ನಾವು ಹುಲಿಗಳು, ನಮ್ಮನ್ನ ಮುಟ್ಟಿದ್ರೆ ಹಾಳಾಗಿ ಹೋಗ್ತಾರೆ- ಹೆಚ್‍ಡಿಕೆ ವಿರುದ್ಧ ಈಶ್ವರಪ್ಪ ವಾಗ್ದಾಳಿ

Public TV
4 Min Read

ರಾಯಚೂರು: ಸಮ್ಮಿಶ್ರ ಸರ್ಕಾರ ಬೇಹುಗಾರಿಕೆ ಮಾಡುತ್ತಿರೋ ವಿಚಾರ ನನಗೆ ಗೊತ್ತಿಲ್ಲ. ಅವರು ಏನೇ ಮಾಡಿದ್ರೂ ಬಿಜೆಪಿಯ 104 ಜನ ಶಾಸಕರು ಹುಲಿಗಳಿದ್ದಂತೆ. ನಮ್ಮನ್ನ ಮುಟ್ಟಿದವರೇ ಹಾಳಾಗಿ ಹೋಗುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಬಿಜೆಪಿ ಶಾಸಕರನ್ನು ಮುಟ್ಟಲು ಸಾಧ್ಯವಿಲ್ಲ ಅಂತ ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬೇಹುಗಾರಿಕೆ ಬಿಟ್ಟು ಬೇಕಾದ ಗಾರಿಕೆ ಮಾಡಿಕೊಂಡು ಹೋಗಲಿ. ನಮ್ಮನ್ನು ಮುಟ್ಟಿದವರೆಲ್ಲ ಹಾಳಾಗಿ ಹೋಗಿದ್ದಾರೆ. ಹೀಗಾಗಿ ಮತ್ತೆ ನಮ್ಮನ್ನು ಮುಟ್ಟಬೇಡಿ ಅಂತ ಹೇಳ್ತೀನಿ. ಇಷ್ಟು ಹೇಳಿದ ಮೇಲೂ ಅವರು, ಹಾಳಾಗಿ ಹೋಗ್ತೀನಿ ಅಂತ ತೀರ್ಮಾನ ಮಾಡಿದ್ರೆ ನಾನೇನು ಮಾಡಲಿ ಅಂತ ಹೇಳಿದ್ರು.

ಇದೇ ಸಂದರ್ಭದಲ್ಲಿ ಚುನಾವಣೆ ಬರುತ್ತಿದ್ದಂತೆಯೇ ಬಿಜೆಪಿಯವರು ರಾಮನ ಜಪ ಮಾಡುತ್ತಿದ್ದಾರೆ ಅನ್ನೋ ವಿರೋಧ ಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಸಿದ್ದರಾಮಯ್ಯನವರಿಗೆ ಈಗ ಉದ್ಯೋಗ ಇಲ್ಲ. ಚಾಮುಂಡೇಶ್ವರಿಯಲ್ಲಿ ಸೋತ್ರು. ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿತ್ತು. ಹೀಗಾಗಿ ಮುಂದಿನ ಭವಿಷ್ಯ ಇಲ್ಲ. ಮತ್ತೆ ಸರ್ಕಾರ ಬರುತ್ತೆ ಅಂತ ಹೇಳಿದ ಕಾಂಗ್ರೆಸ್, 78 ಸೀಟಿಗೆ ಬಂದು ನಿಂತಿತ್ತು. ಹೀಗಾಗಿ ಅವರು ವಿಧಿಯಿಲ್ಲದೇ ಜೆಡಿಎಸ್ ಜೊತೆ ಸೇರಿ ತಮ್ಮ ಪಕ್ಷ ಇನ್ನೂ ಬದುಕಿದೆ ಅನ್ನೋದನ್ನು ತೋರಿಸಿಕೊಟ್ಟರು ಅಂದ್ರು.

ವಿರೋಧ ಪಕ್ಷದ ವಿರುದ್ಧ ಕಿಡಿ:
ರಾಮಮಂದಿರದ ಬಗ್ಗೆ ನಾವು ಈವಾಗ ಹೇಳುತ್ತಿಲ್ಲ. ಹಲವು ಸಮಯಗಳಿಂದಲೂ ರಾಮಮಂದಿರವನ್ನು ಕಟ್ಟೇ ಕಟ್ಟುತ್ತೇವೆ ಅಂತ ಹೇಳುತ್ತಾ ಬಂದಿದ್ದೇವೆ. ಬಾಬರ್ ಕಟ್ಟಿದ ಕಟ್ಟಡವನ್ನು ಬಾಬರಿ ಮಸೀದಿ ಅಂತ ಹೇಳಿಕೊಂಡ್ರು. ಅದು ಒಂದು ಗುಲಾಮಗಿರಿಯ ಸಂಕೇತ ಅಂತ ಇಡೀ ಹಿಂದೂ ಸಮಾಜವೇ ಹೇಳಿತ್ತು. ರಾಮಮಂದಿರ ಇದ್ದಂತಹ ಜಾಗವನ್ನು ಒಡೆದು ಅಲ್ಲೊಂದು ಮಸೀದಿ ಕಟ್ಟಿದ. ಅದಕ್ಕೋಸ್ಕರ ಬಾಬರ್ ಎಂಬ ಹೆಸರು ಬಂತು. ಇವರು ಬಾಬರಿ ಮಸೀದಿ ಮತ್ತೆ ಕಟ್ಟುತ್ತೇವೆ ಅಂತ ಹೇಳುತ್ತಲೇ ಬಂದ್ರು. ಇದಕ್ಕೆ ನನ್ನದೇನು ಅಭ್ಯಂತರವಿಲ್ಲ. ಇಷ್ಟು ದಿನ ಸುಮ್ಮನಿದ್ದವರು, ಈಗ ರಾಮಮಂದಿರದ ಬಗ್ಗೆ ಇವರಿಗೆ ಆಸಕ್ತಿ ಬಂದಿದೆ. ಇಂದು ಇಡೀ ದೇಶದಲ್ಲಿ ರಾಮ ಹಾಗೂ ಹಿಂದುತ್ವದ ಬಗ್ಗೆ ಟೀಕೆ ಮಾಡಿ ಕಾಂಗ್ರೆಸ್ 22 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿತು. ಹೀಗಾಗಿ ಹಿಂದುತ್ವ ಹಾಗೂ ರಾಮಮಂದಿರ ವಿಚಾರದಲ್ಲಿ ಶಕ್ತಿ ಇದೆ ಅಂತ ಗೊತ್ತಾದ ತಕ್ಷಣವೇ ಇದೀಗ ಇವರು ಕೂಡ ಕನವರಿಸಲು ಆರಂಭಿಸಿದ್ದಾರೆ ಅಂತ ಸಿಡಿಮಿಡಿಗೊಂಡ ಈಶ್ವರಪ್ಪ, ನಾವು ಅಧಿಕಾರಕ್ಕೆ ಬಂದ್ರೆ ಬಾಬರಿ ಮಸೀದಿ ಅಲ್ಲೇ ಕಟ್ಟುತ್ತೇವೆ ಅಂತ ಕಾಂಗ್ರೆಸ್ ನವರು ಘೋಷಣೆ ಮಾಡಲಿ ಅಂರ ಸವಾಲು ಹಾಕಿದರು.

ನಾವು ರಾಮಂದಿರವನ್ನು ಕಟ್ಟೇ ಕಟ್ಟುತ್ತೇವೆ ಅಂತ ಹೊರಟ್ಟಿದ್ದೇವೆ. ಆದ್ರೆ ಸುಪ್ರೀಂ ಕೋರ್ಟ್ ಮಾತಿಗೆ ಸ್ವಲ್ಪ ಬೆಲೆ ಕೊಟ್ಟಿದ್ದೇವೆ. ಯಾಕಂದ್ರೆ ಕೇಂದ್ರದಲ್ಲಿ ನಮ್ಮ ಸರ್ಕಾರ ಇರುವಂತಹ ಸಂದರ್ಭದಲ್ಲಿ ಸುಪ್ರೀಂ ಅರ್ಜೆಂಟ್ ಏನಿಲ್ಲ ಅಂತ ಹೇಳುತ್ತಿದೆ. ಸುಪ್ರೀಂ ಕೋರ್ಟ್ ಈ ರೀತಿ ಹೇಳಿದ್ದು ತಪ್ಪು ಅಂತ ಸಾಧು-ಸಂತರು ಹೋರಾಟ ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಧರ್ಮ ಬಹಳ ಪ್ರಮುಖವಾದ ಪಾತ್ರ ವಹಿಸಿದೆ. ಹೀಗಾಗಿ ಸಿದ್ದರಾಮಯ್ಯನವರಿಗೆ ಅಧಿಕಾರ ಕಳೆದುಕೊಂಡ ಬಳಿಕ ನಾನು ಏನೇನು ಮಾಡುತ್ತೀದ್ದೀನಿ ಅಂತ ಗೊತ್ತಿಲ್ಲದೇ ಹುಚ್ಚ ಮಾತನಾಡಿದಂಗೆ ಮಾತಾಡುತ್ತಿದ್ದಾರೆ ಅಂತ ಕಿಡಿಕಾರಿದ್ರು.

ಚುನಾವಣೆಗೆ ಮೊದಲೂ ನಾನು ಮುಖ್ಯಮಂತ್ರಿ, ನಂತರವೂ ನಾನೇ ಮುಖ್ಯಮಂತ್ರಿ ಅಂದ್ರು. ಆದ್ರೆ ಮುಖ್ಯಮಂತ್ರಿ ಸ್ಥಾನ ಹೋಯಿತು. ಆ ನಂತ್ರ ನಾನು ಶಾಸಕ ಸ್ಥಾನಕ್ಕೂ, ಸಂಸದ ಸ್ಥಾನಕ್ಕೂ ನಿಲ್ಲಲ್ಲ ಅಂತ ಹೇಳಿದ್ರು. ಆದ್ರೆ ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಮುಗಿಸಿಕೊಂಡು ಬಂದು ನಾನು ಯಾವುದೇ ರಾಜಕೀಯಕ್ಕೆ ನಿಲ್ಲಲ್ಲ ಅಂತ ಹೇಳಿ ಮತ್ತೆ ಮುಖ್ಯಮಂತ್ರಿ ಆಗ್ತೀನಿ ಅಂತಾರೆ. ಇದು ಹುಚ್ಚು ತಾನೆ. ಹೀಗಾಗಿ ಸಿದ್ದರಾಮಯ್ಯ ಅವರ ಮಾತಿಗೆ ನಾನು ಬೆಲೆ ಕೊಡಲ್ಲ. ಸಿದ್ದರಾಮಯ್ಯನವರೇ ನೀವು ರಾಜಕೀಯದಲ್ಲಿ ಅಸ್ತಿತ್ವವನ್ನು ಕಳೆದುಕೊಂಡಿದ್ದೀರಿ. ಹೇಗೂ ರಾಜಕಾರಣದಲ್ಲಿ ಇದ್ದೀವಿ ಅನ್ನೋದನ್ನು ತೋರಿಸಿಕೊಡುವ ಸಲುವಾಗಿ ದೇವೇಗೌಡರು, ನೀವು ಹಾವು-ಮುಂಗಿಸಿ ಅಂತ ಇದ್ದೋರು ಇಂದು ಭಾಯಿ-ಭಾಯಿ ಆಗಿದ್ದೀರಿ. ಸಂತೋಷದ ವಿಚಾರವಾಗಿದೆ. ಕರ್ನಾಟದಲ್ಲಿ ಭೀಕರ ಬರಗಾಲ ಬಂದಿದೆ. ಆದ್ರೆ ರಾಜ್ಯದ ಉಸ್ತುವಾರಿ ಸಚಿವರು ಯಾವುದೇ ಒಬ್ಬ ರೈತನ ಹೊಲಕ್ಕೆ ಹೋಗಿಲ್ಲ. ಕುಡಿಯುವ ನೀರಿಲ್ಲ. ಜಾನುವಾರಿಗೆ ಮೇವಿಲ್ಲ. ಇಂತಹ ಸಂದರ್ಭದಲ್ಲಿ ಇಬ್ಬರು ಪ್ರಮುಖರಾದ ದೇವೇಗೌಡ ಹಾಗೂ ಸಿದ್ದರಾಮಯ್ಯನವಲ್ಲಿ ಮನವಿ ಮಾಡಿಕೊಳ್ಳುವಿದೇನೆಂದ್ರೆ, ನೀವು ಬಿಜೆಪಿಗೆ ಬೇಕಾದ್ದನ್ನು ಬೈಯಿರಿ. ನನ್ನದೇನು ಅಭ್ಯಂತರವಿಲ್ಲ. ಆದ್ರೆ ರಾಜ್ಯದ ಜನ ನಿಮ್ಮದು ಒಂದು ಸರ್ಕಾರ ಇದೆ ಅಂತ ಅಂದುಕೊಂಡಿದ್ದಾರೆ. ಆದ್ರೆ ಈ ರಾಜ್ಯದಲ್ಲಿ ಸರ್ಕಾರ ಇದೆ ಅಂತ ನನಗೆ ನಂಬಿಕೆಯಿಲ್ಲ, ಸತ್ತೋಗಿದೆ. ಆದ್ರೆ ಜನ ಸರ್ಕಾರ ಇದೆ ಅಂತ ಅಂದುಕೊಂಡಿದ್ದಾರೆ ಅಂದ್ರು.

ಇವತ್ತು ರಾಜ್ಯದಲ್ಲಿ ಮಣ್ಣಿನ ಮಕ್ಕಳು ಮಣ್ಣು ತಿನ್ನುತ್ತಿದ್ದಾರೆ. ಇನ್ನೊಂದೆಡೆ ಹಿಂದುಳಿದ ವರ್ಗದ ಚಾಂಪಿಯನ್ ಅಂತ ಇವರು ಹೇಳಿಕೊಳ್ಳುತ್ತಾರೆ. ದೇವೇಗೌಡ ಹಾಗೂ ಸಿದ್ದರಾಮಯ್ಯ ಇಬ್ಬರಲ್ಲಿ ಒಬ್ಬರು ದಯವಿಟ್ಟು ಒಂದು ಜಿಲ್ಲೆಗೆ ಬಂದು ಬರ ವೀಕ್ಷಣೆ ಮಾಡಿ. ಆಗ ನಿಮ್ಮ ಉಸ್ತುವಾರಿ ಸಚಿವರು, ದೇವೇಗೌಡರು ಹಾಗೂ ಸಿದ್ದರಾಮಯ್ಯನವರು ಹೋಗಿದ್ದಾರೆ ಅಂದ್ರೆ ನಾನು ಒಂದು ಬಾರಿ ಭೇಟಿ ಕೊಡಲೇ ಬೇಕು ಅಂತ ಓಡೋಡಿ ಬರುತ್ತಾರೆ. ಉಸ್ತುವಾರಿ ಸಚಿವರು ಬಂದ್ರೆ ಸ್ವಾಭಾವಿಕವಾಗಿ ಅಧಿಕಾರಿಗಳು ಕೂಡ ಬರುತ್ತಾರೆ ಅಂತ ಸಲಹೆ ನೀಡಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *