ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ, ಕಾಂಗ್ರೆಸ್ಸಿಗನಾಗಿ ನಾನೇ ಕೈಮುಗಿದು ಧನ್ಯವಾದ ಹೇಳ್ತೀನಿ: ಕೃಷ್ಣಬೈರೇಗೌಡ

Public TV
2 Min Read

– ಬಿಜೆಪಿ-ಜೆಡಿಎಸ್‌ನಿಂದ ರಾಜ್ಯ ಸರ್ಕಾರ ಉರುಳಿಸಲು ಸಂಚು: ಆರೋಪ

ಚಿಕ್ಕಮಗಳೂರು: ಕೇಂದ್ರ ಸರ್ಕಾರದಿಂದ ಮೇಕೆದಾಟು ಯೋಜನೆಗೆ (Mekedatu Project) ಅನುಮತಿ ಕೊಡಿಸಿ, ಆಗ ಕಾಂಗ್ರೆಸ್ಸಿಗನಾಗಿ ನಾನೇ ನಿಮಗೆ ಕೈಮುಗಿದು ಧನ್ಯವಾದ ಹೇಳುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಸಚಿವ ಕೃಷ್ಣಬೈರೇಗೌಡ (Krishna Byre gowda) ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ (Chikkamagaluru) ಮಾತನಾಡಿದ ಅವರು, ಭದ್ರಾ ಮೇಲ್ದಂಡೆ, ಕಳಸ ಬಂಡೂರಿ ಯೋಜನೆಯನ್ನ ಕೇಂದ್ರ ಸರ್ಕಾರ ಕೆಳಗೆ ಹಾಕಿಕೊಂಡು ಕೂತಿದೆ. ಮೇಕೆದಾಟು ಯೋಜನೆಗೆ ಕೇಂದ್ರದಿಂದ ಅನುಮತಿ ಕೊಡಿಸಿ. ಆವಾಗ ನಾನು ಕಾಂಗ್ರೆಸ್ಸಿಗನಾಗಿ ನಿಮಗೆ ಕೈಮುಗಿದು ಧನ್ಯವಾದ ತಿಳಿಸುತ್ತೇನೆ. ಇದನ್ನು ಮಾಡಿದರೆ ನೀವು ಕೇಂದ್ರದಲ್ಲಿ ಮಂತ್ರಿಯಾಗಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಶೇಖ್ ಹಸೀನಾ ಭಾರತದ ಮೂಲಕ ಲಂಡನ್‌ಗೆ ಪಲಾಯನ; ಭಾರತ-ಬಾಂಗ್ಲಾ ಗಡಿಯಲ್ಲಿ ಹೈಅಲರ್ಟ್

ಡಿಸೆಂಬರ್ ವೇಳೆಗೆ ಸರ್ಕಾರ ಬಿದ್ದು ಹೋಗುತ್ತದೆ ಎನ್ನುವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಕೇಂದ್ರ ಎನ್‌ಡಿಎ ಸರ್ಕಾರದಲ್ಲಿ ಕುಮಾರಸ್ವಾಮಿ ಮಂತ್ರಿಯಾಗಿದ್ದಾರೆ. ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು ಸ್ವಾಮಿ? ಕಾಂಗ್ರೆಸ್ ಸರ್ಕಾರವನ್ನು ಬೀಳಿಸಬೇಕು ಎನ್ನುವುದೇ ನಿಮ್ಮ ಕೊಡುಗೆನಾ? ಸರ್ಕಾರವನ್ನು ಬೀಳಿಸುವುದಕ್ಕೆ, ಎತ್ತುವುದಕ್ಕೆ ವೋಟ್ ಹಾಕಿರುವ ಜನರಿದ್ದಾರೆ. ನೀವೆಲ್ಲಾ ಸೇರಿ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಿದ್ದೀರಲ್ಲ, ಕರ್ನಾಟಕಕ್ಕೆ ನಿಮ್ಮಿಂದ ಸಿಕ್ಕ ಕೊಡುಗೆ ಏನು? ಆಪರೇಷನ್ ಮಾಡಿ ಕರ್ನಾಟಕದಲ್ಲಿ ಸರ್ಕಾರ ಬೀಳಿಸಿದರೆ ರಾಜ್ಯಕ್ಕೆ ಅದೇ ನಿಮ್ಮ ಕೊಡುಗೆನಾ? ಜನರಿಂದ ಆಯ್ಕೆಯಾಗಿರುವ ಸರ್ಕಾರವನ್ನು ಉರುಳಿಸಬೇಕು ಎನ್ನುವುದು ಮಾತ್ರ ನಿಮ್ಮ ಪ್ರಯತ್ನವಾ? ಎಂದು ಸರಣಿ ಪ್ರಶ್ನೆಗಳ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಕೇಸ್‌- ಆರೋಪಿಯನ್ನು ಕರೆ ತಂದು ಮರು ಸೃಷ್ಟಿ ಹೇಗೆ ಮಾಡಲಾಯ್ತು?

ಆ ಕಡೆ ಪ್ರಹ್ಲಾದ್‌ ಜೋಶಿ, ಈ ಕಡೆ ಕುಮಾರಸ್ವಾಮಿ ಇವರಿಬ್ಬರಿಂದ ಕಾಂಗ್ರೆಸ್ ಸರ್ಕಾರ ಬೀಳಿಸುವ ತಂತ್ರ ನಡೆಯುತ್ತಿದೆ. ಸರ್ಕಾರ ಬೀಳಿಸಿದ್ರೆ ಕರ್ನಾಟಕಕ್ಕೆ ಏನು ಸಿಗುತ್ತೆ? ನೀವು ಇವತ್ತು ಮಂತ್ರಿಯಾಗಿರೋದು ಬರೀ ದ್ವೇಷ ಸಾಧನೆ ಮಾಡೋದಕ್ಕಾ? ಸರ್ಕಾರ ಬೀಳಿಸುತ್ತೇವೆ ಎನ್ನುವುದು ಯಾವ ಪುರುಷಾರ್ಥಕ್ಕಾಗಿ? ಅದಕ್ಕಾಗಿಯೇ ಜನ ನಿಮ್ಮನ್ನ ದೆಹಲಿಗೆ ಕಳುಹಿಸಿರುವುದಾ? ಕೇಂದ್ರ ಬಿಜೆಪಿಯಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಮುಚ್ಚಿ ಹಾಕುವುದಕ್ಕೆ ಇವೆಲ್ಲ ಗಿಮಿಕ್ ಮಾಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಎರಡು ಪಕ್ಷಗಳು ಸೇರಿ, ಏನಾದರೂ ಮಾಡಿ ಸರ್ಕಾರ ಉರುಳಿಸಬೇಕು ಎಂದು ಪ್ರಯತ್ನ ಮಾಡುತ್ತಿದೆ ಎಂದು ಕೆಂಡಾಮಂಡಲವಾಗಿದ್ದಾರೆ. ಇದನ್ನೂ ಓದಿ: ಶುಭ ಮುಹೂರ್ತ ನೋಡಿ ಅಕ್ರಮದ ದಾಖಲೆ ಬಿಡುಗಡೆ ಮಾಡಿ: ಹೆಚ್‍ಡಿಕೆ ವಿರುದ್ಧ ಡಿಕೆಶಿ ವಾಗ್ದಾಳಿ

Share This Article