತನ ಎಂದು ವಿವಾದ ಹುಟ್ಟಿಹಾಕುವುದು ಗಂಡಸ್ತನ ಅಲ್ಲ: ರೇಣುಕಾಚಾರ್ಯ

ರಾಜ್ಯದಲ್ಲಿ ಸೃಷ್ಟಿ ಆಗಿರುವ ಭಯದ ವಾತಾವರಣವನ್ನು ಹೋಗಲಾಡಿಸಬೇಕು. ನಾಡಿನ ಮಕ್ಕಳನ್ನು ಇಂತದ್ದರಿಂದ ಪಾರು ಮಾಡಬೇಕು. ಪಾದಯಾತ್ರೆ ಮುಖಾಂತರ ಎಲ್ಲರನ್ನೂ ಭೇಟಿಯಾಗಿ ಮಾತನಾಡುತ್ತೇನೆ. ಸಮಾನ ಮನಸ್ಕರ ಜತೆ ಚರ್ಚೆ ನಡೆಸಿ ಮುಂದುವರಿಯುತ್ತೇನೆ ಎಂದರು.

ರಾಜ್ಯದಲ್ಲಿ ಉಂಟಾಗಿರುವ ಪರಿಣಾಮಗಳ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿ ಅವರು ಕಿಡಿಗೇಡಿ, ತಿಳಿಗೇಡಿ, ಸಮಾಜಘಾತಕರು ಈ ದೇಶವನ್ನೂ ಛಿದ್ರಗೊಳಿಸಲು ಹೊರಟಿದ್ದಾರೆ. ಯಾರ ಹೃದಯವನ್ನು ಸ್ವಚ್ಛ ಮಾಡುವುದು ಕಾಣುತ್ತಿಲ್ಲ. ಅದರ ವಿರುದ್ಧ ದನಿ ಎತ್ತಲು ಹೋದರೆ ಅಂತವರನ್ನು ಸಂಪೂರ್ಣ ನಿಗ್ರಹ ಮಾಡಲು ಕೆಲ ಸಂಸ್ಥೆಗಳನ್ನು ದಾಳಿಗೆ ಬಿಡುತ್ತಾರೆ. ವಿಹೆಚ್‍ಪಿ, ಭಜರಂಗದಳಕ್ಕಿಂತ ಇಡಿ, ಐಟಿ ಸಂಸ್ಥೆಗಳು ಭಯೋತ್ಪಾದಕ ಕೆಲಸ ಮಾಡುತ್ತಿವೆ ಎಂದು ಕೆಲ ಮಾಧ್ಯಮಗಳು ಬರೆದಿವೆ ಎಂದು ಹೇಳಿದರು.

ಕರ್ನಾಟಕದಲ್ಲಿ ಇಂಥದ್ದಕ್ಕೆ ಅವಕಾಶ ಕೊಡುವ ಪ್ರಶ್ನೆ ಇಲ್ಲ. ಇದು ಉತ್ತರ ಪ್ರದೇಶ ಅಲ್ಲ, ಕರ್ನಾಟಕ ಎನ್ನುವುದನ್ನು ಕೆಲವರು ಅರ್ಥ ಮಾಡಿಕೊಳ್ಳಬೇಕು. ನಾನು ಯಾರಿಗೂ ಹೆದರುವ ಪೈಕಿ ಅಲ್ಲ. ಹೋರಾಟ ನಡೆಸಿಯೇ ಸಿದ್ಧ ಎಂದು ಅವರು ನೇರ ಮಾತುಗಳಲ್ಲಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *