ಹಿಜಬ್ ಕುರಿತು ಎಚ್ಚರಿಕೆ ಹೆಜ್ಜೆ ಇಡಲು ಕೆಪಿಸಿಸಿ ನಿರ್ಧಾರ- ಸಿಎಂಗೆ ಹಿರಿಯರ ಸಲಹೆ ಏನು..?

By
1 Min Read

ಬೆಂಗಳೂರು: ಹಿಜಬ್ ನಿಷೇಧ ಆದೇಶ ವಾಪಸ್ (Hijab Ban Withdraw) ವಿಚಾರದ ಕುರಿತು ಎಚ್ಚರಿಕೆಯ ಹೆಜ್ಜೆ ಇಡಲು ಕೆಪಿಸಿಸಿ ನಿರ್ಧರಿಸಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

ಹೈಕಮಾಂಡ್ ಬಳಿ ಚರ್ಚೆಯ ಬಳಿಕ ಕ್ಯಾಬಿನೆಟ್‍ನಲ್ಲಿ ಚರ್ಚೆಗೆ ಹಿರಿಯರು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ. ಇತ್ತ ಅವಸರ ಬೇಡ ಎಂದು ಡಿಕೆಶಿ ಪಟ್ಟು ಹಿಡಿದಿದ್ದು, ಸಿಎಂ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ.

ಸುಪ್ರೀಂಕೋರ್ಟ್ (Supreme Court) ತೀರ್ಪಿನ ಜೊತೆಗೆ ಕಾನೂನು ಸಾಧಕ-ಬಾಧಕಗಳ ಚರ್ಚೆಗೆ ಸರ್ಕಾರ ನಿರ್ಧಾರ ಮಾಡಿದೆ. ಹಿಜಬ್ ನಿಷೇಧ ವಾಪಸ್ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ಬೆನ್ನಲ್ಲೇ ನಾನಾ ಚರ್ಚೆಗಳು ಹುಟ್ಟಿಕೊಂಡಿವೆ. ಲೋಕಸಭಾ ಚುನಾವಣೆ ಮೇಲೆ ಪರಿಣಾಮದ ಆತಂಕದಿಂದ ಎಚ್ಚರಿಕೆ ಹೆಜ್ಜೆ ಇಡಲು ಸಲಹೆ ನೀಡಲಾಗಿದೆ ಎನ್ನಲಾಗಿದೆ.

ಕಾಂಗ್ರೆಸ್‍ನಲ್ಲಿ (Congress) ಒಬ್ಬೊಬ್ಬರದ್ದು ಒಂದೊಂದು ಸ್ಟ್ಯಾಂಡ್, ಹಾಗಾಗಿ ಕಾರ್ಯಕರ್ತರಿಗೂ ಗೊಂದಲವುಂಟಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮುಂದೆ ಪ್ರಸ್ತಾಪಿಸಿ ಚರ್ಚಿಸಲು ಡಿಕೆಶಿ ನಿರ್ಧಾರ ತೆಗೆದುಕೊಂಡಿದ್ದಾರೆ. ಭಾನುವಾರ ಡಿಸಿಎಂ ಡಿಕೆಶಿಯವರು ಸಿಎಂ ಜೊತೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಹೈಕಮಾಂಡ್ ತೀರ್ಮಾನದಂತೆ ಮುಂದುವರಿಯೋಣ, ಅಲ್ಲಿ ತನಕ ಅವಸರ ಬೇಡ ಎಂದು ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲ ಕ್ಯಾಬಿನೆಟ್ ಸಭೆಯಲ್ಲೂ ಚರ್ಚಿಸಿ ಬಳಿಕ ಸ್ಪಷ್ಟವಾದ ನಿರ್ಧಾರಕ್ಕೆ ಬರಲು ಸಿಎಂ, ಡಿಸಿಎಂ ಪ್ಲ್ಯಾನ್ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Share This Article