ಕಾಂಗ್ರೆಸ್ ನಿರ್ನಾಮ ಮಾಡಲು ಸಿದ್ದರಾಮಯ್ಯನಂತವರು ಒಬ್ರು ಸಾಕು: ಕೆ.ಎಸ್ ಈಶ್ವರಪ್ಪ

Public TV
3 Min Read

ಬಾಗಲಕೋಟೆ: ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಜೀವ ಕುಟು ಕುಟು ಅಂತಿದೆ. ಯಾವಾಗ ಇದು ಸಾಯುತ್ತೋ ಗೊತ್ತಿಲ್ಲ. ನಿರ್ನಾಮ ಮಾಡಲು ಸಿದ್ದರಾಮಯ್ಯನಂತವರು ಒಬ್ಬರು ಸಾಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಕೋರ್ಟ್‍ಗೆ ಗೌರವ ಕೊಡೋದನ್ನು ಮೊದಲು ಕಲಿತುಕೊಳ್ಳಲಿ. ಸಾಧು ಸಂತರ ಬಗ್ಗೆ ನೀವು ಮಾಡಿರೋ ಹೇಳಿಕೆ, ಅಕ್ಷ್ಯಮ್ಯ ಅಪರಾಧ. ಜರಾಸಂಧನಿಗೆ ನೂರು ತಪ್ಪು ಮಾಡಿದಾಗ ಶಿಕ್ಷೆ ಆಯ್ತು ಅಂತಾರಲ್ಲ ಹಾಗೆ, ಸಿದ್ದರಾಮಯ್ಯ ಇವರದ್ದೂ ನೂರು ತಪ್ಪಾಯ್ತು. ಇನ್ನು ಇವರದ್ದು ಯಾವುದೇ ಕಾರಣಕ್ಕೂ ಇಡೀ ದೇಶದಲ್ಲಿ ಅಧಿಕಾರ ಮಾಡಲು ಅಧಿಕಾರವೇ ಇಲ್ಲ. ಸಿದ್ದರಾಮಯ್ಯ ಅವರು, ರಾಜಕೀಯ ನಿವೃತ್ತಿ ತಗೊಳ್ಳಿ, ಇಲ್ಲ ಅವರನ್ನು ಕಾಂಗ್ರೆಸ್ ಪಕ್ಷದಿಂದ ಕಿತ್ತು ಬಿಸಾಕ್ಬೇಕು ಎಂದು ಒತ್ತಾಯಿಸಿದರು.

SIDDARAMAIAH

ವೀರಶೈವ ಲಿಂಗಾಯತ ಒಡೆದಾಯ್ತು, ಈಗ ಸ್ವಾಮೀಜಿಗಳಲ್ಲಿ ಹಿರಿಯ ಸ್ವಾಮೀಜಿಗಳು, ಕಿರಿಯ ಸ್ವಾಮೀಜಿಗಳು ಎಂದು ಒಡೆಯುವ ಪ್ರಯತ್ನವನ್ನು ಸಿದ್ದರಾಮಯ್ಯ ನಡೆಸುತ್ತಿದ್ದಾರೆ. ಹಿರಿಯ ಸ್ವಾಮಿಜಿಗಳು ಅಂದ್ರೆ ಏನ್ ಲೆಕ್ಕ ಅವರದ್ದು, ಮಾನದಂಡ ಏನು. ದಪ್ಪ ಇದ್ದಾರೋ ಎತ್ತರ ಇದ್ದಾರೋ, ಹಣದಲ್ಲಿ ಜಾಸ್ತಿ ಇದ್ದಾರೋ. ಯಾಕಂದ್ರೆ ಸಿದ್ದರಾಮಯ್ಯ ಮೆದುಳೊಂದು ತೆಳ್ಳಗಿದೆ, ಅದನ್ನ ಬಿಟ್ರೆ ಅವರು ಹಿರಿಯರು ಅನ್ನೋ ಪ್ರಶ್ನೆ ಉದ್ಭವವಾಗಲ್ಲ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಪರಿಸ್ಥಿತಿ ತುಘಲಕ್ ರೀತಿ ಆಗಿದೆ: ಶ್ರೀರಾಮುಲು

ಯಾರು ಸರ್ವವನ್ನೂ ತ್ಯಾಗ ಮಾಡಿ ಬಂದಿರ್ತಾರೋ ಅವರನ್ನು ಸ್ವಾಮೀಜಿಗಳು ಎಂದು ನಮ್ಮ ಸಮಾಜದಲ್ಲಿ ಕರೆಯುತ್ತೇವೆ. ಸಿದ್ದರಾಮಯ್ಯ ಅವರದ್ದು, ಈ ಸಾಧು ಸಂತರನ್ನು ಒಡೆಯೋ ಪ್ರಯತ್ನವಾಗಿದೆ. ಹಿರಿಯ ಸ್ವಾಮೀಜಿಗಳು ವಿರೋಧ ಮಾಡಿಲ್ಲ ಅಂತಾರೆ, ಹಾಗಾದರೆ ಇವರ ಹೇಳಿಕೆಯನ್ನ ಸ್ವಾಗತ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.

ಇಡೀ ದೇಶ ಹಾಗೂ ರಾಜ್ಯದಲ್ಲಿ ಯಾರಾದರೂ ಒಬ್ಬ ಸ್ವಾಮೀಜಿ ಸಿದ್ದರಾಮಯ್ಯ ಹೇಳಿಕೆಯನ್ನು ಸ್ವಾಗತ ಮಾಡಿದ್ದಾರಾ? ಅವರ ಕಾಂಗ್ರೆಸ್ ಪಕ್ಷದವರೇ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸ್ವಾಗತ ಮಾಡುತ್ತಿಲ್ಲ. ಅವರು ಹೇಳಿಕೆ ಕೊಟ್ಟಿದ್ದಾರೆ, ಅವರೇ ಉತ್ತರ ಕೊಟ್ಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ದಾರೆ. ವಿಧಿಯಿಲ್ಲದೇ ಸಿದ್ದರಾಮಯ್ಯರ ಮಗ ಯತೀಂದ್ರ ಮಾತ್ರ ಅವರ ಜೊತೆಗಿದ್ದಾರೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್‍ನ ಒಬ್ಬ ನಾಯಕರು ಸಿದ್ದರಾಮಯ್ಯ ಪರ ಬಾಯಿಬಿಟ್ಟಿಲ್ಲ. ಇದನ್ನ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು. ಹಿರಿಯ ಸ್ವಾಮೀಜಿ, ಕಿರಿಯ ಸ್ವಾಮೀಜಿ ಅಂತಾ ಒಡೆಯೋ ಪ್ರಯತ್ನ ಮಾಡಬೇಡಿ ಎಂದು ಈಶ್ಚರಪ್ಪ ಆಗ್ರಹಿಸಿದರು. ಇದನ್ನೂ ಓದಿ: ತಲೆ ತುಂಬಾ ಕೂದಲಿದ್ದಿದ್ದರಿಂದ ಬೋಳಿಸಿಕೊಳ್ಳುವೆ ಎಂದಿದ್ದೆ, ಈಗ ಕೂದಲಿಲ್ಲ: ಹೆಚ್‍ಡಿಕೆ

ಹಿಂದೂ ಸಮಾಜ ಒಟ್ಟಾಗಿದೆ, ಲಿಂಗಾಯತರು, ವೀರಶೈವ ಎಂದು ಒಡೆದು ಒಂದು ಸಾರಿ ಅನುಭವಿಸಿದ್ದೀರಿ. ಕಾಂಗ್ರೆಸ್ ಸರ್ಕಾರವನ್ನೂ ಕಳೆಕೊಂಡ್ರಿ, ಚಾಮುಂಡೇಶ್ವರಿಯಲ್ಲಿ ಸೋತು ಆಯ್ತು ಇನ್ನೂ ನಿಮಗೆ ಬುದ್ಧಿ ಬಂದಿಲ್ಲ. ನೇರವಾಗಿ ನೀವು ಜಮೀರ್ ಅಹ್ಮದ್ ಕ್ಷೇತ್ರದಲ್ಲಿ ಹೋಗಿ, ಸ್ಪರ್ಧಿಸಬೇಕು. ಮುಸಲ್ಮಾನರ ವೋಟು ಬೇಕು, ಅದ್ಕೋಸ್ಕರ ಅವರನ್ನು ತೃಪ್ತಿಪಡಿಸಲು ಈ ರೀತಿ ಹೇಳಿಕೆ ಕೊಡ್ತಿದ್ದೇನೆ. ನಾನು ಚಾಮರಾಜನಗರದಲ್ಲಿ ಚುನಾವಣೆಗೆ ನಿಲ್ಲಬೇಕು ಎಂದು ಹೇಳಿಕೊಂಡುಬಿಡಿ. ಅ0ದು ಬಿಟ್ಟು ಹಿಂದೂ ಸಮಾಜದ ಬಗ್ಗೆ ಬಾಯಿಗೆ ಬಂದಂತೆ ಯಾಕೆ ಮಾತಾಡೋ ಪ್ರಯತ್ನ ನೆಡಸ್ತೀರಿ ಎಂದು ಪ್ರಶ್ನಿಸಿದರು.

ಕೋರ್ಟ್ ತೀರ್ಮಾನ ಕೊಟ್ಟಿದೆ, ಕೆಲ ಮುಸ್ಲಿಮ್ ಸಂಘಟನೆಗಳು ತೀರ್ಪು ವಿರೋಧಿಸಿ ಬಂದ್ ಕರೆಕೊಟ್ಟವು. ಇದಕ್ಕೆ ಸಿದ್ದರಾಮಯ್ಯ ಅವರ ಅಸಮಾಧಾನ ತೋಡಿಕೊಳ್ಳಲು ಬಂದ್ ಕರೆಕೊಟ್ಟಿದ್ದಾರೆ, ಅದಕ್ಕೆ ನಾವು ನಾವು ಬೆಂಬಲ ಕೊಟ್ಟಿದ್ದೀವಿ ಅಂದರು. ಕೋರ್ಟ್ ತೀರ್ಪನ್ನು ವಿರೋಧ ಮಾಡೋ ವ್ಯಕ್ತಿಗಳ ಜೊತೆಗೆ ನೀವು ಇದ್ದರೇ ಹೇಗೆ. ನಿಮಗೆ ಏನು ಅಧಿಕಾರ ಇದೆ. ಸಿದ್ದರಾಮಯ್ಯ ಅವರು ಕೋರ್ಟ್ ಬಗ್ಗೆ ಮಾತಾಡೋಕೆ, ಸಂವಿಧಾನದ ಬಗ್ಗೆ ಮಾತಡೋಕೆ ಅಂಬೇಡ್ಕರ್ ಬಿಟ್ಟರೇ, ನಾನೇ ಅನ್ನೋ ರೂಪದಲ್ಲಿ ಪ್ರತಿಬಿಂಬ ಮಾಡ್ಕೋತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *