ವಿರುಪಾಪುರ ಗಡ್ಡೆಯಲ್ಲಿ ಅಕ್ರಮ ರೆಸಾರ್ಟ್‍ಗಳ ತೆರವು ಕಾರ್ಯಾಚರಣೆ

Public TV
1 Min Read

– ಅಧಿಕಾರಿಗಳ ಮುಂದೆ ಕೈ ಮುಗಿದ ಕಣ್ಣೀರಿಟ್ಟ ಮಾಲೀಕರು

ಕೊಪ್ಪಳ: ವಿದೇಶಿಗರ ಸ್ವರ್ಗ ಎನಿಸಿಕೊಂಡಿರುವ ಕೊಪ್ಪಳದ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ರೆಸಾರ್ಟ್ ಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ.

ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 25ಕ್ಕೂ ಹೆಚ್ಚು ಅಕ್ರಮ ರೆಸಾರ್ಟ್ ತೆರವು ಕಾರ್ಯಾಚರಣೆ ಪ್ರಾರಂಭವಾಗಿದ್ದು, ಫೆಬ್ರವರಿ 11ರಂದು ಒಂದು ತಿಂಗಳ ಒಳಗೆ ತೆರವು ಮಾಡಲು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ರೆಸಾರ್ಟ್ ಮಾಲೀಕರು ಮೇಲ್ಮನವಿ ಸಲ್ಲಿಸಿದ್ದರ ಹಿನ್ನೆಲೆಯಲ್ಲಿ ಫೆಬ್ರವರಿ 24ರವರೆಗೆ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ತಡೆಯಾಜ್ಞೆ ತೆರವಾದ ಹಿನ್ನೆಲೆಯಲ್ಲಿ ಇಂದು ಅಕ್ರಮ ರೆಸಾರ್ಟ್ ತೆರವು ಕಾರ್ಯಾಚರಣೆ ಆರಂಭವಾಗಿದ್ದು, ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಹಾಗೂ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಮತ್ತು ಎಸ್‍ಪಿ ಜಿ ಸಂಗೀತಾ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ರೆಸಾರ್ಟ್‍ಗಳ ತೆರವು ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ವಿರುಪಾಪುರಗಡ್ಡೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ತೆರವು ಮಾಡುವ ವೇಳೆ ವಿರುಪಾಪುರ ಗಡ್ಡೆ ನಿವಾಸಿಗಳು ಮನೆಗಳ ತೆರವು ಮಾಡದಂತೆ ಜಿಲ್ಲಾಧಿಕಾರಿಯನ್ನು ಕೈ ಮುಗಿದು ಬೇಡಿಕೊಂಡು ಕಣ್ಣೀರು ಹಾಕಿದರು. ಆದರೆ ಜಿಲ್ಲಾಧಿಕಾರಿ ಮಾತ್ರ ಯಾವುದೇ ಸೊಪ್ಪು ಹಾಕದೆ ತೆರವು ಕಾರ್ಯಾಚರಣೆ ಮುಂದುವರಿಸಿದರು.

ತಡೆ ನೀಡಲ್ಲ:
ವಿರುಪಾಪುರ ಗಡ್ಡೆಯಲ್ಲಿ ಅಕ್ರಮ ರೆಸಾರ್ಟ್‍ಗಳ ತೆರವು ಕಾರ್ಯ ಸಂಬಂಧ ಸುಪ್ರೀಂಕೋರ್ಟಿನಲ್ಲಿ ತೆರವು ಕಾರ್ಯಕ್ಕೆ ತಡೆ ನೀಡುವಂತೆ ನ್ಯಾ. ಮೋಹನ ಶಾಂತಗೌಡರ್ ನೇತೃತ್ವದ ದ್ವಿಸದಸ್ಯ ಪೀಠದೆದರು ರೆಸಾರ್ಟ್ ಮಾಲೀಕರ ಪರವಾಗಿ ವಕೀಲ ಸಂಜಯ್ ನೂಲಿ ಮನವಿ ಮಾಡಿದರು.

ರೆಸಾರ್ಟ್‍ಗಳ ಜೊತೆಯಲ್ಲಿ ಮನೆಗಳಿದ್ದು ಜನರಿಗೆ ತೊಂದರೆಯಾಗಲಿದೆ. ಕೆಲ ಕಾಲ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ವಿಚಾರಣೆ ವೇಳೆ ಯಾವುದೇ ಕಾರಣಕ್ಕೂ ತಡೆ ನೀಡಲು ಸಾಧ್ಯವಿಲ್ಲ ಪೀಠ ಸ್ಪಷ್ಟವಾಗಿ ತಿಳಿಸಿತು.

Share This Article
Leave a Comment

Leave a Reply

Your email address will not be published. Required fields are marked *