ತಗ್ಗದ ಕೃಷ್ಣೆಯ ಅಬ್ಬರ- ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಆತಂಕ

Public TV
1 Min Read

ರಾಯಚೂರು: ನಾರಾಯಣಪುರ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ ಕೃಷ್ಣಾ ನದಿಯ (Krishna River) ಅಬ್ಬರ ಜೋರಾಗಿದೆ. ಜಿಲ್ಲೆಯಲ್ಲಿ ಕ್ಷಣ ಕ್ಷಣಕ್ಕೂ ಪ್ರವಾಹದ ಆತಂಕ ಹೆಚ್ಚುತ್ತಲೇ ಇದ್ದು, ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದ ಐತಿಹಾಸಿಕ ಅಲ್ಲಮಪ್ರಭು ದೇವಾಲಯ ಸಂಪೂರ್ಣ ಜಲಾವೃತವಾಗಿದೆ.

ದೇವಾಲಯ ಬಳಿಯ ಹೋಟೆಲ್‍ಗಳಿಗೆ ನೀರು ನುಗ್ಗಿ ವ್ಯಾಪಾರಿಗಳು ನಷ್ಟ ಅನುಭವಿಸಿದ್ದಾರೆ. ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್ ಬಳಿಯ ಮೀನುಗಾರರ ಬದುಕು ಅತಂತ್ರವಾಗಿದೆ. ಇಲ್ಲಿನ ಕಲ್ಯಾಣ ಮಂಟಪ, ರಥ ಸಂಪೂರ್ಣ ಜಲಾವೃತವಾಗಿವೆ. ಕೃಷ್ಣೆಯ ಪ್ರವಾಹದಿಂದಾಗಿ ರಾಯಚೂರು, ಲಿಂಗಸುಗೂರು ತಾಲೂಕಿನ ನಡುಗಡ್ಡೆ ನಿವಾಸಿಗಳು ಬಾಹ್ಯ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಮಹಿಳೆಯರ ಸೀರೆ ಎಳೆದವನಿಗೆ ಬಿತ್ತು ಧರ್ಮದೇಟು

ಪ್ರವಾಹದಿಂದ ಈಗಾಗಲೇ ಜಿಲ್ಲೆಯ ಶೀಲಹಳ್ಳಿ, ಹೂವಿನ ಹೆಡಗಿ ಹಾಗೂ ಗುರ್ಜಾಪೂರ ಸೇತುವೆ ಮುಳುಗಡೆಯಾಗಿವೆ. ಜಿಲ್ಲೆಯ ಪ್ರವಾಹ ಪೀಡಿತ ಮೂರು ತಾಲೂಕುಗಳ ಐದಾರು ದೇವಸ್ಥಾನಗಳು ಸಂಪೂರ್ಣ ಜಲಾವೃತವಾಗಿವೆ. ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗುತ್ತಿದೆ. ನದಿಯಲ್ಲಿ ನೀರು ಹೆಚ್ಚಾಗುವ ಮುನ್ಸೂಚನೆ ಹಿನ್ನೆಲೆ ನದಿ ಪಾತ್ರದ ಗ್ರಾಮಸ್ಥರಲ್ಲಿ ಆತಂಕವು ಹೆಚ್ಚಾಗಿದೆ.

ನಾರಾಯಣಪುರ ಜಲಾಶಯದಿಂದ 30 ಗೇಟ್ ಗಳ ಮೂಲಕ ನೀರು ಬಿಡುಗಡೆ ಮಾಡಲಾಗುತ್ತಿದೆ. ಸದ್ಯ ಜಲಾಶಯದಿಂದ ಕೃಷ್ಣಾ ನದಿಗೆ 4.14 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಜಲಾಶಯಕ್ಕೆ 4.20 ಲಕ್ಷ ಒಳಹರಿವು ಇದೆ. ಶೇಕಡಾ 64.67 ರಷ್ಟು ಜಲಾಶಯ ಭರ್ತಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *