ಕೆ.ಆರ್.ಪೇಟೆ ರಾಜಕಾರಣದಲ್ಲಿ ನಮ್ಮ ಕುಟುಂಬ ಸ್ವಯಂಕೃತ ಅಪರಾಧ ಮಾಡಿದೆ: ಎಚ್‍ಡಿಕೆ

Public TV
2 Min Read

– ನಿಖಿಲ್ ಸ್ಪರ್ಧೆ ಇಲ್ಲ, ಮೈತ್ರಿಯೂ ಇಲ್ಲ

ಮಂಡ್ಯ: ಕೆ.ಆರ್.ಪೇಟೆ ರಾಜಕಾರಣದಲ್ಲಿ ನಮ್ಮ ಕುಟುಂಬ ಸ್ವಯಂಕೃತ ಅಪರಾಧ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅನರ್ಹಗೊಂಡಿರುವ ನಾರಾಯಣಗೌಡ ವಿರುದ್ಧ ಕಿಡಿಕಾರಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದನ್ನೂ ಮುಚ್ಚಿಟ್ಟುಕೊಳ್ಳದೇ ನೇರವಾಗಿ ಹೇಳುತ್ತೇನೆ. ನನಗೆ ಮುಖ್ಯಮಂತ್ರಿ ಅಧಿಕಾರ ಮುಖ್ಯವಲ್ಲ. ರಾಜ್ಯದ ಜನರ ಹೃದಯದ ಸ್ಥಾನದಲ್ಲಿ ನಿಲ್ಲಬೇಕೆನ್ನುವುದು ನನ್ನ ಆಸೆ. ಅತ್ಯಂತ ಸಂತೋಷದಿಂದ ಆ ಜಾಗದಿಂದ ನಿರ್ಗಮಿಸಿದೆ. ಅಂದು ಕೃಷ್ಣ ಅವರಿಗೆ ಟಿಕೆಟ್ ಕೊಡದೇ, ನಾರಾಯಣಗೌಡರ ಮಾತಿಗೆ ಮರುಳಾಗಿ ಅವರಿಗೆ ಟಿಕೆಟ್ ನೀಡಲಾಯ್ತು. ನಾರಾಯಣಗೌಡನನ್ನು ಎಂಎಲ್‍ಎ ಮಾಡಲು ನನ್ನ ತಂಗಿ ಹಳ್ಳಿ ಹಳ್ಳಿಯಲ್ಲಿ ಓಡಾಡಿದ್ದರು. ಅಂತಹ ತಂಗಿಯ ಮೇಲೆ ಆರೋಪ ಮಾಡಿದ ಕ್ರಿಮಿನಲ್ ನಾರಾಯಣಗೌಡ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವಕರಿಗೆ ದೇವೇಗೌಡರು ಮಾಡಿರುವ ಕೆಲಸ ಗೊತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಎಲ್ಲಿದ್ದೀಯಪ್ಪ ನಿಖಿಲ್ ಅಂತಾ ಅನ್ನುತ್ತಿದ್ದಾರೆ. ಬಹಳ ನೋವಿನಿಂದ ಈ ಮಾತು ಹೇಳುತ್ತಿದ್ದೇನೆ. ಕೆ.ಆರ್.ಪೇಟೆ ನಾರಾಯಣಗೌಡ ಬಗ್ಗೆ ನಾನು ಮಾತನಾಡಲ್ಲ. ಏಕೆಂದರೆ ಇದು ನಮ್ಮ ಕುಟುಂಬದ ಸ್ವಯಂಕೃತ ಅಪರಾಧ ಎಂದರು.

ಕಣ್ಣಲ್ಲಿ ನೀರು ಹಾಕಿ ಮರಳು ಮಾಡಲು ಬಂದಿಲ್ಲ, ನೋವಿನಿಂದ ಬಂದಿದ್ದೇನೆ. ಅಧಿಕಾರ ಬಿಟ್ಟಾಗ ಕಣ್ಣೀರು ಹಾಕದೇ ಸಂತೋಷವಾಗಿ ಹೊರಬಂದೆ. ಆದರೆ ನನ್ನ ಭಾವ ಮಂಜುನಾಥ್ ಸಾಮಾನ್ಯರ ಸೇವೆಗಾಗಿ ವೈದ್ಯರಾಗಿ ದುಡಿಯುತ್ತಿದ್ದಾರೆ. ಅವರ ಚಿಕಿತ್ಸೆಯಲ್ಲಿ ನನಗೆ ಎರಡನೇ ಜನ್ಮ ಸಿಕ್ಕಿದೆ. ಅವರಿಂದ ನಾನು ಉಳಿದಿದ್ದೇನೆ. ನನ್ನ ಭಾವನ ಕುಟುಂಬದ ಮಗಳನ್ನು ಮದುವೆ ಮಾಡಲು ಇವನು ಹಣ ಕೊಟ್ಟೆ ಎಂದು ಹೇಳುತ್ತಾನೆ. ಅವರು ಅಮೆರಿಕಾಗೆ ಹೋಗಿದ್ದರೆ ನೂರಾರು ಕೋಟಿ ರೂ. ದುಡಿಯುತ್ತಿದ್ದರು ಎಂದು ನಾರಾಯಣಗೌಡರ ಆರೋಪದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಕ್ಕಲಿಗ ಅಧಿಕಾರಿಗಳು ಟಾರ್ಗೆಟ್
ನಾನು ಲೋಕಸಭೆ ಚುನಾವಣೆಗೆ ನಿಲ್ಲಬೇಡಿ ಎಂದು ನಿಖಿಲ್‍ಗೆ ನಾನೇ ಹೇಳಿದ್ದೆ. ನನಗೆ ದೇವರು ಕೊಟ್ಟ ಅಧಿಕಾರ ದೇವರು ಕಿತ್ತುಕೊಂಡ, ಯಡಿಯೂರಪ್ಪ ಕಿತ್ರುಕೊಂಡರಾ ಎಂದು ಪ್ರಶ್ನಿಸಿದರು. ಅಲ್ಲದೆ, ಯಡಿಯೂರಪ್ಪ ಒಕ್ಕಲಿಗ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಒಕ್ಕಲಿಗ ಅಧಿಕಾರಿಗಳನ್ನು ಯಾವ ರೀತಿ ಚೆಂಡಾಡುತ್ತಿದ್ದೀರಿ ಅಂತಾ ಗೊತ್ತು. ರವಿಕಾಂತೇಗೌಡ ನಿಮಗೆ ಏನು ಮಾಡಿದ್ದ, ಕುಮಾರಸ್ವಾಮಿ ಅಭಿಮಾನಿ ಎಂಬ ಉದ್ದೇಶದಿಂದ ಆ ರೀತಿ ಮಾಡುತ್ತಿದ್ದೀರಿ ಎಂದು ಬಹಿರಂಗ ವೇದಿಕೆಯಲ್ಲಿ ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ನಿಖಿಲ್ ಸ್ಪರ್ಧೆ ಇಲ್ಲ, ಮೈತ್ರಿಯೂ ಇಲ್ಲ
ಉಪ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ ಇಲ್ಲ. ಕೆ.ಆರ್ ಪೇಟೆಯವರನ್ನೇ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತೇವೆ. ನನ್ನ ಮಗನಿಗೆ ವಿಷ ಹಾಕಿದ ರೀತಿ ಮತ್ತೆ ಇನ್ನೊಬ್ಬ ಅಭ್ಯರ್ಥಿಗೆ ವಿಷ ಹಾಕಬೇಡಿ. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ನಾನು ರಾಜಕೀಯ ಮಾಡಿದ್ದೇನೆ. ಹಣ ಮಾಡಿ ಯಡಿಯೂರಪ್ಪನ ರೀತಿ ಜೈಲಿಗೆ ಹೋಗಲು ಅಲ್ಲ. ಕಾರ್ಯಕರ್ತರಿಗಾಗಿ ಉಳಿದುಕೊಂಡಿದ್ದೇನೆ
ಇಲ್ಲದಿದ್ದರೆ, ಇಷ್ಟೊತ್ತಿಗೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಿದ್ದೆ. ಯಾವ ಮೈತ್ರಿಯನ್ನೂ ಮಾಡಿಕೊಳ್ಳಲ್ಲ, ಉಪಚುನಾವಣೆಗೆ ಮೈತ್ರಿ ಇಲ್ಲ ಎಂದು ಬಹಿರಂಗ ವೇದಿಕೆಯಲ್ಲಿ ಕುಮಾರಸ್ವಾಮಿ ಘೋಷಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *