ದಲಿತರ ಮತಕ್ಕಾಗಿ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಆಯ್ಕೆ: ರಾಜಸ್ಥಾನ ಸಿಎಂ

Public TV
1 Min Read

-ಅಶೋಕ್ ಗೆಹ್ಲೋಟ್ ವಿರುದ್ಧ ಬಿಜೆಪಿ ಗರಂ

ಜೈಪುರ್: ದಲಿತರ ಮತ ಸೆಳೆಯುವ ಉದ್ದೇಶದಿಂದ ಬಿಜೆಪಿಯು ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾನಿಯವರನ್ನು ಬಿಟ್ಟು ರಾಮ್‍ನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿಯಾಗಿ ನೇಮಕ ಮಾಡಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಜಸ್ಥಾನದ ರಾಜಧಾನಿ ಜೈಪುರ್ ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯ ಬಿಜೆಪಿ ನಾಯಕರಲ್ಲಿತ್ತು. ದಲಿತರ ಮತವಿಲ್ಲದೆ ಗೆಲುವು ಸಾಧ್ಯವಿಲ್ಲ ಎಂದು ಅರಿತ ಬಿಜೆಪಿಯವರು ರಾಮ್‍ನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿಯಾಗಿ ನೇಮಕ ಮಾಡಿದರು ಎಂದು ಹೇಳಿದರು.

ಬಿಹಾರದ ರಾಜ್ಯಪಾಲರಾಗಿದ್ದ ರಾಮ್‍ನಾಥ್ ಕೋವಿಂದ್ ಅವರು ರಾಷ್ಟ್ರಪತಿಯಾಗಲು ಅನರ್ಹರಾಗಿದ್ದರು ಎಂದು ನಾನು ಹೇಳುತ್ತಿಲ್ಲ. ಬಿಜೆಪಿಯ ದಲಿತ ಮೋರ್ಚಾ ನಾಯಕರಾಗಿದ್ದರಿಂದ ರಾಮ್‍ನಾಥ್ ಕೋವಿಂದ್ ಅವರನ್ನು ಆಯ್ಕೆ ಮಾಡಿರಬಹುದು. ರಾಷ್ಟ್ರಪತಿ ಹುದ್ದೆಯು ದೇಶದ ಅತ್ಯಂತ ಉನ್ನತ ಸ್ಥಾನವಾಗಿದೆ. ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ಎಲ್.ಕೆ.ಅಡ್ವಾನಿ ಕೂಡ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಗಳಾಗಿದ್ದರು ಎಂದು ಅಶೋಕ್ ಗೆಹ್ಲೋಟ್ ತಿಳಿಸಿದರು.

ಅಶೋಕ್ ಗೆಹ್ಲೋಟ್ ಹೇಳಿಕೆಗೆ ಬಿಜೆಪಿ ಅಸಮಾಧಾನ ಹೊರಹಾಕಿದ್ದು, ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ. ಅಷ್ಟೇ ಅಲ್ಲದೆ ಅಶೋಕ್ ಗೆಹ್ಲೋಟ್ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದೆ.

ಗುಜರಾತ್ ವಿಧಾನಸಭಾ ಚುನಾವಣೆಯು 2017 ಡಿಸೆಂಬರ್ 9ರಿಂದ 14ರವರೆಗೂ ನಡೆದಿತ್ತು. ಇದಕ್ಕೂ ಮುನ್ನವೇ (2017 ಜುಲೈ 25ರಂದು) ರಾಮ್‍ನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿಯಾಗಿ ನೇಮಕ ಮಾಡಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *