ಶಿವಮೊಗ್ಗ: ಅತ್ಯಾಚಾರ ನಡೆಸುವ ಕಾಮುಕರಿಗೆ ಭಯ ಹುಟ್ಟಬೇಕು ಅಂತಹ ಕಾನೂನು ಜಾರಿಗೆ ತರುವ ಕುರಿತು ಕ್ಯಾಬಿನೆಟ್ನಲ್ಲಿ ಚರ್ಚೆ ನಡೆಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದ ಆಯನೂರಿನಲ್ಲಿ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಕೆ.ಜೆ.ಜಾರ್ಜ್ ಗೃಹ ಸಚಿವರಾಗಿದ್ದರು. ಈ ವೇಳೆ ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ತಿದ್ದುಪಡಿ ಮಾಡಲಾಗುವುದು ಎಂದು ಚರ್ಚಿಸಿದ್ದರು. ಆದರೆ ಆ ವಿಷಯ ಚರ್ಚೆ ಆಯಿತು ಅಷ್ಟೇ ಜಾರಿಗೆ ಬರಲಿಲ್ಲ. ಅತ್ಯಾಚಾರ ನಡೆಸುವ ನೀಚರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಬದಲಾವಣೆಯ ಅವಶ್ಯಕತೆ ಇದೆ. ಕಾಮುಕರಿಗೆ ಕಾನೂನು ಹಾಗೂ ಪೊಲೀಸರ ಬಗ್ಗೆ ಭಯ ಇಲ್ಲದಂತಾಗಿದೆ. ಹಿಗಾಗಿಯೇ ಭಯ ಹುಟ್ಟಿಸುವಂತಹ ಕಾನೂನು ಜಾರಿಗೆ ತರಲಾಗುವುದು ಎಂದರು. ಇದನ್ನೂ ಓದಿ: ಹೆಚ್.ರವೀಂದ್ರ ಹುಟ್ಟುಹಬ್ಬ- 3ಸಾವಿರ ಮಹಿಳೆಯರಿಗೆ ಸೀರೆ ವಿತರಣೆ
ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಅತ್ಯಾಚಾರ ಪ್ರಕರಣವನ್ನು ಭೇದಿಸಲು ಸಾಕಷ್ಟು ಶ್ರಮ ಹಾಕಿದ್ದಾರೆ. ಮೈಸೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣದ ಕುರಿತು ಮೈಸೂರು ಹಾಗು ಬೆಂಗಳೂರಿನಲ್ಲಿ ಸರಣಿ ಸಭೆ ನಡೆಸಿದ್ದಾರೆ. ಕಿಡಿಗೇಡಿ ನೀಚರನ್ನು ಹುಡುಕಿ ಬಂಧಿಸಿರುವುದು ನನಗೆ ಸಂತೋಷವಾಗಿದೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಇದನ್ನೂ ಓದಿ: ಸಚಿವೆಯಾದರೂ ಹೆಣ್ಣು ಹೆಣ್ಣೇ ಅಲ್ವಾ? ಅವರ ಮನೆಯಲ್ಲೇ ಹಾಗಾದ್ರೆ?: ಹೆಚ್.ಎಂ.ರೇವಣ್ಣ