ಬೆಂಗಳೂರು: ಎಲ್ಲಾ ಟ್ರಬಲ್ ಮುಗಿದು ದಾರಿ ಸುಗಮ ಅಂದುಕೊಂಡಿದ್ದ ಟ್ರಬಲ್ ಶೂಟರ್ ಗೆ ಮತ್ತೆ ಟ್ರಬಲ್ ಎದುರಾಯ್ತ. ಕೊನೆ ಗಳಿಗೆಯಲ್ಲಿ ಮತ್ತೊಂದು ರಾಜಕೀಯ ದಾಳ ಉರುಳಿಸಿ ಆಟ ಕಟ್ಟಿದ್ರ ಮಾಜಿ ಸಿಎಂ ಅನ್ನೋ ಪ್ರಶ್ನೆ ಕಾಂಗ್ರೆಸ್ ಪಡಸಾಲೆಯಲ್ಲಿ ಹುಟ್ಟಿಕೊಂಡಿದೆ. ಬೇರೆಯವರಾದರು ಓಕೆ ನಾನು ಮುಂದುವರಿಯೋದಾದರು ಓಕೆ ಅಂತ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೊಸ ದಾಳ ಉರುಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ದಿನೇಶ್ ಗುಂಡೂರಾವ್ ಎಐಸಿಸಿ ಅಧ್ಯಕ್ಷೆ ಸೋನಿಯಗಾಂಧಿಯನ್ನ ಭೇಟಿಯಾಗಿದ್ದಾರೆ. ಭೇಟಿ ಸಂದರ್ಭದಲ್ಲಿ ಆದಷ್ಟು ಬೇಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ ಇಲ್ಲದಿದ್ದರೆ ಪಕ್ಷ ಸಂಘಟನೆ ಕಷ್ಟವಾಗುತ್ತೆ ಎಂದಿದ್ದಾರೆ. ಯಾರನ್ನಾದರು ನೇಮಕ ಮಾಡಿ ಆದರೆ ಆದಷ್ಟು ಬೇಗ ಮಾಡಿ ಎಂದಿದ್ದಾರೆ. ಜೊತೆಗೆ ಬೇರೆಯವರು ಅಧ್ಯಕ್ಷರಾಗಲು ಆಸಕ್ತಿ ತೋರಿಸದಿದ್ದರೆ ಪಕ್ಷವನ್ನ ಮುನ್ನಡೆಸಲು ಸಿದ್ಧ ಎಂದಿದ್ದಾರೆ. ಆ ಮೂಲಕ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲು ನಾನು ಸಿದ್ಧ ಎಂದು ಹೈ ಕಮಾಂಡ್ ಮುಂದೆ ಹೇಳಿದ್ದಾರೆ. ಆ ಮೂಲಕ ಟ್ರಬಲ್ ಶೂಟರ್ ಡಿಕೆಶಿ ಕನಸಿಗೆ ಸಡ್ಡು ಹೊಡೆಯುವ ಯತ್ನವನ್ನು ಮಾಡಿದ್ದಾರೆ ಎನ್ನಲಾಗಿದೆ.
ಆದರೆ ಇದು ದಿನೇಶ್ ಗುಂಡೂರಾವ್ ಅವರ ಆಸೆನಾ…? ಅಥವಾ ಮಾಜಿ ಸಿಎಂ ಸಿದ್ದರಾಮಯ್ಯರ ತೆರೆಮರೆಯ ಆಟಾನಾ ಅನ್ನೋದೆ ಕೈ ನಾಯಕರ ಅನುಮಾನ. ಆದರೆ ಪಕ್ಷದ ಹಿತದ ಬಗ್ಗೆ ಹೈ ಕಮಾಂಡ್ ಬಳಿ ಮಾತನಾಡಿದ ದಿನೇಶ್ ಗುಂಡೂರಾವ್ ಕೊನೆ ಗಳಿಗೆಯಲ್ಲಿ ಕೆಪಿಸಿಸಿ ಪಟ್ಟದ ಮೇಲಿನ ತಮ್ಮ ಆಸೆಯನ್ನಂತು ಹೊರ ಹಾಕಿ ನಾನು ಈಗಲು ಕೆಪಿಸಿಸಿ ಪಟ್ಟದಲ್ಲಿ ಮುಂದುವರಿಯಲು ರೆಡಿ ಎಂದಿದ್ದಾರೆ.