ಭಾರತ, ಪಾಕ್ ನಡ್ವೆ ಸಂಘರ್ಷದ ಸಿಎಂ ಹೇಳಿಕೆ – ನಿಂಬೆಹಣ್ಣು ಕೊಟ್ಟು ರೇವಣ್ಣ ಹೇಳಿರ್ಬೇಕು: ಶ್ರೀನಿವಾಸ್ ಪೂಜಾರಿ ವ್ಯಂಗ್ಯ

Public TV
1 Min Read

ಉಡುಪಿ: ಭಾರತ, ಪಾಕಿಸ್ತಾನದ ನಡುವಿನ ಸಂಘರ್ಷ ಬಗ್ಗೆ 2 ವರ್ಷದ ಹಿಂದೆಯೇ ತಿಳಿದಿತ್ತು ಎಂಬ ಸಿಎಂ ಕುಮಾರಸ್ವಾಮಿ ಅವರ ಹೇಳಿಗೆ ಕೌಂಟರ್ ಕೊಟ್ಟಿರುವ ಬಿಜೆಪಿ ನಾಯಕ, ವಿಧಾನ ಪರಿಷತ್ ವಿಪಕ್ಷ ನಾಯಕ ಶ್ರೀನಿವಾಸಪೂಜಾರಿ ಅವರು, ನಿಂಬೆಹಣ್ಣು ಕೊಟ್ಟು ರೇವಣ್ಣ ಭವಿಷ್ಯ ಹೇಳಿರ ಬೇಕು ಎಂದು ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ನೀಚ ಚಟುವಟಿಕೆ ಮಾಡುತ್ತಿದ್ದಾರೆ. ನಿಮ್ಮಣ್ಣ ರೇವಣ್ಣ ಪಾಕ್ ಸಂಘರ್ಷದ ಬಗ್ಗೆ ಭವಿಷ್ಯ ಹೇಳಿದ್ದರಾ? ಎಡಗೈಯ್ಯಲ್ಲಿ ನಾಲ್ಕು, ಬಲಗೈಯ್ಯಲ್ಲಿ ನಾಲ್ಕು ನಿಂಬೆ ಹಿಡಿದುಕೊಂಡು ಭವಿಷ್ಯ ಹೇಳಿರಬಹುದು ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಜವಾಬ್ದಾರಿ ಮತ್ತು ಹೊಣೆಗಾರಿಕೆಯಿಂದ ವರ್ತಿಸಬೇಕು. ಪುಲ್ವಾಮ ಘಟನೆ ಬಗ್ಗೆ ಮೊದಲೇ ಗೊತ್ತಿದ್ದರೆ ಎರಡು ವರ್ಷದ ಹಿಂದೇನೆ ಹೇಳಬೇಕಿತ್ತು. ಈಗ ಚುನಾವಣೆ ಸಂದರ್ಭದಲ್ಲಿ ಹೇಳುವ ಅಗತ್ಯ ಏನಿತ್ತು? ರಾಜ್ಯದಲ್ಲಿ ಮೈತ್ರಿಯೆಂಬ ತೇಪೆಯೊಳಗೆ ಎಲ್ಲಾ ಒಡೆದಿದೆ. ಮಂಡ್ಯದಲ್ಲಿ ಗೆಲ್ಲುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ಗೊತ್ತಾಗಿದೆ. ತುಮಕೂರು, ಹಾಸನ ಗೆಲುವು ಕೂಡ ಕಷ್ಟವಿದೆ ಎಂದು ಅವರಿಗೆ ಅರಿವಾಗಿದೆ. ಜೆಡಿಎಸ್ ನ ಕೌಟುಂಬಿಕ ರಾಜಕಾರಣದ ಕೊನೆಯ ದಿನಗಳು ನಡೆಯುತ್ತಿದೆ ಎಂದು ಟೀಕೆ ಮಾಡಿದರು.

ಇದೇ ವೇಳೆ ಎಚ್‍ಡಿಡಿ ಆಪ್ತ ಶಿವಮೊಗ್ಗದ ಪರಮೇಶ್ ಅವರ ಮನೆಗೆ ಐಟಿ ದಾಳಿ ಪ್ರಕರಣ ಬಗ್ಗೆ ಪ್ರತಿಕ್ರಿಯೆ ನೀಡಿ, ಪರಮೇಶ್ವರ್, ದೇವೇಗೌಡ ಕುಟುಂಬದ ಆತ್ಮೀಯ ಸಂಬಂಧಿ. ದಾಳಿಯಲ್ಲಿ ಆರು ಕೋಟಿ ನಗದು ಸೇರಿದಂತೆ 10 ಕೋಟಿ ಮೌಲ್ಯದ ಸ್ವತ್ತು ವಶವಾಗಿದೆ. ಗುತ್ತಿಗೆದಾರರಿಂದ ಸಂಗ್ರಹಿಸಿದ ಹಣ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಸಿಎಂ ಐಟಿ ದಾಳಿಯಲ್ಲಿ ಏನೂ ಸಿಕ್ಕಿಲ್ಲ ಎಂದಿದ್ದಾರೆ. ಈಗ ಇದಕ್ಕೆ ಸಿಎಂ ಏನು ಹೇಳುತ್ತಾರೆ ಎಂದು ಪ್ರಶ್ನೆ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *